
ಬೆಂಗಳೂರು: ಬೆಂಗಳೂರಿನ ಹೊರವಲಯದ ಜಿಗಣಿಯಲ್ಲಿರುವ ಮನೆಯೊಂದಕ್ಕೆ ಗುರುವಾರ ಬೆಳಗ್ಗೆ ಚಿರತೆ ನುಗ್ಗಿದ್ದು, ಬೆಚ್ಚಿಬಿದ್ದ ದಂಪತಿ, ಕೂಡಲೇ ಮನೆಯಿಂದ ಆಚೆ ಬಂದು ಬಾಗಿಲು ಲಾಕ್ ಮಾಡಿದ್ದಾರೆ.
ಇಂದು ಬೆಳಗ್ಗೆ ಜಿಗಣಿಯ ಪಿಲ್ಲಾ ರೆಡ್ಡಿ ಲೇಔಟ್ನಲ್ಲಿ ಈ ಘಟನೆ ನಡೆದಿದ್ದು, ವೆಂಕಟೇಶ್, ಅವರ ಪತ್ನಿ ವೆಂಕಟಲಕ್ಷ್ಮಿ ಮತ್ತು ಅವರ ಮಗ ನಿಖಿಲ್ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಚಿರತೆ ನುಗ್ಗಿದೆ.
ಚಿರತೆ ಬಂದಿದ್ದನ್ನ ಗಮನಿಸಿದ ವೆಂಕಟೇಶ್ ಅವರು ಒಂದು ಕ್ಷಣ ಭಯಬೀತರಾಗಿದ್ದರೂ ವಿಚಲಿತರಾಗದೆ ಸಮಯಪ್ರಜ್ಞೆ ತೋರಿ, ಮನೆಯಲ್ಲಿದ್ದ ಪತ್ನಿಯನ್ನು ಹೊರಗೆ ಕರೆತಂದು ಮನೆ ಬಾಗಿಲನ್ನ ಲಾಕ್ ಮಾಡಿದ್ದಾರೆ. ಇದರಿಂದ ಚಿರತೆ ಮನೆಯೊಳಗೆ ಲಾಕ್ ಆಗಿದ್ದು, ಬಳಿಕ ಪೊಲೀಸರು ಹಾಗೂ ಅರಣ್ಯ ಇಲಾಖೆಹಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯವರು ಮನೆಯಲ್ಲಿ ಲಾಕ್ ಆಗಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಅರಣ್ಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.
ಅರಣ್ಯ ಪ್ರದೇಶವಾದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಬಳಿ ಇರುವ ಜಿಗಣಿಯಲ್ಲಿ ಚಿರತೆಗಳು ಮತ್ತು ಆನೆಗಳು ಸೇರಿದಂತೆ ಆಗಾಗ್ಗೆ ವನ್ಯಜೀವಿಗಳು ವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.
Advertisement