ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ದಾರಿ ತಪ್ಪುತ್ತಿದೆ ಎಂದು ಆರೋಪಿಸಿ ಜೆಡಿಎಸ್ ಗುರುವಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿತು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ.ಕುಮಾರಸ್ವಾಮಿ ನೇತೃತ್ವದಲ್ಲಿನ ನಿಯೋಗ ರಾಜಭವನದಲ್ಲಿಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಿತು.
ಇದಕ್ಕೂ ಮುನ್ನಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ರಚಿಸಿರುವ ಎಸ್ಐಟಿ ತನಿಖೆಯ ಪ್ರಗತಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದರು. ಹೆಚ್.ಡಿ. ರೇವಣ್ಣ ವಿರುದ್ಧದ ಮಹಿಳೆ ಅಪಹರಣ ಪ್ರಕರಣದ ತನಿಖೆ ಕುರಿತು ಚಕಾರ ಎತ್ತಿದ ಕುಮಾರಸ್ವಾಮಿ, ಕಿಡ್ನಾಪ್ ಆಗಿರುವ ಮಹಿಳೆಯನ್ನು ರಕ್ಷಿಸಿದ ನಂತರ ಈವರೆಗೂ ನ್ಯಾಯಾಲಯಕ್ಕೆ ಏಕೆ ಹಾಜರುಪಡಿಸಿಲ್ಲ ಎಂದು ಪ್ರಶ್ನಿಸಿದರು.
''ತನಿಖೆ ಹೇಗೆ ಹಾದಿ ತಪ್ಪುತ್ತಿದೆ ಎಂದು ರಾಜ್ಯಪಾಲರಿಗೆ ದೂರು ನೀಡುತ್ತಿದ್ದೇವೆ. ತಪ್ಪು ಮಾಡಿದವರು ಯಾರೇ ಆಗಲಿ ಶಿಕ್ಷೆ ಅನುಭವಿಸಲೇಬೇಕು ಎಂದು ಮೊದಲ ದಿನದಿಂದ ಹೇಳುತ್ತಲೇ ಬಂದಿದ್ದೇನೆ, ನಡೆಯುತ್ತಿರುವ ತನಿಖೆ ರೀತಿ ನೋಡಿದರೆ ಇವರು ಯಾರು ಶಿಕ್ಷೆ ಬಯಸುತ್ತಿಲ್ಲ ಬದಲಿಗೆ ಪ್ರಚಾರ ಬಯಸಿದ್ದಾರೆ ಅನಿಸುತ್ತಿದೆ. ತನಿಖೆ ಆರಂಭವಾದಾಗಿನಿಂದಲೂ ಏನು ಪ್ರಗತಿಯಾಗಿದೆ ಎಂದು ಟೀಕಿಸಿದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪಹರಣಕ್ಕೊಳಗಾದ ಮಹಿಳೆಯ ಕುಟುಂಬವನ್ನು ಇಲ್ಲಿಯೇ ಇರಿಸಲಾಗಿದೆ ಎಂಬ ಮಾಹಿತಿ ಇದೆ. ಇದುವರೆಗೂ ಮಹಿಳೆಯನ್ನು ಏಕೆ ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ಪ್ರಶ್ನಿಸಿದರು.
"ಅಪಹರಣಕ್ಕೊಳಗಾದ ಮಹಿಳೆಯನ್ನು ಇಲ್ಲಿಗೆ ಕರೆತಂದು ಎಷ್ಟು ದಿನಗಳಾಗಿವೆ? ಸಿಆರ್ಪಿಸಿಯ ಸೆಕ್ಷನ್ 164ರ ಅಡಿಯಲ್ಲಿ ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆಯೇ? ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆಯೇ? ಐದು ದಿನ ಕಳೆದರೂ ಮಹಿಳೆಯನ್ನು ಯಾಕೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿಲ್ಲ, ಮಾಧ್ಯಮಗಳಲ್ಲಿ ವರದಿ ಮಾಡಿದಂತೆ ಆಕೆಯನ್ನು ಯಾವುದಾದರೂ ಫಾರ್ಮ್ಹೌಸ್ನಿಂದ ಕರೆತರಲಾಗಿದೆಯೇ? ಎಂದು ಪ್ರಶ್ನಿಸಿದರು.
ಎಸ್ಐಟಿ ಈ ಮಾಹಿತಿಯನ್ನು ಇಲ್ಲಿಯವರೆಗೆ ಏಕೆ ಹಂಚಿಕೊಂಡಿಲ್ಲ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಮಹಿಳೆಯನ್ನು ಇಲ್ಲಿಗೆ ಕರೆತಂದು ಐದು ದಿನಗಳು ಕಳೆದಿವೆ ಮತ್ತು ರೇವಣ್ಣ ಅವರು ಅಪಹರಣಕ್ಕೆ ಕಾರಣರೇ ಅಥವಾ ಇಲ್ಲವೇ ಎಂಬ ಬಗ್ಗೆ ಅವರು ಏನನ್ನೂ ಹೇಳಿಲ್ಲ ಎಂದು ಹೇಳಿದರು. “ಸತ್ಯವನ್ನು ನ್ಯಾಯಾಲಯದ ಮುಂದೆ ಹೇಳಲು ಯಾಕೆ ಬಿಡುತ್ತಿಲ್ಲ? ಎಸ್ ಐಟಿ ತಮ್ಮ ಆಕ್ಷೇಪಣೆ ಸಲ್ಲಿಸಲು ಸೋಮವಾರದವರೆಗೆ ಸಮಯ ಕೇಳಿದ್ದಾರೆ. ಅಂದರೆ ರೇವಣ್ಣ ಅವರನ್ನು ಇನ್ನೂ ಮೂರು ದಿನ ಜೈಲಿನಲ್ಲಿ ಇಡಲು ಬಯಸುತ್ತಾರೆ. ಕಾಂಗ್ರೆಸ್ ನಾಯಕರು ತಮ್ಮ ದ್ವೇಷವನ್ನು ಪೂರೈಸಿಕೊಳ್ಳಲು ಬಯಸುತ್ತಿದ್ದಾರೆ. ಹೀಗಾಗಿ ಅವರು ತಪಿತಸ್ಥರಿಗೆ ಶಿಕ್ಷೆಯಾಗಲು ಬಯಸುತ್ತಿಲ್ಲ. "ಜೂನ್ 4 ರ ವಿವಾದ ಕೊನೆಗೊಳ್ಳುತ್ತದೆ ಎಂದು ನನಗೆ ತಿಳಿದಿಲ್ಲ ಎಂದರು.
ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ ಎನ್ನಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಹೌದು ನಾನೇ ನಿರ್ಮಾಪಕ, ನಿರ್ದೇಶಕ ಹಾಗೂ ಕಥೆಯ ನಾಯಕ ಕೂಡ ನಾನೇ... ಶಿವಕುಮಾರ್ ಕಥೆಗೆ ನಾನೇ ನಾಯಕನಾಗಬೇಕು. ಅವರು ನನ್ನನ್ನು ಕಥೆಯ ನಾಯಕನನ್ನಾಗಿ ಒಪ್ಪಿಕೊಂಡಿದ್ದಾರೆ ಎಂಬುದು ನನಗೆ ಸಂತೋಷವಾಗಿದೆ ಎಂದರು. ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಹಿಂದೆ ಕುಮಾರಸ್ವಾಮಿ ಇದ್ದಾರೆ. ಅವರೇ ಈ ಸ್ಟೋರಿಯ ನಿರ್ದೇಶಕ, ನಿರ್ಮಾಪಕ, ಕಥಾ ನಾಯಕರು ಎಂದು ಡಿಕೆ ಶಿವಕುಮಾರ್ ಬುಧವಾರ ಹೇಳಿದ್ದರು.
Advertisement