ವಕ್ಫ್ ವಿವಾದ: ಹಾವೇರಿ ಜಿಲ್ಲೆಯಲ್ಲಿ ಕಲ್ಲು ತೂರಾಟ, 32 ಮಂದಿ ಬಂಧನ

ಕಡಕೋಳ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯ ಮುಖಂಡ ಮೊಹಮ್ಮದ್ ರಫಿ ಅವರ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿ ಬೈಕ್ ಹಾನಿಗೊಳಿಸಿದೆ.
ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್, ಎಸ್ಪಿ ಅಂಶುಕುಮಾರ್ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್, ಎಸ್ಪಿ ಅಂಶುಕುಮಾರ್ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.
Updated on

ಹಾವೇರಿ: ವಕ್ಫ್ ಮಂಡಳಿಯಿಂದ ತಮ್ಮ ಭೂಮಿ ಕಳೆದುಕೊಳ್ಳುವ ಭಯದಲ್ಲಿ ರೈತರ ಗುಂಪೊಂದು ಮುಸ್ಲಿಂ ಮುಖಂಡರ ನಿವಾಸಗಳ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಇದರೊಂದಿಗೆ ವಕ್ಫ್ ವಿವಾದ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಕಡಕೋಳ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಸ್ಥಳೀಯ ಮುಖಂಡ ಮೊಹಮ್ಮದ್ ರಫಿ ಅವರ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿ ಬೈಕ್ ಹಾನಿಗೊಳಿಸಿದೆ. ಅಲ್ಪಸಂಖ್ಯಾತ ಸಮುದಾಯದ ಇತರ ಹಲವು ನಾಯಕರನ್ನು ಸಹ ಗುರಿಯಾಗಿಸಲಾಗಿದೆ.

ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್, ಎಸ್ಪಿ ಅಂಶುಕುಮಾರ್ ಶ್ರೀವಾಸ್ತವ ಮತ್ತಿತರರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಕಲ್ಲು ತೂರಾಟ ನಡೆಸಿದವರನ್ನು ಪೊಲೀಸರು ಗುರುತಿಸಿ ಬಂಧಿಸಿದ್ದು, ಗ್ರಾಮಸ್ಥರೊಂದಿಗೆ ಮಾತನಾಡಿದ್ದಾರೆ ಮತ್ತು ಜನರನ್ನು ಪ್ರಚೋದಿಸುವವರನ್ನು ಪತ್ತೆ ಹಚ್ಚಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಘಟನೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಲು ಯಾರೂ ಮುಂದೆ ಬರುತ್ತಿಲ್ಲ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 32 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಕೆಎಸ್ ಆರ್ ಪಿ ನಾಲ್ಕು ತುಕಡಿಗಳು ಮತ್ತು 200 ಕ್ಕೂ ಹೆಚ್ಚು ಪೊಲೀಸರನ್ನು ಗ್ರಾಮದಲ್ಲಿ ನಿಯೋಜಿಸಲಾಗಿದೆ. ಪೊಲೀಸರು ಪಥ ಸಂಚಲನ ಕೂಡಾ ನಡೆಸಿದ್ದಾರೆ.

‘ಗರಡಿ ಮನೆ’ ಆಸ್ತಿಗೆ ಸಂಬಂಧಿಸಿದಂತೆ ಗೊಂದಲವಿತ್ತು. ಕೆಲವು ಸ್ಥಳೀಯರು ಈ ವಿಷಯವನ್ನು ಪತ್ರಿಕೆಗಳಲ್ಲಿ ಓದಿ, ಈ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಗುರುತಿಸಬಹುದೆಂಬ ಭೀತಿಯಿಂದ ನಂತರ ತೂರಾಟ ನಡೆಸಿದ್ದಾರೆ. ಗ್ರಾಮದಲ್ಲಿ ಮೂರು ಆಸ್ತಿಗಳು ವಕ್ಫ್ ಮಂಡಳಿ ಅಧೀನದಲ್ಲಿವೆ. ವಕ್ಫ್ ಮಂಡಳಿ ಪಟ್ಟಿ ಕುರಿತು ಜಿಲ್ಲಾಡಳಿತದಿಂದ ಯಾವುದೇ ನೋಟಿಸ್ ಜಾರಿಯಾಗಿಲ್ಲ. ಆದರೆ, ಜನರು ತಮ್ಮ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ನಮೂದಿಸಿಬಹುದೆಂಬ ಭಯದಿಂದ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮಹಾಂತೇಶ್ ಹೇಳಿದರು.

ಈ ಮಧ್ಯೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿರುವ ಮಾಜಿ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರ ಪುತ್ರ ಬಸವಪ್ರಭು ಜೊಲ್ಲೆ ಅವರ 2.13 ಎಕರೆ ಜಾಗವನ್ನು ಈಗ ಭೂ ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ ಎಂದು ಹೇಳಲಾಗಿದೆ. ಆಸ್ತಿ ಪಿತ್ರಾರ್ಜಿತವಾಗಿದೆ ಮತ್ತು ತಲೆಮಾರುಗಳಿಂದ ಒಡೆತನದಲ್ಲಿದೆ. 2021ರಲ್ಲಿ ಜೊಲ್ಲೆ ಸಚಿವರಾಗಿದ್ದಾಗ ಭೂ ದಾಖಲೆ ಬದಲಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.

ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್, ಎಸ್ಪಿ ಅಂಶುಕುಮಾರ್ ಸ್ಥಳದಲ್ಲಿ ಪರಿಶೀಲನೆ ನಡೆಸಿದರು.
ವಕ್ಫ್ ನೋಟಿಸ್: ಚುನಾವಣೆಗಾಗಿ BJPಯಿಂದ ವಿವಾದ ಸೃಷ್ಟಿ- ಸಿಎಂ ಸಿದ್ದರಾಮಯ್ಯ

ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ನೀಲಕಂಠಪ್ಪ ಮುದ್ನಿ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಉಪ್ಪಿನ ಬೆಟಗೇರಿ ಗ್ರಾಮದ ಹಲವರ ಆಸ್ತಿಗಳನ್ನು ವಕ್ಫ್ ಆಸ್ತಿಯಡಿ ಪಟ್ಟಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ನವೆಂಬರ್ 28, 2023 ರಂದು ಪತ್ರವನ್ನು ಕಳುಹಿಸಲಾಗಿದ್ದು, ಅದು ಡಿಸೆಂಬರ್ 2, 2023 ರಂದು ಪಿಎಂಒ ಕಚೇರಿಗೆ ತಲುಪಿದೆ. ಈ ವಿಚಾರವನ್ನು ಪ್ರಧಾನಿ ಅವರ ಗಮನಕ್ಕೆ ತರಲಾಗುವುದು ಎಂದು 2023 ರ ಡಿಸೆಂಬರ್ 8 ರಂದು ಪಿಎಂಒದಿಂದ ಕರೆ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com