
ಬೆಂಗಳೂರು: ಹಿಂದೂಗಳಂತೆ ಮುಸ್ಲಿಮರಲ್ಲಿ 93 ಜಾತಿ, ಉಪಜಾತಿಗಳು ಜಾತಿ ಸಮೀಕ್ಷೆ ವೇಳೆ ಕಂಡುಬಂದಿರುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಗುರುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಸ್ಲಿಮರ ಮನವಿಯ ಮೇಲೆ ಅವುಗಳನ್ನೆಲ್ಲ ಪರಿಶೀಲಿಸಿ ನಾವು ತೀರ್ಮಾನ ತಗೊಂಡಿದ್ದೇವೆ ಎಂದರು.
ಮುಸ್ಲಿಮರ ಉಪಜಾತಿಗಳನ್ನು ಒಂದೇ ಕಡೆ ತೋರಿಸಲಾಗಿದೆ. ಹಿಂದೂಗಳನ್ನು ಬೇರೆ ಬೇರೆ ತೋರಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಸ್ಲಿಮರನ್ನು ಒಂದೇ ಕಡೆಯಲ್ಲಿ ಸೇರಿಸಿದ್ದೇವೆ. ಆದಾಗ್ಯೂ, ಕೆಲವು ಬೇರೆ ಬೇರೆಯೂ ಇವೆ. ಕೆಲವರನ್ನು ಅಲೆಮಾರಿಯಲ್ಲೂ ಸೇರಿಸಲಾಗಿದೆ. ಈಗ ಪಿಂಜಾರ, ಪಿಂಜಾರ ಜಪ್ಪರ್ ಇವರೆಲ್ಲ ಇದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಸಿದ್ಧಪಡಿಸಲಾಗಿರುವ ಜಾತಿ ಗಣತಿ ವರದಿಯಲ್ಲಿ ಯಾವುದೇ ದೊಡ್ಡ ತಪ್ಪಿಲ್ಲ. ನನಗೆ ವರದಿ ಅಥವಾ ಸಂಗ್ರಹಿಸಲಾದ ಮಾಹಿತಿಯಲ್ಲಿ ಯಾವುದೇ ದೊಡ್ಡ ತಪ್ಪು ಇದೆ ಅನಿಸುತ್ತಿಲ್ಲ. ಸಣ್ಣ ತಪ್ಪುಗಳಿರಬಹುದು. ಇದರ ಬಗ್ಗೆ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಇನ್ನು ಕೆಲವರು ವರದಿಯನ್ನು ಪರಿಶೀಲಿಸದೆ, ಓದದೆ ಜಾತಿ ಗಣತಿ ವರದಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿ ವರದಿಗೆ ಸಹಿ ಮಾಡಿದ ನಂತರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಮೀಸಲಾತಿ ಮಿತಿ ಕುರಿತು ಮಾತನಾಡಿದ ಹೆಗ್ಡೆ, ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗದ (EWS)ಮೀಸಲಾತಿಯನ್ನು ಶೇಕಡಾ 10 ರಷ್ಟು ಹೆಚ್ಚಿಸಿದೆ. ಸಾಂವಿಧಾನಿಕ ತಿದ್ದುಪಡಿಗೆ ನ್ಯಾಯಾಲಯವು ತನ್ನ ಸಮ್ಮತಿಯನ್ನು ನೀಡಿದೆ. ಭವಿಷ್ಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ. ಅದನ್ನು ನ್ಯಾಯಾಂಗದ ವಿವೇಚನೆಗೆ ಬಿಡಲಾಗಿದೆ ಎಂದರು.
Advertisement