ತಮಿಳುನಾಡು ರಾಜ್ಯಪಾಲರ ಕುರಿತ ಸುಪ್ರೀಂ ಕೋರ್ಟ್ ತೀರ್ಪು ಮೋದಿ ನೇತೃತ್ವದ BJP ಸರ್ಕಾರಕ್ಕೆ ಎಚ್ಚರಿಕೆಯ ಪಾಠವಾಗಿದೆ: ಸಿದ್ದರಾಮಯ್ಯ

ಸುಪ್ರೀಂ ಕೋರ್ಟಿನ ತೀರ್ಪು ರಾಜ್ಯಪಾಲ ಹುದ್ದೆಯ ಕರ್ತವ್ಯಗಳ ಇತಿ-ಮಿತಿಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿರುವ ಕಾರಣದಿಂದಾಗಿ ಈ ಬಗ್ಗೆ ಇದ್ದ ಗೊಂದಲಗಳು ನಿವಾರಣೆಯಾಗಿದೆ.
PM Modi, Supreme and cm Siddu Casual image
ಪ್ರಧಾನಿ ಮೋದಿ, ಸುಪ್ರೀಂಕೋರ್ಟ್, ಸಿಎಂ ಸಿದ್ದರಾಮಯ್ಯ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್.ರವಿ ಅವರನ್ನು ತರಾಟೆಗೆ ತೆಗೆದುಕೊಂಡು, ಏಕಪಕ್ಷೀಯವಾಗಿ ಅವರು ಕೈಗೊಂಡಿರುವ ತೀರ್ಮಾನಗಳನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪು ದೇಶದ ಎಲ್ಲ ರಾಜ್ಯಪಾಲರು ಮತ್ತು ತೆರೆಯ ಹಿಂದೆ ಆಟವಾಡುತ್ತಿದ್ದ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆಯ ಪಾಠವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಹೇಳಿದ್ದಾರೆ.

ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುಪ್ರೀಂ ಕೋರ್ಟಿನ ತೀರ್ಪು ರಾಜ್ಯಪಾಲ ಹುದ್ದೆಯ ಕರ್ತವ್ಯಗಳ ಇತಿ-ಮಿತಿಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿರುವ ಕಾರಣದಿಂದಾಗಿ ಈ ಬಗ್ಗೆ ಇದ್ದ ಗೊಂದಲಗಳು ನಿವಾರಣೆಯಾಗಿದೆ. ರಾಜ್ಯ ಸರ್ಕಾರ ಅಂಗೀಕರಿಸಿದ ಮಸೂದೆಗಳಿಗೆ ರಾಪ್ಟ್ರಪತಿಗಳ ಅಂಕಿತ ಪಡೆಯುವ ಪ್ರಕ್ರಿಯೆ ಗರಿಷ್ಠ ಮೂರು ತಿಂಗಳ ಅವಧಿಯೊಳಗೆ ನಡೆಯಬೇಕು ಎಂದು ಕಾಲಮಿತಿಯನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿರುವುದರಿಂದ ಇಲ್ಲಿಯ ವರೆಗಿನ ಗೊಂದಲಗಳು ನಿವಾರಣೆಯಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯಪಾಲರು ಸಂವಿಧಾನದ ಆಶಯ ಮತ್ತು ಸಾಂವಿಧಾನಿಕ ಹುದ್ದೆಯ ಘನತೆ-ಗೌರವವನ್ನು ಗಾಳಿಗೆ ತೂರಿ ಕೇಂದ್ರ ಸರ್ಕಾರದ ಕೈಗೊಂಬೆಗಳಾಗಿ ವರ್ತಿಸುತ್ತಿರುವ ಆರೋಪಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಕೇಳಿ ಬರತೊಡಗಿವೆ. ಇದರಿಂದಾಗಿ ಗೌರವಾನ್ವಿತ ರಾಜ್ಯಪಾಲರ ಹುದ್ದೆ ಜನತೆಯ ವಿಶ್ವಾಸವನ್ನು ಕಳೆದುಕೊಳ್ಳುವಂತಾಗಿದೆ.

PM Modi, Supreme and cm Siddu Casual image
Governor’s powers: ರಾಜ್ಯಪಾಲರ ಅಧಿಕಾರ, ಹೊಣೆಗಾರಿಕೆ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು; ಹೇಳಿದ್ದು ಹೀಗೆ...

ತಮ್ಮ ಪಕ್ಷವನ್ನು ಜನ ತಿರಸ್ಕರಿಸಿದ ರಾಜ್ಯಗಳಲ್ಲಿ ತಮ್ಮ ಅಣತಿಯನ್ನು ಪಾಲಿಸುವ ರಾಜ್ಯಪಾಲರನ್ನು ನೇಮಿಸಿ ಅವರ ಮೂಲಕ ಪರೋಕ್ಷವಾಗಿ ಆಡಳಿತವನ್ನು ನಿಯಂತ್ರಿಸಲು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮಾಡುತ್ತಿರುವ ಪ್ರಯತ್ನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆಯುತ್ತಿರುವ ದ್ರೋಹವಾಗಿದೆ. ಕರ್ನಾಟಕದಲ್ಲಿ ಕೂಡಾ ವಿಧಾನಮಂಡಲ ಅಂಗೀಕರಿಸಿದ ಕೆಲವು ಮಸೂದೆಗೆಳ ಬಗ್ಗೆ ರಾಷ್ಟ್ರಪತಿಗಳ ಅಂಕಿತ ಪಡೆಯಲು ರಾಜ್ಯಪಾಲರು ವಿಳಂಬ ಧೋರಣೆಯನ್ನು ಅನುಸರಿಸುತ್ತಿರುವುದು ಸಂಘರ್ಷಕ್ಕೆ ಕಾರಣವಾಗಿದೆ. ಹೀಗಿದ್ದರೂ ನಮ್ಮ ಸರ್ಕಾರ ಅನಗತ್ಯವಾಗಿ ಈ ಬೆಳವಣಿಗೆಗೆ ರಾಜಕೀಯ ಬೆರೆಸದೆ ಸಂಯಮದಿಂದ ನಡೆದುಕೊಂಡಿದೆ. ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವಿನ ಅನಗತ್ಯ ಸಂಘರ್ಷವನ್ನು ಸುಪ್ರೀಂ ಕೋರ್ಟ್ ನ ಈ ತೀರ್ಪು ಶಾಶ್ವತವಾಗಿ ಕೊನೆಗೊಳಿಸಲಿದೆ ಎಂದು ನಂಬಿದ್ದೇನೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com