
ಬೆಂಗಳೂರು: ಮಹಿಳೆಯೊಬ್ಬರು ಗೃಹ ಲಕ್ಷ್ಮಿ ಯೋಜನೆಯ ಹಣ ಬಳಸಿಕೊಂಡಿದ್ದು, ತನ್ನ ನಾಲ್ವರು ಹೆಣ್ಣು ಮಕ್ಕಳ ಉದ್ಯೋಗಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಗ್ರಾಮದ ನಿವಾಸಿ ಗಂಗವ್ವ ಬಿರಾದಾರ ಎಂಬ ಮಹಿಳೆ ಗೃಹಲಕ್ಷ್ಮಿ ಯೋಜನೆಯ 12 ತಿಂಗಳ ರೂ. 24,000 ಹಣ ಕೂಡಿಟ್ಟು ಹೊಲಿಗೆ ಯಂತ್ರ ಖರೀದಿಸಿ, ತನ್ನ ಹೆಣ್ಣುಮಕ್ಕಳಿಗೆ ಹೊಲಿಗೆ ತರಬೇತಿ ನೀಡುವ ಮೂಲಕ ಬದುಕು ರೂಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ಬಡತನದಲ್ಲೂ ಸ್ವಾವಲಂಬಿ ಬದುಕಿನ ಕನಸು ಕಾಣುತ್ತಿರುವ ಹೆಣ್ಣುಮಕ್ಕಳಿಗೆ ನೆರವಾಗುವುದೇ ನಮ್ಮ ಯೋಜನೆಯ ಉದ್ದೇಶವೂ ಆಗಿದೆ ಎಂದಿದ್ದಾರೆ.
ಇದು ನನ್ನ ರಾಜಕೀಯ ಬದುಕಿನ ಮತ್ತೊಂದು ಸಾರ್ಥಕ ಕ್ಷಣ. ನಮ್ಮ ಗ್ಯಾರಂಟಿಗಳ ಬಗ್ಗೆ ದೇಶದ ಪ್ರಧಾನಿಯೇ ಅಪಪ್ರಚಾರಕ್ಕೆ ಇಳಿದಿರುವ, ಇಡೀ ಬಿಜೆಪಿ ಪಕ್ಷ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗಲೆಂದು ದಿನವಿಡೀ ಜಪಿಸುತ್ತಿರುವ ಹೊತ್ತಿನಲ್ಲಿ ಇಂಥದ್ದೊಂದು ಘಟನೆ ಬೆಳಕಿಗೆ ಬಂದಿರುವುದು ಗ್ಯಾರಂಟಿ ವಿರೋಧಿಗಳೆಲ್ಲರಿಗೂ ತಪರಾಕಿ ಬಾರಿಸಿದಂತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಬಿಜೆಪಿ - ಜೆಡಿಎಸ್ ನಾಯಕರ ಸುಳ್ಳು, ಅಪಪ್ರಚಾರಗಳ ನಡುವೆ ನಮ್ಮ ಗ್ಯಾರಂಟಿ ಯೋಜನೆ ಗೆಲ್ಲುತ್ತಿದೆ, ಜನರ ಬದುಕು ಬದಲಿಸುತ್ತಿದೆ. ಟೀಕೆಗಳು ಸಾಯುತ್ತಿವೆ, ಕೆಲಸಗಳು ಕಾಣುತ್ತಿವೆ. ಇನ್ನಾದರೂ ಗ್ಯಾರಂಟಿ ವಿರೋಧಿಗಳ ಕಣ್ಣು ತೆರೆಯಲಿ ಎಂದಿದ್ದಾರೆ.
Advertisement