ಮೈಸೂರು: ನವೆಂಬರ್ 15 ರಿಂದ ಅಶೋಕಪುರಂ ರೈಲು ನಿಲ್ದಾಣಕ್ಕೆ ಹಲವು ರೈಲುಗಳ ವಿಸ್ತರಣೆ- ವಿ.ಸೋಮಣ್ಣ
ಮೈಸೂರು: ಎರಡು ತಿಂಗಳೊಳಗೆ ಅಶೋಕಪುರಂ ರೈಲು ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಮುಕ್ತಾಯವಾಗಲಿದ್ದು, ನವೆಂಬರ್ 15 ರಿಂದ ಒಡೆಯರ್ ಎಕ್ಸ್ ಪ್ರೆಸ್, ಮಾಲ್ಗುಡಿ ಎಕ್ಸ್ ಪ್ರೆಸ್, ತಿರುಪತಿಗೆ ಸಂಚರಿಸುವ ಸಾಪ್ತಾಹಿಕ ವಿಶೇಷ ರೈಲು ಸೇರಿದಂತೆ ಹಲವು ರೈಲುಗಳನ್ನು ವಿಸ್ತರಿಸಲಾಗುವುದು ಎಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ನೀಡಿದ್ದಾರೆ.
ಅಶೋಕಪುರಂ ಮತ್ತು ಮೈಸೂರು ರೈಲು ನಿಲ್ದಾಣಗಳಲ್ಲಿ ಇಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಸಚಿವರು, ಈ ಹಿಂದೆ ಕೇವಲ ಮೂರು ಪ್ಲಾಟ್ಫಾರ್ಮ್ಗಳನ್ನು ಹೊಂದಿದ್ದ ನಿಲ್ದಾಣ ಈಗ ಮೂರು ಹೆಚ್ಚುವರಿ ಪೂರ್ಣ ಉದ್ದದ, ಉನ್ನತ ಮಟ್ಟದ ಪ್ಲಾಟ್ಫಾರ್ಮ್ಗಳನ್ನು ಹೊಂದಿದೆ. ಎಲ್ಲಾ ಪ್ಲಾಟ್ಫಾರ್ಮ್ಗಳಿಗೂ ಸಂಪೂರ್ಣ ಮೇಲ್ಛಾವಣಿ ಹೊದಿಸಲಾಗಿದೆ. ಇದಲ್ಲದೆ, ಮೂರು ಹೊಸ ರೈಲ್ವೆ ಹಳಿಗಳನ್ನು ಸಹ ಒದಗಿಸಲಾಗಿದ್ದೂ, ರೈಲು ಬೋಗಿಗಳಿಗೆ ನೀರು ಸರಬರಾಜು ವ್ಯವಸ್ಥೆ ಕೂಡ ಇದೆ. ವಿಶಾಲವಾದ ವಾಹನ ನಿಲ್ದಾಣ ಪ್ರದೇಶವನ್ನು ಸಹ ಅಭಿವೃದ್ಧಿಪಡಿಸಲಾಗಿದೆ ಮತ್ತು ನಿಲ್ದಾಣಕ್ಕೆ ಹೊಸ ಎರಡನೇ ಪ್ರವೇಶ ಒದಗಿಸಲಾಗಿದೆ. ಇದು ಹತ್ತಿರದ ನಗರ ಪ್ರದೇಶಗಳಿಗೆ ಸಂಪರ್ಕವನ್ನು ನೀಡುತ್ತದೆ ಎಂದರು.
ಅಭಿವೃದ್ದಿ ಕಾರ್ಯಗಳು ಪೂರ್ಣಗೊಂಡಾಗ, ನವೆಂಬರ್ ತಿಂಗಳ ಮಧ್ಯದಿಂದ ಹಲವು ರೈಲು ಸೇವೆಗಳ ವಿಸ್ತರಣೆಯೊಂದಿಗೆ, ಮೈಸೂರು ರೈಲು ನಿಲ್ದಾಣದಲ್ಲಿ ದಟ್ಟಣೆ ಕಡಿಮೆಯಾಗಿ ಪ್ರಯಾಣಿಕರ ಅನುಕೂಲಗಳನ್ನು ಹೆಚ್ಚಿಸುತ್ತದೆ ಎಂದು ಸಚಿವರು ಖಾತ್ರಿಪಡಿಸಿದರು.
ಅಶೋಕಪುರಂ ನಿಲ್ದಾಣದ ಪರಿಶೀಲನೆಯ ನಂತರ ಮೈಸೂರು ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವರು, ನಿರೀಕ್ಷಣಾ ಹಾಲ್ಗಳು, ಪ್ಲಾಟ್ಫಾರ್ಮ್ಗಳಲ್ಲಿನ ಉಪಹಾರ ಮಳಿಗೆ ಸೌಲಭ್ಯಗಳನ್ನು ಪರಿಶೀಲಿಸಿದರು. ನಿಲ್ದಾಣದಲ್ಲಿ ಸ್ವಚ್ಛತಾ ಸಿಬ್ಬಂದಿ ಮತ್ತು ಹಮಾಲಿಗಳು ಸೇರಿದಂತೆ ನಿಲ್ದಾಣದ ಇತರೆ ಸಿಬ್ಬಂದಿಗಳೊಂದಿಗೆ ಸಂವಾದ ನಡೆಸಿ ಅವರ ಕೆಲಸದ ಪರಿಸ್ಥಿತಿಗಳನ್ನು ತಿಳಿದರು.
ಮೈಸೂರು ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಲೋಕಸಭಾ ಸಂಸದರು, ಮೈಸೂರು ವಿಭಾಗದ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಎಲ್ಲಾ ಯೋಜನೆಗಳನ್ನು ನಿಗದಿತ ಗಡುವಿನ ಒಳಗೆ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಮೈಸೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶಿಲ್ಪಿ ಅಗರ್ವಾಲ್ ಮತ್ತಿತರ ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ತದನಂತರ ವಿ. ಸೋಮಣ್ಣ, ನರಸಿಂಹರಾಜ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್, ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ಕೃಷ್ಣರಾಜ ಕ್ಷೇತ್ರದ ಶಾಸಕರಾದ ಶ್ರೀವತ್ಸ ಮತ್ತು ಮೈಸೂರು ವಿಭಾಗದ ರೈಲ್ವೆ ಅಧಿಕಾರಿಗಳೊಂದಿಗೆ ಮೈಸೂರು ಕ್ಷೇತ್ರದ ಅಭಿವೃದ್ಧಿ ಯೋಜನೆಗಳ ಪ್ರಗತಿಯ ಕುರಿತು ಪರಿಶೀಲನಾ ಸಭೆ ನಡೆಸಿದರು. ಯೋಜಿತ ಎಲ್ಲಾ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವ ಬದ್ಧತೆಯ ಖಾತ್ರಿಯೊಂದಿಗೆ ಪರಿಶೀಲನಾ ಸಭೆ ಮುಕ್ತಾಯವಾಯಿತು.
ಮುಂದಿನ ಪ್ರಗತಿ ಮತ್ತು ಸವಾಲುಗಳ ಕುರಿತು ಚರ್ಚಿಸಲು ನಿಯಮಿತವಾಗಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯಲ್ಲಿ ಔಪಚಾರಿಕ ಪರಿಶೀಲನಾ ಸಭೆಗಳನ್ನು ನಡೆಸುವಂತೆ ಸಾರ್ವಜನಿಕ ಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ