ಧಾರವಾಡ: ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಹೈಕೋರ್ಟ್ ಅನುಮತಿ ಮೇರೆಗೆ ಮಂಗಳವಾರ ಧಾರವಾಡಕ್ಕೆ ಪ್ರವೇಶಿಸಿ ತಮ್ಮ ಮತಹಕ್ಕು ಚಲಾಯಿಸಿದರು.
ಸಪ್ತಾಪುರದ ಮತಗಟ್ಟೆ ಬಳಿ ಶಾಸಕರು ಕುಟುಂಬ ಸಮೇತರಾಗಿ ಬಂದು ಮತಹಕ್ಕು ಚಲಾಯಿಸಿದರು. ವಿನಯ್ ಕುಲಕರ್ಣಿ ಧಾರವಾಡಕ್ಕೆ ಕಾಲಿಡುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿದರು.
2016ರ ಜೂನ್ನಲ್ಲಿ ನಡೆದ ಜಿಪಂ ಸದಸ್ಯ ಯೋಗೀಶ್ಗೌಡ ಗೌಡರ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಸುಪ್ರೀಂ ಕೋರ್ಟ್ ಧಾರವಾಡ ಪ್ರವೇಶಕ್ಕೆ ತಡೆ ನೀಡಿದ್ದರಿಂದ ವಿನಯ್ ಅವರು ನಾಲ್ಕು ವರ್ಷಗಳ ಬಳಿಕ ಜಿಲ್ಲೆ ಪ್ರವೇಶಿಸಿದ್ದಾರೆ.
ಧಾರವಾಡ ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಆರೋಪದಲ್ಲಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿದ್ದ ವಿನಯ ಕುಲಕರ್ಣಿಗೆ ಸುಪ್ರೀ ಕೋರ್ಟ್ ಜಾಮೀನು ನೀಡಿತ್ತು. ಧಾರವಾಡ ಜಿಲ್ಲೆ ಪ್ರವೇಶ ಮಾಡಬಾರದು ಎಂಬ ಷರತ್ತನ್ನು ಸರ್ವೋಚ್ಚ ನ್ಯಾಯಾಲಯ ವಿಧಿಸಿತ್ತು.
ಬಳಿಕ ಮತದಾನ ಮಾಡಲು ಧಾರವಾಡ ಜಿಲ್ಲೆ ಪ್ರವೇಶ ಮಾಡಲು ಅನುಮತಿ ನೀಡುವಂತೆ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೋಮವಾರ ತಿರಸ್ಕರಿಸಿತ್ತು. ಹೀಗಾಗಿ, ಹೈಕೋರ್ಟ್ ಅವರು ಮೊರೆ ಹೋಗಿದ್ದರು. ಈ ಮನವಿಯನ್ನು ಹೈಕೋರ್ಟ್ ಪರಿಗಣಿಸಿ, ಮತ ಚಲಾಯಿಸಲು ಜಿಲ್ಲೆ ಪ್ರವೇಶಿಸುವಂತೆ ಅನುಮತಿ ನೀಡಿತ್ತು.
ವಿನಯ್ ಕುಲಕರ್ಣಿ ಮತ ಚಲಾಯಿಸಿ ಮತದಾನ ಕೇಂದ್ರದಿಂದ ತೆರಳಬೇಕು. ಧಾರವಾಡ ಜಿಲ್ಲೆ ಬಿಟ್ಟು ಹೊರಗೆ ಹೋಗಬೇಕು. ಈ ವೇಳೆ ಯಾವುದೇ ಸಮಸ್ಯೆ ಸೃಷ್ಟಿಸಬಾರದು ಎಂದು ಎಚ್ಚರಿಕೆಯನ್ನೂ ನೀಡಿತ್ತು.
ಮತಹಕ್ಕು ಚಲಾಯಿಸಿದ ಬಳಿಕ ಮಾತನಾಡಿದ ಕುಲಕರ್ಣಿಯವರು, ಜಿಲ್ಲೆಯಲ್ಲಿ ಎರಡು ಗಂಟೆಯಾದರೂ ಬಂದಿರುವುದು ಸಂತಸ ತಂದಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಲಿಂಗಾಯತ ಮುಖಂಡರು ನಮಗೆ ಆಶೀರ್ವಾದ ಮಾಡಿದ್ದಾರೆ. ನನಗೆ ಮತದಾನ ಮಾಡಲು ಅವಕಾಶ ನೀಡಿದ ನ್ಯಾಯಾಲಯಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆಂದು ಹೇಳಿದರು.
Advertisement