
ಬೆಂಗಳೂರು: ಪೀಣ್ಯ-ಜಾಲಹಳ್ಳಿ ಸರ್ವೆ ನಂ.1ರಲ್ಲಿ ಹಲವು ಕೋಟಿ ರೂಪಾಯಿ ಮೌಲ್ಯದ 5 ಎಕರೆ ಖಾಲಿ ಭೂಮಿಯನ್ನು ಅರಣ್ಯ ಇಲಾಖೆ ಎಚ್ಎಂಟಿಯಿಂದ ಮರುವಶಕ್ಕೆ ಪಡೆದಿದೆ.
ಎಚ್ಎಂಟಿ ವಶದಲ್ಲಿದ್ದ ಪೀಣ್ಯ-ಜಾಲಹಳ್ಳಿ ಸರ್ವೆ ನಂ. 1ರಲ್ಲಿ ಶುಕ್ರವಾರ ಜೆಸಿಬಿಯೊಂದಿಗೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ, ಬೆಂಗಳೂರು ನಗರ ವಲಯದ ಅಧಿಕಾರಿಗಳು 5 ಎಕರೆ ಖಾಲಿ ಜಮೀನನ್ನು ಮರುವಶಕ್ಕೆ ಪಡೆದು, ಅಲ್ಲಿ ಅರಣ್ಯ ಇಲಾಖೆ ಫಲಕವನ್ನು ನೆಟ್ಟು ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ.
1896ರ ಮೇ 29ರ ಸರಕಾರದ ಅಧಿಸೂಚನೆ ಸಂಖ್ಯೆ 10407, ಎಫ್.ಟಿ.ಎಫ್. 153-95 ಮತ್ತು 1901ರ ಜನವರಿ 7ರ ಅಧಿಸೂಚನೆ ಸಂಖ್ಯೆ 422-ಎಫ್.ಟಿ.ಎಫ್.-15-1900ರ ರೀತ್ಯ ಪೀಣ್ಯ, ಜಾಲಹಳ್ಳಿ ಪ್ಲಾಂಟೇಷನ್ ನಲ್ಲಿರುವ 599 ಎಕರೆ ಜಮೀನು ಅರಣ್ಯವಾಗಿರುತ್ತದೆ. ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗದ ಈ ಜಮೀನು once a forest is always a forest ಎಂಬ ಸುಪ್ರೀಂಕೋರ್ಟ್ ಅಭಿಪ್ರಾಯದಂತೆ ಅರಣ್ಯವೇ ಆಗಿದೆ ಎಂದು ಈಶ್ವರ ಖಂಡ್ರೆ ಪ್ರತಿಪಾದಿಸಿದ್ದರು.
ಸದರಿ ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್ಗೆ ಅನುಮತಿ ಕೋರಿ ಅರಣ್ಯಾಧಿಕಾರಿಗಳು ನಿಯಮಬಾಹಿರವಾಗಿ ಸಲ್ಲಿಸಿದ್ದ ಇಂಟರ್ ಲೊಕೇಟರಿ ಅಪ್ಲಿಕೇಶನ್ (ಐಎ) ಹಿಂಪಡೆಯಲೂ ಸೂಚನೆ ನೀಡಿದ್ದರು. ಈ ಮಧ್ಯೆ ಎಚ್ಎಂಟಿ ತನ್ನ ವಶದಲ್ಲಿದ್ದ ಅರಣ್ಯ ಭೂಮಿಯ ಪೈಕಿ 165ಕ್ಕೂ ಹೆಚ್ಚು ಎಕರೆ ಜಮೀನನ್ನು ಕೇವಲ 300 ಕೋಟಿ ರೂ.ಗೆ ಖಾಸಗಿ ಮತ್ತು ಸರಕಾರದ ವಿವಿಧ ಸಂಸ್ಥೆಗಳಿಗೆ ಮಾರಾಟ ಮಾಡಿತ್ತು.
ಈ ಭೂಮಿಯನ್ನು ವಶಕ್ಕೆ ಪಡೆದು ಲಾಲ್ಬಾಗ್, ಕಬ್ಬನ್ ಪಾರ್ಕ್ನಂತಹ ಬೃಹತ್ ಉದ್ಯಾನ ಇಲ್ಲದ ಉತ್ತರ ಬೆಂಗಳೂರಿನಲ್ಲಿ ವೃಕ್ಷೋದ್ಯಾನ ನಿರ್ಮಿಸಿ ಆ ಭಾಗದ ಬೆಂಗಳೂರಿಗರಿಗೆ ಅತ್ಯುತ್ತಮ ಶ್ವಾಸತಾಣ ಮಾಡುವ ಆಶಯವನ್ನು ಈಶ್ವರ ಖಂಡ್ರೆ ಅವರು ವ್ಯಕ್ತಪಡಿಸಿದ್ದರು.. ಈ ನಿಟ್ಟಿನಲ್ಲಿ ಅಧಿಕಾರಿಗಳು ಶುಕ್ರವಾರ ಪ್ರಥಮ ಹೆಜ್ಜೆ ಇಟ್ಟಿದ್ದಾರೆ.
Advertisement