ವೀಲಿಂಗ್ ಪ್ರಶ್ನಿಸಿದ್ದಕ್ಕೆ ಶಿಕ್ಷಕನಿಗೆ ಚೂರಿ ಇರಿತ: ಅಪ್ರಾಪ್ತ ಸೇರಿ ಮೂವರ ಬಂಧನ

ನಡು ರಸ್ತೆಯಲ್ಲಿ ವೀಲಿಂಗ್ ಮಾಡಿ ಇತರೆ ಸವಾರರಿಗೆ ತೊಂದರೆ ಮಾಡುತ್ತಿದ್ದನ್ನು ಪ್ರಶ್ನಿಸಿದ್ದ ಶಿಕ್ಷಕನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೈಕ್ ವೀಲಿಂಗ್ (ಸಾಂದರ್ಭಿಕ ಚಿತ್ರ)
ಬೈಕ್ ವೀಲಿಂಗ್ (ಸಾಂದರ್ಭಿಕ ಚಿತ್ರ)
Updated on

ಶಿವಮೊಗ್ಗ: ನಡು ರಸ್ತೆಯಲ್ಲಿ ವೀಲಿಂಗ್ ಮಾಡಿ ಇತರೆ ಸವಾರರಿಗೆ ತೊಂದರೆ ಮಾಡುತ್ತಿದ್ದನ್ನು ಪ್ರಶ್ನಿಸಿದ್ದ ಶಿಕ್ಷಕನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಪ್ರಾಪ್ತ ಸೇರಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ (Shikaripura)ದ ಶಿಕ್ಷಕನಿಗೆ ಚಾಕು ಇರಿತ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ (Shivamogga SP Mithun Kumar) ಅವರು, ಶಿಕಾರಿಪುರ ಟೌನ್ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 23 ವರ್ಷದ ಯುವಕ ನಾಯಿಯನ್ನು ವಾಕಿಂಗ್ ಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಘಟನೆ ನಡೆದಿದೆ. ವಾಕಿಂಗ್​ಗೆ ಹೋದ ವೇಳೆ ಸುಶೀಲ್ ಎಂಬಾತ ಸ್ಥಳದಲ್ಲಿ ಸೈಕಲ್ ನಲ್ಲಿ ವೀಲ್ಹಿಂಗ್ (Cycle Wheeling) ಮಾಡ್ತಿದ್ದ ಅಪ್ರಾಪ್ತ ಬಾಲಕನಿಗೆ ಬುದ್ಧಿವಾದ ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆ ಬಳಿಕ ಮನೆಗೆ ವಾಪಸ್ ಆದ ವೇಳೆ ವೀಲಿಂಗ್ ಮಾಡಿದ್ದ ಯುವಕ ತನ್ನ ಇತರೆ ಇಬ್ಬರು ಸ್ನೇಹಿತರೊಂದಿಗೆ ಬೈಕ್ ಮೂಲಕ ಸಂತ್ರಸ್ಥ ಸುಶೀಲ್ ಮನೆಗೆ ಬಂದು ಹರಿತವಾದ ಚಾಕುವಿನಿಂದ ದಾಳಿ ನಡೆಸಿದ್ದಾರೆ. ಈ ವೇಳೆ ಸುಶೀಲ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಬಳಿಕ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಪ್ರಕರಣದ ಸಂಬಂಧ ಮೂರು ಜನರನ್ನು ವಶಕ್ಕೆ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

ಅಂತೆಯೇ ''ಪ್ರಾಥಮಿಕ ವಿಚಾರಣೆಯಿಂದ ಆರೋಪಿಯು ಉದ್ಧಟತನದಿಂದ ಸವಾರಿ ಮಾಡಿರುವುದು ಬೆಳಕಿಗೆ ಬಂದಿದೆ. ಬಾಲಾಪರಾಧಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ. ತನಿಖೆಗಾಗಿ ತಂಡಗಳನ್ನು ರಚಿಸಿ ಪ್ರಕರಣದ ನಾಲ್ಕನೇ ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪುಂಡಾಟಿಗೆ ಹೆಚ್ಚಳ
ಇನ್ನು ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, 'ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಬೆಳಗಾವಿ ಜಿಲ್ಲೆ, ಹಾವೇರಿ, ಮಂಗಳೂರು ಅಥವಾ ನಿನ್ನೆ ಶಿಕಾರಿಪುರದಲ್ಲಿ ನಡೆದ ಘಟನೆ ಯಾರೇ ಆಗಲಿ, ಯಾರು ಏನು ಬೇಕಾದರೂ ಮಾಡಬಹುದು ಎಂಬಂತೆ ಕಾಣುತ್ತಿದೆ. ಇಡೀ ಪೊಲೀಸ್ ವ್ಯವಸ್ಥೆಯೇ ಕುಸಿದು ಬಿದ್ದಿರುವ ಸ್ಥಿತಿ ನಿರ್ಮಾಣವಾಗಿದೆ. ಆದರೆ ಮುಖ್ಯಮಂತ್ರಿಗಳು ತಮ್ಮ ಇಡೀ ಸಚಿವ ಸಂಪುಟದೊಂದಿಗೆ ದೆಹಲಿಯಲ್ಲಿ ಕುಳಿತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ಎಲ್ಲ ರಂಗಗಳಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದ್ದು, ಅದರ ಪರಿಣಾಮವೇ ಶಿಕಾರಿಪುರದಲ್ಲಿ ನಡೆದ ಘಟನೆ ಎಂದರು.

ಅಲ್ಲದೆ ಯಾರು ಬೇಕಾದರೂ ಇರಿದು ಕೊಲೆ ಮಾಡಬಹುದು, ಕೇಳುವವರಿಲ್ಲ, ಪೊಲೀಸರು ಏನನ್ನೂ ಮಾಡುವುದಿಲ್ಲ ಎಂಬ ಭಾವನೆ ಇದೆ, ಕಾಂಗ್ರೆಸ್ ಸರ್ಕಾರದಲ್ಲಿ ಅಲ್ಪಸಂಖ್ಯಾತರನ್ನು ಯಾರೂ ಮುಟ್ಟುವುದಿಲ್ಲ ಎಂಬ ಭಾವನೆ ಇದೆ, ಇದು ಇಂತಹ ಘಟನೆಗಳಿಗೆ ಕಾರಣವಾಗಿದೆ. ನಮ್ಮ (ಶಿವಮೊಗ್ಗ) ಸಂಸದ ಬಿ ವೈ ರಾಘವೇಂದ್ರ ಮತ್ತು ಪಕ್ಷದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ನಾನು ಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ವಿಜಯೇಂದ್ರ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com