
ಬೆಂಗಳೂರು: ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ಸಿಲುಕಿ ಜೈಲು ಪಾಲಾಗಿರೋ ಸ್ಯಾಂಡಲ್ವುಡ್ ನಟಿ ರನ್ಯಾ ರಾವ್ಗೆ ಪತಿ ಜತೀನ್ ಹುಕ್ಕೇರಿ ಶಾಕ್ ನೀಡಿದ್ದಾರೆ.
ಈಗಾಗಲೇ ವೈವಾಹಿಕ ಜೀವನದಲ್ಲಿ ಸಾಕಷ್ಟು ಜಗಳ ಆಗಿದೆ ಮನಸ್ತಾಪಗಳು ಇದ್ದಾವೆ ಅಂತ ಹೇಳಿಕೊಂಡಿದ್ದ ಜತೀನ್ ಹುಕ್ಕೇರಿ ಈಗ ವಿಚ್ಚೇದನಕ್ಕೆ ಮೊರೆ ಹೋಗಿದ್ದಾರೆ. ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
2024 ಅಕ್ಟೋಬರ್ 6 ರಂದು ಬೆಂಗಳೂರಿನ ಬಾಸ್ಟಿನ್ ರೆಸ್ಟೋರೆಂಟ್ನಲ್ಲಿ ರನ್ಯಾ, ಜತಿನ್ ಇಬ್ಬರೂ ಮದುವೆ ಬ್ರೋಕರ್ ಮೂಲಕ ಭೇಟಿಯಾಗಿದ್ದರು. 2024 ಅಕ್ಟೋಬರ್ 23ರಂದು ರನ್ಯಾ, ಜತಿನ್ ಎಂಗೇಜ್ ಮೆಂಟ್ ಆಗಿತ್ತು. 2024 ನವೆಂಬರ್ 27 ರಂದು ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಅದ್ಧೂರಿ ಮದುವೆ ಕೂಡ ಆಗಿತ್ತು. ಬಳಿಕ ಲ್ಯಾವೆಲ್ಲೆ ರಸ್ತೆಯ ಐಷಾರಾಮಿ ಅಪಾರ್ಟ್ ಮೆಂಟ್ ನಲ್ಲಿ ವಾಸ್ತವ್ಯ ಹೂಡಿದ್ದರು.
ಮದುವೆಯಾದ ಒಂದೇ ತಿಂಗಳಿಗೆ ರನ್ಯಾ, ಜತಿನ್ ನಡುವೆ ಮನಸ್ತಾಪ ಶುರುವಾಗಿದ್ದು, ಸಂಬಂಧದಲ್ಲಿ ಪಾರದರ್ಶಕತೆ ಇಲ್ಲ, ಮಾತುಕತೆಯೂ ಇರಲಿಲ್ಲವೆಂದು ಪತಿ ಜತಿನ್ ಹುಕ್ಕೇರಿ ಹೈಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಮದುವೆಯಾದ ಎರಡೇ ತಿಂಗಳಿಗೆ ರನ್ಯಾ ದುಬೈಗೆ ಓಡಾಟ ನಡೆಸಿದ್ದರು. ಪದೇ ಪದೆ ರನ್ಯಾ ದುಬೈ ಟ್ರಿಪ್ಗೆ ಹೋಗುತ್ತಿದ್ದು, ಪತಿಗೆ ಅನುಮಾನ ಬಂದು ಜಗಳ ನಡೆದಿತ್ತು ಎನ್ನಲಾಗಿದೆ.
ರನ್ಯಾ ರಾವ್ ಬಂಧನದ ನಂತರ ಪತಿ ಜತೀನ್ ಹುಕ್ಕೇರಿಯನ್ನೂ ಡಿಆರ್ ಐ ಅಧಿಕಾರಿಗಳು ವಿಚಾರಣೆ ಮಾಡಿದ್ದರು. ಇದರಿಂದ ಬಂಧನ ಭೀತಿಗೆ ಒಳಗಾಗಿದ್ದ ಜತೀನ್ ಹೈಕೋರ್ಟ್ ಮೆಟ್ಟಲೇರಿದ್ದರು
ಇನ್ನೂ ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಜತಿನ್ ಹುಕ್ಕೇರಿ, ರನ್ಯಾ ಅವರಿಂದ ದೂರವಾಗುವ ನಿರ್ಧಾರವನ್ನು ದೃಢಪಡಿಸಿದ್ದಾರೆ. ಮದುವೆಯಾದ ದಿನದಿಂದ ನಾನು ನೋವು ಮತ್ತು ಯಾತನೆಯನ್ನು ಅನುಭವಿಸುತ್ತಿದ್ದೇನೆ. ಇಂದು, ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದರು.
Advertisement