
ಬೆಂಗಳೂರು: ಜಾತಿ ಜನಗಣತಿ ಎಂದು ಕರೆಯಲ್ಪಡುವ ಸಾಮಾಜಿಕ-ಆರ್ಥಿಕ ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಸಿದ್ದರಾಮಯ್ಯ ಸಚಿವ ಸಂಪುಟ ಅಂಗೀಕರಿಸಿದೆ. ಇದರಿಂದಾಗಿ ರಾಜ್ಯದ ಎರಡು ಅತ್ಯಂತ ಪ್ರಬಲ ಸಮುದಾಯಗಳು ವರದಿಯನ್ನು ತಿರಸ್ಕರಿಸುವ ಲಕ್ಷಣಗಳು ಕಾಣುತ್ತಿರುವುದರಿಂದ ರಾಜಕೀಯ ಧ್ರುವೀಕರಣಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಮುಸ್ಲಿಮರು, ಕುರುಬರು ಮತ್ತು ಪರಿಶಿಷ್ಟ ಜಾತಿಗಳ ಒಂದು ಭಾಗದ ಕೆಲವು ಸಮುದಾಯಗಳು ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲಬಹುದು, ಆದರೆ ಇತರರು ತಮ್ಮ ಜನಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿ ದಂಗೆ ಏಳಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಸಮೀಕ್ಷೆಯನ್ನು ವಿರೋಧಿಸುವವರು ಇದು ಅವೈಜ್ಞಾನಿಕ ಎಂದು ಹೇಳುತ್ತಾರೆ ಏಕೆಂದರೆ ಜಾತಿ ಗಣತಿಯಿಂದ ಹೆಚ್ಚಿನ ಜನಸಂಖ್ಯೆಯನ್ನು ಹೊರಗಿಡಲಾಗಿದೆ. ಸಮೀಕ್ಷೆಗಾಗಿ ಯಾವುದೇ ಗಣತಿದಾರರು ನನ್ನ ಮನೆಗೆ ಭೇಟಿ ನೀಡಿಲ್ಲ ಎಂದು ವೀರಶೈವ ಮಹಾಸಭಾದ ಅಧ್ಯಕ್ಷ ಮತ್ತು ಹಿರಿಯ ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಎಣಿಕೆಯ ಮೇಲ್ವಿಚಾರಣೆ ವಹಿಸಿದ್ದ ಕನಕರಾಜು ಆಯೋಗವು, ಸಮೀಕ್ಷೆಯು ಏಪ್ರಿಲ್ 11, 2015 ರಂದು ಪ್ರಾರಂಭವಾಗಿ ಮೇ 30, 2015 ರಂದು ಕೊನೆಗೊಂಡಿತು ಎಂದು ಹೇಳಿಕೊಂಡಿದೆ. ತನ್ನ ಅಧಿಕಾರಾವಧಿಯ 50 ದಿನಗಳಲ್ಲಿ 5.9 ಕೋಟಿ ಜನರನ್ನು ಸಮೀಕ್ಷೆ ಮಾಡಿರುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಬಿಜೆಪಿ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಮತ್ತು ಬಿ. ಸುರೇಶ್ ಗೌಡ ಹೇಳಿದ್ದಾರೆ. ವೀರಶೈವ-ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಕೆಲವು ಕಾಂಗ್ರೆಸ್ ಶಾಸಕರು ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ವೀರಶೈವ-ಲಿಂಗಾಯತರು ಮತ್ತು ಒಕ್ಕಲಿಗರು ವರದಿಯನ್ನು ರದ್ದುಗೊಳಿಸಿ ಹೊಸ ಸಮೀಕ್ಷೆಯನ್ನು ನಡೆಸಬೇಕೆಂದು ಒತ್ತಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಮೀಕ್ಷೆಯನ್ನು ಅಧಿಕೃತವಾಗಿ ಘೋಷಿಸಿದ ನಂತರ ಪ್ರತಿಭಟನೆಯು ಮತ್ತಷ್ಟು ವೇಗ ಪಡೆಯುತ್ತದೆ ಎಂದು ಮೂಲಗಳು ತಿಳಿಸಿವೆ.
ಉದಾಹರಣೆಗೆ, ಸೋರಿಕೆಯಾದ ವರದಿಯಲ್ಲಿ ತಿಗಳ ಜನಸಂಖ್ಯೆ 5 ಲಕ್ಷ ಎಂದು ಅಂದಾಜಿಸಲಾಗಿದೆ, ಆದರೆ ಸಮುದಾಯದ ನಾಯಕರು ಅವರು 30 ಲಕ್ಷಕ್ಕೂ ಹೆಚ್ಚು ಎಂದು ಹೇಳುತ್ತಾರೆ. ವರದಿಯಲ್ಲಿ ಸಿದ್ದರಾಮಯ್ಯ ಕೈವಾಡವಿರಬಹುದು ಮತ್ತು ಅವರು ಕುರುಬ ಸಮುದಾಯ ಮತ್ತು ಮುಸ್ಲಿಮರ ಬಗ್ಗೆ ಒಲವು ತೋರಿರಬಹುದು ಎಂದು ಭಾವಿಸಲಾಗಿದೆ ಎಂದು ಕೆಲವು ಹಿಂದುಳಿದ ವರ್ಗಗಳ ಸಮುದಾಯಗಳು ಆರೋಪಿಸಿವೆ.
ಹಿಂದುಳಿದ ವರ್ಗಗಳ ಕೋಟಾವನ್ನು ಪುನರ್ರಚಿಸಿ ಅದನ್ನು ಶೇ. 32 ರಿಂದ ಶೇ.51 ಕ್ಕೆ ಹೆಚ್ಚಿಸಬೇಕೆಂದು ವರದಿ ಶಿಫಾರಸು ಮಾಡಿದೆ. ಕುರುಬರನ್ನು 'ಅತ್ಯಂತ ಹಿಂದುಳಿದ' ವರ್ಗದ ಅಡಿಯಲ್ಲಿ ತರಬೇಕೆಂದು ವರದಿ ಶಿಫಾರಸು ಮಾಡಿದೆ.
ಸಿದ್ದರಾಮಯ್ಯ ಸರ್ಕಾರವು ತನ್ನ ಮೊದಲ ಅವಧಿಯಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡಲು ಪ್ರಯತ್ನಿಸುವ ಮೂಲಕ ಹುಟ್ಟುಹಾಕಿದ ವಿವಾದಕ್ಕೆ ವಿಶ್ಲೇಷಕರು ಪ್ರಸ್ತುತ ಪರಿಸ್ಥಿತಿಯನ್ನು ಹೋಲಿಸುತ್ತಾರೆ. ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಪ್ರಸ್ತಾಪ ಸರ್ಕಾರಕ್ಕೆ ಭಾರೀ ಹಿನ್ನಡೆ ಉಂಟು ಮಾಡಿತ್ತು, ಹೀಗಾಗಿ 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು ಎಂದಿದ್ದಾರೆ.
ಸೋಮವಾರ, ಏಪ್ರಿಲ್ 17 ರಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರವೇ ವರದಿಗೆ ಪ್ರತಿಕ್ರಿಯಿಸುವುದಾಗಿ ಸಿದ್ದರಾಮಯ್ಯ ಹೇಳಿದರು. ಆದರೆ ಸೋರಿಕೆಯಾದ ವರದಿಯನ್ನು ನಂಬುವುದಾದರೆ ಮತ್ತು ಫೆಬ್ರವರಿ 29, 2024 ರಂದು ಸರ್ಕಾರಕ್ಕೆ ಸಲ್ಲಿಸಲಾದ ಕೆ ಜಯಪ್ರಕಾಶ್ ಹೆಗ್ಡೆ ಅವರ ಶಿಫಾರಸುಗಳನ್ನು ಅದರಲ್ಲಿ ಸೇರಿಸಿದರೆ, ಅದು ವಿವಾದಕ್ಕೆ ಕಾರಣವಾಗುತ್ತದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ವರದಿ ಪ್ರಕಾರ ಒಕ್ಕಲಿಗರ ಜನಸಂಖ್ಯೆ 73 ಲಕ್ಷ ಎಂದು ಹೇಳುತ್ತದೆ ಮತ್ತು ವರ್ಗ 3 (A) ಅಡಿಯಲ್ಲಿ ಸಮುದಾಯಕ್ಕೆ ಮೀಸಲಾತಿಯನ್ನು ಶೇ. 4 ರಿಂದ ಶೇ. 7 ಕ್ಕೆ ಹೆಚ್ಚಿಸಲು ಶಿಫಾರಸು ಮಾಡುತ್ತದೆ. ವೀರಶೈವ-ಲಿಂಗಾಯತರ ಜನಸಂಖ್ಯೆಯನ್ನು 81.3 ಲಕ್ಷಕ್ಕೆ ನಿಗದಿಪಡಿಸಲಾಗಿದೆ ಮತ್ತು ವರ್ಗ 3 (B) ಅಡಿಯಲ್ಲಿ ಕೋಟಾವನ್ನು ಶೇ. 5 ರಿಂದ 8ಕ್ಕೆ ಹೆಚ್ಚಿಸುವ ಶಿಫಾರಸು ಇದೆ. ಹೀಗಾಗಿ ಈ ಶಿಫಾರಸ್ಸುಗಳು ಸಮುದಾಯಗಳನ್ನು ಸಮಾಧಾನಪಡಿಸುವ ಸಾಧ್ಯತೆಯಿಲ್ಲ. ಬದಲಿಗೆ ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ.
ಉಪಜಾತಿಗಳನ್ನು ಒಳಗೊಂಡಂತೆ ಒಂದು ಬ್ಲಾಕ್ ಎಂದು ಪರಿಗಣಿಸಿದರೆ, ವೀರಶೈವ-ಲಿಂಗಾಯತರ ಜನಸಂಖ್ಯೆಯು ಒಂದು ಕೋಟಿ ಆಗುತ್ತದೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿರುವುದಾಗಿ ತಿಳಿದು ಬಂದಿದೆ.
Advertisement