ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷ ಎಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಸಹಿಸುವುದಿಲ್ಲ.. JDS ಜೊತೆಗಿನ ಮೈತ್ರಿ ಬಳಿಕ ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಬಯಲಾಗಿದ್ದು, ಕಾಂಗ್ರೆಸ್ ಗೆ ಹಗರಣದ ಬಗ್ಗೆ ಮೊದಲೇ ತಿಳಿದಿತ್ತು.. 'ಒಕ್ಕಲಿಗ ಬೆಲ್ಟ್' ಮತದಾನದ ಬಳಿಕ ವಿಡಿಯೋ ಬಿಡುಗಡೆ ಮಾಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2024ರ ನಿಮಿತ್ತ ಕರ್ನಾಟಕದ ಹುಬ್ಬಳ್ಳಿಯಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ,'ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣದ ವಿಚಾರವಾಗಿ ಕಾಂಗ್ರೆಸ್ ಪಕ್ಷ ಇಲ್ಲ-ಸಲ್ಲದ ಆರೋಪಗಳನ್ನು ಮಾಡುತ್ತಿದೆ.
ನಾನು ಈ ಮೂಲಕ ಜನತೆಗೆ ಸ್ಪಷ್ಟಪಡಿಸುವುದೇನೆಂದರೆ. ಭಾರತೀಯ ಜನತಾ ಪಕ್ಷ ಎಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಸಹಿಸುವುದಿಲ್ಲ.. ಬಿಜೆಪಿ ಎಂದಿಗೂ ಮಹಿಳೆಯರ ಮೇಲಿನ ದೌರ್ಜನ್ಯದ ಆರೋಪಿಗಳ ಜೊತೆಗೆ ನಿಲ್ಲುವುದಿಲ್ಲ. JDS ಜೊತೆಗಿನ ಮೈತ್ರಿ ಬಳಿಕ ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣ ಬಯಲಾಗಿದೆ ಎಂದು ಹೇಳಿದರು.
"ಸದ್ಯ ನಾವು ಜೆಡಿ (ಎಸ್) ನೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಮೈತ್ರಿ ಮಾಡಿಕೊಂಡ ಬಳಿಕ ರೇವಣ್ಣ ಅವರ ಪ್ರಕರಣವು ಬೆಳಕಿಗೆ ಬಂದಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರೇ, ಕರ್ನಾಟಕದಲ್ಲಿ ನಿಮ್ಮದೇ ಸರ್ಕಾರ ಇದೆ... ನೀವೇ ಕ್ರಮ ಕೈಗೊಳ್ಳಬೇಕು. ಒಕ್ಕಲಿಗರ ಪ್ರಾಬಲ್ಯ ಇರುವ ಪ್ರದೇಶದಲ್ಲಿ ಮತದಾನ ಮುಗಿಯುವವರೆಗೂ ಈ ವಿಚಾರ ಬೆಳಕಿಗೆ ಬರಲಿಲ್ಲ. ಚುನಾವಣೆ ಮುಕ್ತಾಯವಾಗುತ್ತಿದ್ದಂತೆಯೇ ಪೆನ್ ಡ್ರೈವ್ ಪ್ರಕರಣ ಹೊರಗೆ ಬರಲು ಕಾರಣವೇನು? ಅದನ್ನು ಈಗ ಏಕೆ ಬಯಲು ಮಾಡಲಾಯಿತು?
ಇದಕ್ಕೂ ಮೊದಲು ನಿಮಗೆ, ನಿಮ್ಮ ಸರ್ಕಾರಕ್ಕೆ ಮತ್ತು ನಿಮ್ಮ ಪೊಲೀಸ್ ಇಲಾಖೆಗೆ ಈ ಬಗ್ಗೆ ತಿಳಿದಿರಲಿಲ್ಲವೇ? ಆಗ ಏಕೆ ಕ್ರಮಕ್ಕೆ ಮುಂದಾಗಲಿಲ್ಲ? ಕ್ರಮ ಕೈಗೊಳ್ಳಬೇಕಿದ್ದ ನೀವೇ ರಾಜಕೀಯ ಮಾಡಿದ್ದೀರಿ... ನಿಮಗೆ ಧೈರ್ಯವಿದ್ದರೆ ನಿಜ ಹೇಳಿ.., ನಿಮ್ಮಿಂದಾಗಿ ಘೋರ ಅಪರಾಧ ಎಸಗಿದ ವ್ಯಕ್ತಿ (ಪ್ರಜ್ವಲ್ ರೇವಣ್ಣ) ತಪ್ಪಿಸಿಕೊಂಡಿದ್ದಾನೆ... ಅವರು (ಜೆಡಿ(ಎಸ್) ನಮ್ಮ ಮಿತ್ರರಾಗಿದ್ದರೂ ನಮ್ಮ ನಿಲುವು ಸ್ಪಷ್ಟವಾಗಿದ್ದು, ಇಂತಹ ಅಪರಾಧಗಳನ್ನು ಮಾಡುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಅಮಿತ್ ಶಾ ಗುಡುಗಿದರು.
ಕಾಂಗ್ರೆಸ್ ಗೆ ಮೊದಲೇ ತಿಳಿದಿತ್ತು
ಇದೇ ವೇಳೆ ಪ್ರಜ್ವಲ್ ರೇವಣ್ಣ ಹಗರಣದ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ಮೊದಲೇ ತಿಳಿದಿತ್ತು ಎಂದು ಆರೋಪಿಸಿರುವ ಅಮಿತ್ ಶಾ, ಉದ್ದೇಶಪೂರ್ವಕವಾಗಿಯೇ ಇದನ್ನು ಕರ್ನಾಟಕದ ಪ್ರಬಲ ಒಕ್ಕಲಿಗ ಬೆಲ್ಟ್ ನಲ್ಲಿ ಮತದಾನ ಮುಕ್ತಾಯದ ಬಳಿಕ ಬಿಡುಗಡೆ ಮಾಡಿದೆ. ಕಾಂಗ್ರೆಸ್ ಸರ್ಕಾರ ತನ್ನ ರಾಜಕೀಯ ಲೆಕ್ಕಾಚಾರದಿಂದ ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಮತದಾನದವರೆಗೂ ಕ್ರಮಕ್ಕಾಗಿ ಕಾಯುತ್ತಿತ್ತು. "ಕರ್ನಾಟಕದಲ್ಲಿ ಯಾರ ಸರ್ಕಾರ ಇದೆ? ಕಾಂಗ್ರೆಸ್ ಪಕ್ಷದ್ದು.
ಕಾನೂನು ಸುವ್ಯವಸ್ಥೆ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿ. ಸೆಕ್ಸ್ ಹಗರಣದ ಬಗ್ಗೆ ತಿಂಗಳಿನಿಂದ ಅವರಿಗೆ ವಿಷಯ ತಿಳಿದಿತ್ತು. ಆದರೆ ಒಕ್ಕಲಿಗ ಬೆಲ್ಟ್ ನಲ್ಲಿ ಮತದಾನ ಮುಗಿಯುವವರೆಗೂ ಅದು ಹೊರಗೆ ಬರಲಿಲ್ಲ. ಅವರು ಆರೋಪಿ ಓಡಿಹೋಗಲು ಬಿಟ್ಟರು. ಇದಕ್ಕೆ ಕರ್ನಾಟಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್, ಗೃಹಸಚಿವ ಪರಮೇಶ್ವರ್ ಅವರೇ ಜವಾಬ್ದಾರರು" ಎಂದು ಶಾ ಆರೋಪಿಸಿದರು.
Advertisement