ಶೇ.40 ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲೂ ಮುಂದುವರಿದಿದೆ: ಕೆಂಪಣ್ಣ ಆರೋಪ

ಶೇ.40 ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲಿಯೂ ಮುಂದುವರಿದಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗುರುವಾರ ಆರೋಪ ಮಾಡಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ
Updated on

ಬೆಂಗಳೂರು: ಶೇ.40 ಕಮಿಷನ್ ಕಾಂಗ್ರೆಸ್ ಸರ್ಕಾರದಲ್ಲಿಯೂ ಮುಂದುವರಿದಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗುರುವಾರ ಆರೋಪ ಮಾಡಿದ್ದಾರೆ.

ಚಾಮರಾಜಪೇಟೆಯ ಗುತ್ತಿಗೆದಾರರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಧಿಕಾರಿಗಳಿಂದಲೇ ರಾಜ್ಯದಲ್ಲಿ ಭ್ರಷ್ಟಾಚಾರ ಬೇರೂರಿದೆ. ಮಿತಿಮೀರಿದ ಭ್ರಷ್ಟಾಚಾರಿ ಅಧಿಕಾರಿಗಳಿದ್ದಾರೆ. ಬಿಬಿಎಂಪಿ, ನೀರಾವರಿ ಸೇರಿದಂತೆ ಎಲ್ಲಾ ಇಲಾಖೆಯಲ್ಲಿಯೂ ಭ್ರಷ್ಟ ಅಧಿಕಾರಿಯಾಗಳಿದ್ದಾರೆಂದು ಆರೋಪ ಮಾಡಿದರು.

ಇದೇ ವೇಳೆ ವಿವಿಧ ಇಲಾಖೆಗಳಲ್ಲಿ ಕರೆದಿರುವ ಪ್ಯಾಕೇಜ್ ಟೆಂಡರ್ ಅನ್ನು ರದ್ದುಗೊಳಿಸುವಂತೆ ಆಗ್ರಹಿಸಿದರು. ಅಲ್ಲದೆ, ಪ್ರತಿಯೊಂದು ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಕೂಡಲೇ ಪ್ಯಾಕೇಜ್ ಸಿಸ್ಟಮ್ ಸ್ಟಾಪ್ ಮಾಡಿ ಪ್ರತ್ಯೇಕ ಟೆಂಡರ್ ಕರೆಯಬೇಕು. ಕೋಲಾರದಲ್ಲಿ ಪ್ಯಾಕೇಜ್ ಟೆಂಡರ್ ಕರೆದಿದ್ದಾರೆ ಬೇರೆ ಜಿಲ್ಲೆಗಳಲ್ಲೂ ಕರೆದಿದ್ದಾರೆ. ಅಧಿಕಾರಿಗಳಿಂದಲೇ ಭ್ರಷ್ಟಾಚಾರ ಶುರುವಾಗಿದೆ. ಅಧಿಕಾರಿಗಳು ದುಡ್ಡು ಕಲೆಕ್ಟ್ ಮಾಡಿ ರಾಜಕಾರಣಿಗಳಿಗೆ ಕೊಡುತ್ತಿದ್ದಾರೆ. ಈ ಹಿಂದೆ ರಾಜಕಾರಣಿಗಳು ನೇರವಾಗಿ ಕಮಿಷನ್ ತೆಗೆದುಕೊಳ್ಳುತ್ತಿದ್ದರು. ಈಗ ಅಧಿಕಾರಿಗಳು ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಶೇ.40 ಕಮಿಷನ್ ಈಗಲೂ ಮುಂದುವರಿದಿದೆ ಎಂದು ದೂರಿದರು.

ವಿವಿಧ ಇಲಾಖೆಯಲ್ಲಿ ನಡೆಯುತ್ತಿರುವ ಅನಾವಶ್ಯಕ ಪ್ಯಾಕೇಜ್ ಟೆಂಡರ್‍ಗಳನ್ನು ಕೂಡಲೇ ಸರ್ಕಾರ ರದ್ದುಗೊಳಿಸಬೇಕು. ಈಗಾಗಲೇ ಹಲವು ಬಾರಿ ಸಿಎಂ ಅವರನ್ನ ಭೇಟಿ ಮಾಡಿದ್ದೇವೆ. ಪ್ಯಾಕೇಜ್ ಟೆಂಡರ್ ರದ್ದುಮಾಡುವಂತೆ ಮನವಿ ಮಾಡಿದ್ದೇವೆ. ಹತ್ತಾರು ಪತ್ರ ಬರೆದು ಸಿಎಂಗೆ ಮನವಿ ಮಾಡಿದ್ದೇವೆ. ಮುಖ್ಯ ಎಂಜಿನಿಯರ್ ಅವರನ್ನ ಪ್ರಶ್ನೆ ಮಾಡಿದರೆ ಮೇಲಾಧಿಕಾರಿಗಳ ಕಡೆ ತೋರಿಸುತ್ತಾರೆ. ಅವರನ್ನ ಕೇಳಿದರೆ ಸಚಿವರು, ಶಾಸಕರ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ ಎಂದರು.

ಪೊಲೀಸ್ ವಸತಿ ಗೃಹ ಅಭಿವೃದ್ಧಿ ನಿಗಮ, ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಹಲವು ಇಲಾಖೆಗಳಲ್ಲಿ ಪ್ಯಾಕೇಜ್ ಟೆಂಡರ್ ಆಹ್ವಾನ ಬಂದಿದೆ. ಇದರಿಂದ ಸ್ಥಳೀಯ ಗುತ್ತಿಗೆದಾರರಿಗೆ ಮೋಸಗಳಾಗುತ್ತಿದೆ. ನೆರೆ ರಾಜ್ಯದ ಗುತ್ತಿಗೆ ಅನಕೂಲ ಮಾಡಿಕೊಡಲು ಪ್ಯಾಕೇಜ್ ಟೆಂಡರ್ ಮಾಡುತ್ತಿದ್ದಾರೆ. ಪ್ಯಾಕೇಜ್ ಟೆಂಡರ್ ಪದ್ಧತಿ ಭ್ರಷ್ಟಾಚಾರಕ್ಕೆ ಆಸ್ಪದವಾಗಿದೆ. ತಮ್ಮ ಅಪ್ತರಾದ ಗುತ್ತಿಗೆ ಕಾಮಗಾರಿ ನೀಡಲು ಮುಂದಾಗಿದ್ದಾರೆ. ಇದರಿಂದ ಅರ್ಹ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಎಲ್ಲಾ ರೀತಿಯ ಕಾಮಗಾರಿಗಳ ಟೆಂಡರ್ ಮೂಲಕ ಹಂಚಿಕೆ ಮಾಡಿದರೆ ನ್ಯಾಯ ಸಿಗುತ್ತೆ ಎಂದು ತಿಳಿಸಿದರು.

ಪ್ಯಾಕೇಜ್ ಟೆಂಡರ್ ರದ್ದು ಮಾಡದೇ ಇದ್ದರೆ, ಹೋರಾಟ ಮಾಡಲು ಕರೆ ಕೊಡುತ್ತೇವೆ. ಒಂದು ವಾರದಲ್ಲಿ ಬಿಬಿಎಂಪಿಯಲ್ಲಿ 300 ಕೋಟಿ ಪ್ಯಾಕೇಜ್ ಟೆಂಡರ್‍'ಗೆ ಆಹ್ವಾನಿಸಲಾಗಿದೆ. ಈ ಪ್ಯಾಕೇಜ್ ಟೆಂಡರ್ ಮೇಲೆ ಹಲವು ಅನುಮಾನ ಮೂಡಿದೆ. ನಿಮಗೆ ಕೆಲಸ ಬೇಕು ಎಂದರೆ ಅಧಿಕಾರಿಗಳೇ ಹಣ ಕೇಳುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿ ಎರಡು ವರ್ಷ ಆದರೂ ಹಣ ಬಿಡುಗಡೆ ಆಗಿಲ್ಲ. ಶೇ.40 ಕಮಿಷನ್ ಮುಂದುವರಿದಿರುವ  ಬಗ್ಗೆ ಸಮಯ ನೋಡಿ ದೂರು ಕೊಡುತ್ತೇವೆ. ಯಾರಿಗೂ ಹೆದರಬೇಕಿಲ್ಲ ಎಂದರು.

ಇದೇ ವೇಳೆ ದಾಖಲಾತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 800 ಪುಟಗಳ ದಾಖಲಾತಿ ಕೊಟ್ಟಿದ್ದೇವೆ. ಕೋರ್ಟ್ ಅಲ್ಲಿ ಕೊಡುತ್ತೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com