ತಿಂಗಳುಗಳಿಂದ ಸಿಗದ ವೇತನ: 30ಕ್ಕೂ ಹೆಚ್ಚು BBMP ಲೇಕ್ ಮಾರ್ಷಲ್‌ಗಳು ರಾಜೀನಾಮೆ!

ಸುಮಾರು 50 ಮಾರ್ಷಲ್‌ಗಳು ವರ್ತೂರು ಮತ್ತು ಬೆಳ್ಳಂದೂರು ಕೆರೆಗಳನ್ನು 24x7 ಪಾಳಿಯಲ್ಲಿ ಕಾವಲು ಕಾಯುತ್ತಿದ್ದರು.
BBMP
ಬಿಬಿಎಂಪಿ
Updated on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ವೇತನ ಪಾವತಿ ವಿಳಂಬವಾದ ಕಾರಣ ಕೆರೆಗಳನ್ನು ಕಾಯುತ್ತಿದ್ದ ಬಿಬಿಎಂಪಿ ಮಾರ್ಷಲ್‌ಗಳು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ಭದ್ರತೆ ಕಳವಳಕಾರಿಯಾಗಿದ್ದು, ಇದು ನಿವಾಸಿಗಳು ಮತ್ತು ಕಾರ್ಯಕರ್ತರು ಕೆರೆಗಳ ಸುರಕ್ಷತೆಯ ಬಗ್ಗೆ ಚಿಂತೆಗೀಡುವಂತೆ ಮಾಡಿದೆ.

ವರ್ತೂರು ಸರೋವರ ಕಾರ್ಯಕರ್ತ ಜಗದೀಶ್ ರೆಡ್ಡಿ ಅವರ ಪ್ರಕಾರ, ಕೆರೆಯ ಬಫರ್ ವಲಯವು ವಲಸಿಗರಿಂದ ಆಕ್ರಮಿಸಲ್ಪಟ್ಟಿದ್ದು, ಅವರು ಬಹಳಷ್ಟು ಕಸ ತಂದು ಸುರಿಯುತ್ತಾರೆ. ಹೀಗಾಗಿ ಬೆಂಕಿ ಅವಘಡಗಳು ಸಂಭವಿಸಬಹುದು ಮತ್ತು ಮಾಲಿನ್ಯಕಾರಕಗಳು ಮತ್ತೆ ಸರೋವರಗಳಲ್ಲಿ ಸೇರಬಹುದು. ಸುಮಾರು 50 ಮಾರ್ಷಲ್‌ಗಳು ವರ್ತೂರು ಮತ್ತು ಬೆಳ್ಳಂದೂರು ಕೆರೆಗಳನ್ನು 24x7 ಪಾಳಿಯಲ್ಲಿ ಕಾವಲು ಕಾಯುತ್ತಿದ್ದರು. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ, ಎರಡೂ ಕೆರೆಗಳಲ್ಲಿ ಕೇವಲ ಎರಡು ಅಥವಾ ಮೂರು ಮಾರ್ಷಲ್‌ಗಳು ಮಾತ್ರ ಕಂಡುಬರುತ್ತಿದ್ದಾರೆ ಎಂದು ರೆಡ್ಡಿ ಹೇಳಿದರು.

ಕೆರೆಯ ಮಾಲಿನ್ಯದಿಂದಾಗಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಈ ಪ್ರಕರಣವನ್ನು ಕೈಗೆತ್ತಿಕೊಂಡು ರಾಜ್ಯ ಸರ್ಕಾರದ ಮೇಲೆ 500 ಕೋಟಿ ರೂ.ಗಳ ದಂಡ ವಿಧಿಸಿತು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಕೆರೆಯನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿ ನೀಡಿತು, ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಮಾರ್ಷಲ್‌ಗಳ ನಿಯೋಜನೆಯಂತಹ ಭದ್ರತೆಯ ಜವಾಬ್ದಾರಿಯನ್ನು ವಹಿಸಿತು ಎಂದು ಅವರು ಹೇಳಿದರು.

ವರ್ತೂರು ಕೆರೆಯಲ್ಲಿ ಸುಮಾರು 25 ಮಾರ್ಷಲ್‌ಗಳು ಕಾವಲು ಕಾಯುತ್ತಿದ್ದರು, ಮತ್ತು ಬೆಳ್ಳಂದೂರು ಕೆರೆಯಲ್ಲಿ 25 ಜನರನ್ನು ನಿಯೋಜಿಸಲಾಗಿತ್ತು, ಗಸ್ತು ವಾಹನವನ್ನು ಕೆರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುತ್ತಲು ಒದಗಿಸಲಾಗಿತ್ತು.

BBMP
BBMP: 'ಕಸ ಸಂಗ್ರಹಣೆ, ರಸ್ತೆ ಬದಿ ಪಾರ್ಕಿಂಗ್ ಗೆ ನಾವು ಹಣ ಕೊಡಲ್ಲ': ಸರ್ಕಾರದ ವಿರುದ್ಧ ನಾಗರೀಕರ ಸಹಿ ಅಭಿಯಾನ!

ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗವು ಸಮಯಕ್ಕೆ ಸರಿಯಾಗಿ ಸಂಬಳ ನೀಡುವುದಿಲ್ಲ, ಆದರೆ ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುತ್ತಾರೆ ಎಂದು ಮಾರ್ಷಲ್‌ಗಳು ಹೇಳುತ್ತಾರೆ. ಪಾವತಿ ವಿಳಂಬ ಮತ್ತು ಕುಟುಂಬಗಳ ಮೇಲಿನ ಆರ್ಥಿಕ ಒತ್ತಡದಿಂದಾಗಿ, 30 ಕ್ಕೂ ಹೆಚ್ಚು ಜನರು ರಾಜೀನಾಮೆ ನೀಡಿದ್ದಾರೆ ಎಂದು ರೆಡ್ಡಿ ತಿಳಿಸಿದರು.

ಬೆಂಗಳೂರಿನ ಎರಡು ದೊಡ್ಡ ಜಲಮೂಲಗಳ ಅಭಿವೃದ್ಧಿ ಮತ್ತು ರಕ್ಷಣೆಗೆ ಜವಾಬ್ದಾರರಾಗಿರುವ ಏಜೆನ್ಸಿಗಳಾದ ಬಿಡಿಎ ಮತ್ತು ಬಿಬಿಎಂಪಿ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನದ ಹೊರತಾಗಿಯೂ ಸರೋವರಗಳನ್ನು ನಿರ್ಲಕ್ಷಿಸುತ್ತಲೇ ಇವೆ ಎಂದು ರೆಡ್ಡಿ ಹೇಳಿದರು. ಮಾರ್ಷಲ್‌ಗಳ ಅನುಪಸ್ಥಿತಿಯಲ್ಲಿ, ಸರೋವರ ಆವರಣದಲ್ಲಿ ಸುರಕ್ಷತೆಯ ಕಾಳಜಿ ಇದೆ ಎಂದು ನಿವಾಸಿಗಳು ಹೇಳುತ್ತಾರೆ.

ತುರ್ತು ಪರಿಸ್ಥಿತಿಯಲ್ಲಿಯೂ ಸಹ, ಬಿಬಿಎಂಪಿ ನಮ್ಮ ಸಂಬಳ ಬಿಡುಗಡೆ ಮಾಡುವುದಿಲ್ಲ ಎಂದು ಹೆಸರು ಬಹಿರಂಗಪಡಿಸಲು ಬಯಸದ ಮಾರ್ಷಲ್ ಒಬ್ಬರು ಹೇಳಿದ್ದಾರೆ. ಜನವರಿಯಲ್ಲಿ, NCC ಹಿನ್ನೆಲೆ ಹೊಂದಿರುವ ಮಾರ್ಷಲ್‌ಗಳಿಗೆ 20,000 ರೂ. ವೇತನ ನಿಗದಿಪಡಿಸಲಾಗಿತ್ತು. ಆದರೆ ಅವರಿಗೆ ಕೇವಲ 13,000 ರೂ.ಗಳನ್ನು ಮಾತ್ರ ನೀಡಲಾಯಿತು. ಇಷ್ಟು ಕಡಿಮೆ ಮೊತ್ತದಿಂದ ನಾವು ಕುಟುಂಬವನ್ನು ಹೇಗೆ ನಡೆಸಬಹುದು? ಎಂದು ಪ್ರಶ್ನಿಸಿದ್ದಾರೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಮಾರ್ಷಲ್‌ ನಿರ್ವಹಿಸುವ ಹಿರಿಯ ಅಧಿಕಾರಿಯೊಬ್ಬರು, ವಿಳಂಬವು ಕೆರೆ ವಿಭಾಗದ ವೇತನ ಪ್ಯಾಕೇಜ್‌ನಿಂದ ಉಂಟಾಗಿದೆ ಎಂದು ಹೇಳಿದ್ದಾರೆ. ಈ ಹಿಂದೆ, ಘನತ್ಯಾಜ್ಯ ನಿರ್ವಹಣಾ ಇಲಾಖೆಯಿಂದ ವೇತನ ನೀಡಲಾಗುತ್ತಿತ್ತು, ಆದರೆ ಈಗ ಕೆರೆ ಕಾಯುವ ಮಾರ್ಷಲ್‌ಗಳಿಗೆ ಕೆರೆ ನಿರ್ವಹಣೆ ಮಾಡುವ ಇಲಾಖೆಯಿಂದ ಪಾವತಿಸಲಾಗುತ್ತದೆ. ಈ ಬದಲಾವಣೆಯಿಂದಾಗಿ ವೇತನ ವಿಳಂಬವಾಗಿದೆ ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com