ಬೆಂಗಳೂರು: ಲೈಂಗಿಕ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ದೇಶದಿಂದ ಪರಾರಿಯಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗಾಗಿ ಎಸ್ಐಟಿ ವಿದೇಶದಲ್ಲಿ ಹುಡುಕಾಟವನ್ನು ತೀವ್ರಗೊಳಿಸಿದ್ದು, ಪ್ರಕರಣದ ಇನ್ನೂ ಮೂವರು ಸಂತ್ರಸ್ತೆಯರು ಎಸ್ಐಟಿಯನ್ನು ಸಂಪರ್ಕಿಸಿದ್ದಾರೆ ಎಂದು ಮೂಲಗಳು ಭಾನುವಾರ ತಿಳಿಸಿವೆ.
ಶನಿವಾರ ಶಾಸಕ ಎಚ್ಡಿ ರೇವಣ್ಣ ಅವರ ಬಂಧನದ ಬಳಿಕ ಸಂತ್ರಸ್ತರು ಎಸ್ಐಟಿ ಮೊರೆ ಹೋಗಿದ್ದು, ಶೀಘ್ರದಲ್ಲೇ ಅವರು ತಮ್ಮ ಹೇಳಿಕೆಯನ್ನು ದಾಖಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬರಬೇಕಿದೆ.
ತಮ್ಮ ತಂದೆ ಜೆಡಿಎಸ್ ಶಾಸಕ ಎಚ್ಡಿ ರೇವಣ್ಣ ಬಂಧನದ ಬೆನ್ನಲ್ಲೇ, ಅಶ್ಲೀಲ ವಿಡಿಯೋ ಹಗರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಶೀಘ್ರದಲ್ಲೇ ಅಧಿಕಾರಿಗಳ ಮುಂದೆ ಶರಣಾಗುವ ಸಾಧ್ಯತೆಯಿದೆ.
ಪ್ರಜ್ವಲ್ ರೇವಣ್ಣ ಅವರ ಚಲನವಲನಗಳ ಬಗ್ಗೆ ಸಂಗ್ರಹಿಸಿದ ಮಾಹಿತಿ ಆಧಾರದ ಮೇಲೆ ಎಸ್ಐಟಿ ತಂಡ ಈಗಾಗಲೇ ವಿದೇಶಕ್ಕೆ ಬಂದಿಳಿದಿದ್ದು, ಸ್ಥಳೀಯ ಸಂಸ್ಥೆಗಳು ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ಸಮನ್ವಯದಲ್ಲಿ ಅವರನ್ನು ಬಂಧಿಸಲಿದೆ ಎಂದು ಮೂಲಗಳು ತಿಳಿಸಿವೆ. ಎಸ್ಐಟಿ ಟ್ರ್ಯಾಕಿಂಗ್ ಪ್ರಕಾರ ಪ್ರಜ್ವಲ್ ಅವರು ಹಂಗೇರಿಯ ಬುಡಾಪೆಸ್ಟ್ನಲ್ಲಿರುವುದು ಪತ್ತೆಯಾಗಿದೆ. ಪ್ರಜ್ವಲ್ ರೇವಣ್ಣ ಪದೇ ಪದೇ ಸ್ಥಳ ಬದಲಾಯಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜ್ವಲ್ ರೇವಣ್ಣ ಅವರು ಭಾನುವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದರೆ, ಲೋಕಸಭೆ ಚುನಾವಣೆ ನಂತರವೇ ಪ್ರಜ್ವಲ್ ರೇವಣ್ಣ ವಾಪಸ್ ಬರುತ್ತಾರೆ ಎಂಬ ಮಾಹಿತಿಯೂ ನಮ್ಮ ಬಳಿ ಇದೆ ಎಂದು ಎಸ್ಐಟಿ ಮೂಲಗಳು ತಿಳಿಸಿದ್ದು, ತಪ್ಪು ಮಾಹಿತಿ ಹರಡಲಾಗುತ್ತಿದೆ. ಈ ಮಧ್ಯೆ ಎಸ್ಐಟಿ ದೇಶದ ವಿಮಾನ ನಿಲ್ದಾಣಗಳಲ್ಲಿ ಹೆಚ್ಚಿನ ನಿಗಾವಹಿಸಿದೆ.
ಅಪಹರಣಕ್ಕೀಡಾಗಿದ್ದ ಮನೆ ಕೆಲಸದಾಕೆಯನ್ನು SIT ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಎಸ್ಐಟಿ ಮತ್ತೊಂದು ಎಫ್ಐಆರ್ ದಾಖಲಿಸುವ ಸಾಧ್ಯತೆಯಿದೆ. ಹೆಚ್ಡಿ ರೇವಣ್ಣ ಅವರ ಪಿಎ ರಾಜಗೋಪಾಲ್ ಅವರ ಮೈಸೂರಿನ ಹುಣಸೂರು ತಾಲೂಕಿನ ಕಾಳೇನಹಳ್ಳಿಯ ತೋಟದ ಮನೆಯಿಂದ ರಕ್ಷಿಸಲ್ಪಟ್ಟ ನಂತರ ಆಕೆ ಎಸ್ಐಟಿ ವಶದಲ್ಲಿದ್ದಾರೆ.
ಆಪಾದಿತ ವಿಡಿಯೋದಲ್ಲಿ ರಕ್ಷಿಸಲ್ಪಟ್ಟ ಮಹಿಳೆ ಇರುವುದು ಕಂಡುಬಂದಿದೆ. ಮಹಿಳೆ ಜೋರಾಗಿ ಅಳುತ್ತಿದ್ದರೂ ಮತ್ತು ಅಂತಹ ಕೃತ್ಯದಲ್ಲಿ ತೊಡಗಬೇಡಿ ಎಂದು ಪದೇ ಪದೆ ಮನವಿ ಮಾಡಿದರೂ, ಪ್ರಜ್ವಲ್ ರೇವಣ್ಣ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮಹಿಳೆ ಅವರ ಪಾದಗಳನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ತಾನು ಅಡುಗೆ ಮಾಡಿದ್ದೇನೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಊಟ ಬಡಿಸಿದ್ದೇನೆ. ತನಗೆ ಈ ರೀತಿ ಮಾಡಬಾರದು ಎಂದು ಬೇಡಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
Advertisement