
ಬಳ್ಳಾರಿ: 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬಳ್ಳಾರಿಯಲ್ಲಿ, ಇಲ್ಲಿನ ಹವಾಗುಣಕ್ಕೆ ತಕ್ಕಂತೆ ಡಿಸೆಂಬರ್ನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿ ಅವರು ಮಂಗಳವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಜೋಶಿ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದಿವೆ. ಈಗ 67 ವರ್ಷಗಳ ಬಳಿಕ ನಡೆಯುತ್ತಿರುವ ಈ ಸಮ್ಮೇಳನವನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳೆರಡೂ ಒಟ್ಟುಗೂಡಿ ನಡೆಸಲಿವೆ ಎಂದರು.
ಬಳ್ಳಾರಿ ಕನ್ನಡದ ಅಸ್ಮಿತೆ ತೋರಿದ ಜಿಲ್ಲೆಯಾಗಿದೆ. ಸಾಂಸ್ಕೃತಿಕವಾಗಿ ಬಳ್ಳಾರಿ ಮತ್ತು ವಿಜಯನಗರ ಒಂದೇ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಈವರೆಗೆ ನಾಲ್ಕು ಬಾರಿ ಸಾಹಿತ್ಯ ಸಮ್ಮೇಳನ ನಡೆದಿದೆ. ಹೊಸಪೇಟೆಯಲ್ಲಿ 1920ರಲ್ಲಿ ಆರನೇ ಸಾಹಿತ್ಯ ಸಮ್ಮೇಳನ, 1926 ರಲ್ಲಿ 12ನೇ ಸಾಹಿತ್ಯ ಸಮ್ಮೇಳನ, 1947ರಲ್ಲಿ 30ನೇ ಮತ್ತು 1958ರಲ್ಲಿ 50ನೇ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿತ್ತು. ಇದೀಗ ಸುದೀರ್ಘ 67 ವರ್ಷದ ಬಳಿಕ 88ನೇ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ಆಯೋಜನೆ ಮಾಡಲಾಗಿದೆ ಎಂದು ಜೋಶಿ ಮಾಹಿತಿ ನೀಡಿದರು.
ಇನ್ನೂ ಬಳ್ಳಾರಿಯಲ್ಲಿ ಕೋಟೆ, ಬಿಸಿಲು, ಗಣಿ, ಗಡಿ ಇರುವಂತಹದ್ದು. ಹೀಗಾಗಿ ಡಿಸೆಂಬರ್ನಲ್ಲಿ ಹವಾಮಾನಕ್ಕೆ ಅನುಗುಣವಾಗಿ ಸಾಹಿತ್ಯ ಸಮ್ಮೇಳನ ಆಯೋಜನೆ ಮಾಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಲಾಗಿದೆ ಎಂದರು.
ಈ ಬಾರಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ವಿದೇಶದಲ್ಲಿನ ಕನ್ನಡಿಗರನ್ನು ಆಹ್ವಾನಿಸಲಾಗಿದ್ದು, ವಿಶೇಷವಾಗಿ ಬಳ್ಳಾರಿ ಮೊದಲ ಜಿಲ್ಲಾಧಿಕಾರಿ ಥಾಮಸ್ ಮನ್ರೋ ಅವರ ಕುಟುಂಬದವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಯಾಕೆಂದರೆ ಕನ್ನಡದಲ್ಲಿ ಆಡಳಿತ ನಡೆಸಿದ್ದ ಹಿನ್ನೆಲೆ ಅವರ ಕುಟುಂಬದವರನ್ನು ಆಹ್ವಾನಿಸಿ ಗೌರವಿಸಲಾಗುವುದು ಎಂದರು.
ಈ ಸಮ್ಮೇಳನ ಅತ್ಯಂತ ಯಶಸ್ವಿ ಮತ್ತು ಮುಂದಿನ ಸಮ್ಮೇಳನಕ್ಕೆ ಮಾರ್ಗದರ್ಶಿಯಾಗಲಿ ಎಂಬ ಉದ್ದೇಶದಿಂದ ಅಚ್ಚುಕಟ್ಟಾಗಿ ಆಯೋಜಿಸಲು ತೀರ್ಮಾನಿಸಿದ್ದೇವೆ. ಕನ್ನಡಕ್ಕೆ ಧರ್ಮ, ಜಾತಿಯಿಲ್ಲ. ಹನುಮಂತ ಜನಿಸಿದ ನಾಡು, ಹನುಮಂತನಿಗೆ ಜಾತಿಯಿಲ್ಲ. ಎಲ್ಲ ಜಾತಿಯವರು ಪೂಜಿಸುತ್ತಾರೆ. ಎಲ್ಲರೂ ಸೇರಿ ಕನ್ನಡದ ತೇರು ಎಳೆಯೋಣ ಎಂದರು.
Advertisement