ಬ್ಯಾಂಕ್ಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ಅವಕಾಶ ನೀಡಿ: ಕೇಂದ್ರ ಸರ್ಕಾರಕ್ಕೆ KDA ಆಗ್ರಹ
ಬೆಂಗಳೂರು: ರಾಜ್ಯದ ಬ್ಯಾಂಕ್ಗಳಲ್ಲಿ ಮತ್ತು ಸೇವಾ ಸಂಸ್ಥೆಗಳಲ್ಲಿ ಸ್ಥಳೀಯ ಭಾಷೆ ಮಾತನಾಡಬಲ್ಲ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಕೇಂದ್ರ ಸರ್ಕಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗ್ರಹಿಸಿದೆ.
ಈ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಪತ್ರ ಬರೆದು, ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ ಬ್ಯಾಂಕ್ಗಳಲ್ಲಿ ಮತ್ತು ಸೇವಾ ಸಂಸ್ಥೆಗಳಲ್ಲಿ ಅನ್ಯಭಾಷೆಯ ಸಿಬ್ಬಂದಿಯಿಂದ ಸಾರ್ವಜನಿಕ ಸೇವೆಗೆ ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಕನ್ನಡಬಾರದವರನ್ನು ವಿಮುಖಗೊಳಿಸಿ, ಆ ಹುದ್ದೆಗಳಿಗೆ ಕಡ್ಡಾಯವಾಗಿ ಕನ್ನಡಿಗರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಖಂಡನೀಯವಾಗಿದ್ದು, ವಿಶೇಷವಾಗಿ ದಕ್ಷಿಣ ಭಾರತದ ಬ್ಯಾಂಕ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಸ್ಥಳೀಯ ಭಾಷೆಯಲ್ಲಿ ವ್ಯವಹರಿಸಲು ಅನಾಸಕ್ತರಾಗಿರುವ ಸಿಬ್ಬಂದಿಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುವಂತಾಗಿದೆ. ಈ ಕೂಡಲೇ ದಕ್ಷಿಣ ಭಾರತೀಯರಾದ ಹಣಕಾಸು ಸಚಿವರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಎರಡು ವರ್ಷಗಳ ಹಿಂದೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಥಳೀಯ ಭಾಷೆ ತಿಳಿಯದ ನೌಕರರಿಗೆ ಸಾರ್ವಜನಿಕ ಸೇವೆಗೆ ಅವಕಾಶ ನೀಡಬಾರದೆಂದು ಸೂಚಿಸಿದ್ದ ಹಣಕಾಸು ಸಚಿವರ ಹೇಳಿಕೆಯನ್ನು ಉಲ್ಲೇಖಿಸಿರುವ ಡಾ.ಬಿಳಿಮಲೆ ಅವರು, ಇಷ್ಟು ಸುದೀರ್ಘ ಅವಧಿಯ ನಂತರವೂ ಯಾವುದೇ ರಚನಾತ್ಮಕ ಬದಲಾವಣೆಗಳಾದ ಕಾರಣ ಭಾಷಾ ಪರ ಸಂಘಟನೆಗಳು, ಸ್ಥಳೀಯ ಜನರ ಭಾವನೆಗಳು ಘಾಸಿಗೊಂಡಿವೆ ಎಂದು ಹೇಳಿದ್ದಾರೆ.
ಸ್ಥಳೀಯ ಭಾಷೆಯಲ್ಲಿ ಸೇವೆಗಳನ್ನು ಕೋರುವುದು ಕೇವಲ ಪ್ರತಿ ರಾಜ್ಯಗಳ ಹಕ್ಕಲ್ಲ, ಸಾಂಸ್ಕೃತಿಕ ಮೌಲ್ಯಗಳನ್ನು ಗೌರವಿಸುವ ವಿಷಯವಾಗಿದೆ, ಅದನ್ನು ಪ್ರತಿಯೊಬ್ಬರೂ ಅನುಸರಿಸಲು ಬದ್ಧರಾಗಿರಬೇಕು. ನೀಡಿದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬ್ಯಾಂಕಿಂಗ್ ವಲಯ ಮತ್ತು ಅಂಚೆ ಕಚೇರಿಗಳಿಗೆ ಸೂಚಿಸಬೇಕೆಂದು ಮಮವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ