ವಾಟರ್ ಬಾಟಲ್ ಆರೋಗ್ಯಕ್ಕೆ ಹಾನಿಕರ; ಅಸುರಕ್ಷಿತ ಬಾಟಲ್ ನೀರು ಪೂರೈಕೆದಾರರ ವಿರುದ್ಧ ಕ್ರಮ: ದಿನೇಶ್ ಗುಂಡೂರಾವ್

ಪರೀಕ್ಷಿಸಲಾದ 255 ಬಾಟಲ್ ನೀರಿನ ಮಾದರಿಗಳಲ್ಲಿ 72 ಬಾಟಲ್ ಗಳು ಮಾತ್ರ ಸುರಕ್ಷಿತವಾಗಿದ್ದು, ಉಳಿದ ಬಾಟಲಿಯಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿವೆ.
ಸಚಿವ ದಿನೇಶ್ ಗುಂಡೂರಾವ್
ಸಚಿವ ದಿನೇಶ್ ಗುಂಡೂರಾವ್
Updated on

ಬೆಂಗಳೂರು: ಮಿನರಲ್ ವಾಟರ್ ಬಾಟಲ್ ಗಳಲ್ಲಿಯೂ ಬ್ಯಾಕ್ಟೀರಿಯಾ ಪತ್ತೆಯಾಗಿದ್ದು, "ಅಸುರಕ್ಷಿತ" ಮತ್ತು "ಕಳಪೆ ಗುಣಮಟ್ಟದ" ಬಾಟಲ್ ಕುಡಿಯುವ ನೀರು ಪೂರೈಸುವ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂ ರಾವ್ ಮಂಗಳವಾರ ಎಚ್ಚರಿಸಿದ್ದಾರೆ.

ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ಪರೀಕ್ಷಿಸಲಾದ 255 ಬಾಟಲ್ ನೀರಿನ ಮಾದರಿಗಳಲ್ಲಿ 72 ಬಾಟಲ್ ಗಳು ಮಾತ್ರ ಸುರಕ್ಷಿತವಾಗಿದ್ದು, ಉಳಿದ ಬಾಟಲಿಯಲ್ಲಿ ಬ್ಯಾಕ್ಟೀರಿಯಾ ಪತ್ತೆಯಾಗಿವೆ. ವಾಟರ್ ಬಾಟಲ್ ಆರೋಗ್ಯಕ್ಕೆ ಹಾನಿಕರ ಎಂದು ತಿಳಿದುಬಂದಿದೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತಾಡಿದ ದಿನೇಶ್ ಗುಂಡೂರಾವ್​ ಅವರು, ವಿಶೇಷ ಅಭಿಯಾನದ ಭಾಗವಾಗಿ, ಆಹಾರ ಸುರಕ್ಷತೆ ಸಂಬಂಧಿಸಿದಂತೆ ಕಳೆದ ಫೆಬ್ರವರಿಯಲ್ಲಿ 296 ಮಾದರಿಗಳ ವಾಟರ್‌ ಬಾಟಲ್‌ಗಳ ತಪಾಸಣೆ ಮಾಡಲಾಗಿದೆ. ಆ ಪೈಕಿ 72 ಮಾದರಿಗಳು ಸುರಕ್ಷಿತ, 95 ಅಸುರಕ್ಷಿತ, 88 ಕಳಪೆ ಗುಣಮಟ್ಟದ ಬಾಟೆಲ್‌ಗಳು ಅಂತ ಗುರುತಿಸಲಾಗಿದೆ. ಕೆಮಿಕಲ್, ಬಯೋಗ್ರಾಫಿಕಲ್ ರಿಪೋರ್ಟ್ ಕೂಡ ಬಂದಿದೆ ಎಂದು ತಿಳಿಸಿದರು.

"ಕೆಲವು ಬಾಟಲ್ ಗಳು ಅಸುರಕ್ಷಿತವಾಗಿವೆ ಮತ್ತು ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತವೆ. ಇದು ತುಂಬಾ ಗಂಭೀರವಾದ ವಿಚಾರ. ನಾವು ಈಗ ಈ ಎಲ್ಲಾ ಬಾಟಲಿಗಳ ಪರೀಕ್ಷಿಸುತ್ತಿದ್ದೇವೆ ಮತ್ತು ಇಲ್ಲಿಯವರೆಗೆ ನಾವು ಕಂಡುಕೊಂಡದ್ದನ್ನು ವಶಪಡಿಸಿಕೊಂಡಿದ್ದೇವೆ. ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಮತ್ತು ಈ ಅಸುರಕ್ಷಿತ ನೀರಿನ ಬಾಟಲಿಗಳನ್ನು ಪೂರೈಸುವ ಎಲ್ಲಾ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸುತ್ತೇವೆ" ಎಂದು ಹೇಳಿದರು.

ಇನ್ನು ಐಸ್‌ಕ್ರೀಂ, ಪನ್ನೀರ್ ಬಳಿಕ ಕೋವಾದಲ್ಲೂ ಕಲಬೆರಕೆ ಪತ್ತೆಯಾಗಿದೆ. ಜ್ಯೂಸ್, ಐಸ್ ಕ್ಯಾಂಡಿ ಮತ್ತು ಐಸ್ ಕ್ರೀಮ್ ತಯಾರಿಸುವ 92 ಆಹಾರ ಉತ್ಪಾದನೆ ಮತ್ತು ಮಾರಾಟ ಮಳಿಗೆಗಳು ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂದ ನಂತರ ನೋಟಿಸ್ ನೀಡಲಾಗಿದೆ. ಆರು ಘಟಕಗಳಿಗೆ ಒಟ್ಟು 38,000 ರೂ. ದಂಡ ವಿಧಿಸಲಾಗಿದೆ ಎಂದು ಗುಂಡೂರಾವ್ ಹೇಳಿದರು.

ಸಚಿವ ದಿನೇಶ್ ಗುಂಡೂರಾವ್
ಶೇ. 90 ರಷ್ಟು ವಾಟರ್ ಬಾಟಲ್ ಬ್ರಾಂಡ್ ಗಳು ಜಾಗತಿಕವಾಗಿ ಕಲುಶಿತ

ಆಹಾರ ಇಲಾಖೆ ಐಸ್‌ಕ್ರೀಂ, ಪನ್ನೀರ್ ಹಾಗೂ ಕೋವಾ ಸ್ಯಾಂಪಲ್ ಪಡೆದು ಲ್ಯಾಬ್‌ಗೆ ಕಳುಹಿಸಿತ್ತು. ಪರೀಕ್ಷೆಯಲ್ಲಿ ಐಸ್‌ಕ್ರೀಂ, ಪನ್ನೀರ್ ಹಾಗೂ ಕೋವಾದಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಬಳಕೆ ಮಾಡಿರುವುದು ಗೊತ್ತಾಗಿದೆ. ಅಲ್ಲದೆ ಇದರ ಬಣ್ಣ ಕಾಪಾಡಲು ಯೂರಿಯಾ ಬಳಕೆ ಮಾಡಿರುವುದು ಕಂಡುಬಂದಿದೆ. ಇದರ ಬಳಕೆ ಹಾಗೂ ಸೇವನೆ ಕ್ಯಾನ್ಸರ್‌ಗೆ ಕಾರಣವಾಗಲಿದೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.

ಹುರಿದ ಹಸಿರು ಬಟಾಣಿಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ಪರಿಶೀಲಿಸಲು 115 ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಕಳುಹಿಸಲಾಗಿದೆ. ಇವುಗಳಲ್ಲಿ 46 ಮಾದರಿಗಳು ಸುರಕ್ಷಿತವೆಂದು ಕಂಡುಬಂದರೆ, 69 ಮಾದರಿಗಳು ಅಸುರಕ್ಷಿತವೆಂದು ಕಂಡುಬಂದಿದೆ. ಉಳಿದ ಮಾದರಿಗಳ ವಿಶ್ಲೇಷಣೆ ಇನ್ನೂ ನಡೆಯುತ್ತಿದೆ ಎಂದು ಅವರು ಹೇಳಿದರು.

ಹುರಿದ ಹಸಿರು ಬಟಾಣಿ ಮಾದರಿಗಳಲ್ಲಿ ಸುಮಾರು 60 ಪ್ರತಿಶತ ಅಸುರಕ್ಷಿತವಾಗಿವೆ ಎಂದು ಗಮನಿಸಿದ ಅವರು, ನಿಷೇಧಿತ ಕೃತಕ ಬಣ್ಣ ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

"ನಾವು ಸಾರ್ವಜನಿಕರಿಗೆ ಮತ್ತು ತಯಾರಕರಿಗೆ ಅರಿವು ಮೂಡಿಸಲಿದ್ದೇವೆ ಮತ್ತು ಕರ್ನಾಟಕದಾದ್ಯಂತ ಸಿಹಿತಿಂಡಿಗಳು, ತಿಂಡಿಗಳು ಮತ್ತು ಅಂತಹುದೇ ವಸ್ತುಗಳನ್ನು ಉತ್ಪಾದಿಸುವ ಎಲ್ಲರಿಗೂ ಸಲಹೆಗಳನ್ನು ನೀಡಲಿದ್ದೇವೆ. ಈ ಸಲಹೆಗಳು ಹಾನಿಕಾರಕ ಅಭ್ಯಾಸಗಳನ್ನು ಎತ್ತಿ ತೋರಿಸುತ್ತವೆ ಮತ್ತು ನಿಷೇಧಿತ ಕೃತಕ ಬಣ್ಣ ಏಜೆಂಟ್‌ಗಳನ್ನು ಬಳಸುವುದನ್ನು ತಪ್ಪಿಸುವ ಅಗತ್ಯವನ್ನು ಒತ್ತಿ ಹೇಳುತ್ತವೆ" ಎಂದು ರಾವ್ ಹೇಳಿದರು.

"ನಾವು ಈ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಅದೇ ಸಮಯದಲ್ಲಿ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ನಮ್ಮ ಆದ್ಯತೆಯಾಗಿದೆ. ಆಹಾರ ಉತ್ಪಾದನೆಯ ಗುಣಮಟ್ಟ ಸುಧಾರಿಸುವುದನ್ನು ನಾವು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ಈ ಆಹಾರ ಪದಾರ್ಥಗಳನ್ನು ತಯಾರಿಸುವವರು ಅವು ಉತ್ತಮ ಗುಣಮಟ್ಟದ್ದಾಗಿವೆ ಎಂದು ಖಚಿತಪಡಿಸಿಕೊಳ್ಳಬೇಕು" ಎಂದು ಸಚಿವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com