ಬೆಂಗಳೂರು: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಪಕ್ಷದ ಕಾರ್ಯಕರ್ತರು ಹಾಗೂ ಜನರನ್ನು ಹುರಿದುಂಬಿಸಲು ರಾಜ್ಯ ಬಿಜೆಪಿ ನನ್ನ ರಾಮ ಅಭಿಯಾನವನ್ನು ಆರಂಭಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ರಾಮನ ಹಾಡೊಂದನ್ನು ಹಾಡಿರುವ ವಿಡಿಯೋ ವೊಂದನ್ನು ನನ್ನ ರಾಮ ಹ್ಯಾಷ್ ಟ್ಯಾಗ್ ನೊಂದಿಗೆ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ತಮ್ಮ ಪೋಸ್ಟ್ ನ್ನು ಬಿಜೆಪಿಯ ಇತರೆ ನಾಯಕರಿಗೂ ಟ್ಯಾಗ್ ಮಾಡಿದ್ದಾರೆ.
ಇದೇ ರೀತಿಯ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಜಗ್ಗೇಶ್ ಅವರೂ ಕೂಡ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಕೇಂದ್ರ ಸಚಿವ ಭಗವಂತ ಖೂಬಾ ಅವರು ಶ್ರೀರಾಮನ ಕುರಿತು ಮಾತನಾಡಿರುವ ವಿಡಿಯೋ, ನಟ ಗಣೇಶ್ ಶ್ಲೋಕವನ್ನು ಪಠಿಸಿರುವ ವಿಡಿಯೋ, 'ಜೈ ಹೋ' ಖ್ಯಾತಿಯ ಗಾಯಕ ವಿಜಪ್ರಕಾಶ್ ಅವರು ರಾಮ ರಕ್ಷಾ ಸ್ತೋತ್ರದ ಮಂತ್ರವನ್ನು ಪಠಿಸಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಕೇವಲ ರಾಜಕೀಯ, ಚಿತ್ರರಂಗದ ನಾಯಕರಷ್ಟೇ ಅಲ್ಲದೆ ಸಾಮಾನ್ಯ ಜನರೂ ಕೂಡ ರಾಮನ ಹಾಡು, ಶ್ಲೋಕಗಳನ್ನು ಪಠಿಸಿರುವ ವಿಡಿಯೋಗಳನ್ನು ನನ್ನ ರಾಮ ಹ್ಯಾಷ್ ಟ್ಯಾಗ್ ಬಳಸಿ ಪೋಸ್ಟ್ ಮಾಡಿದ್ದಾರೆ.
Advertisement