
ಬೆಂಗಳೂರು: ಸರ್ಕಾರಿ ಆದೇಶ, ಸುತ್ತೋಲೆ, ಯೋಜನೆ ಹಾಗೂ ವಿವಿಧ ಸೇವೆಗಳ ಕುರಿತು ಜನರಿಗೆ ಒಂದೇ ವೇದಿಕೆಯಲ್ಲಿ ಮಾಹಿತಿ ಸಿಗುವಂತೆ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದ್ದು, ಇದಕ್ಕಾಗಿ ಕೃತಕ ಬುದ್ಧಿಮತ್ತೆ (ಎಐ) ನೆರವು ಪಡೆಯಲು ಮುಂದಾಗಿದೆ.
ಬಹುತೇಕ ಸರ್ಕಾರಿ ಇಲಾಖೆಗಳು, ವಿಶೇಷವಾಗಿ ಸಾರ್ವಜನಿಕರೊಂದಿಗೆ ನೇರವಾಗಿ ಸಂವಹನ ನಡೆಸುವ ಇಲಾಖೆಗಳು, ಕಾಲಕಾಲಕ್ಕೆ ಸರ್ಕಾರಿ ಆದೇಶಗಳು, ಸುತ್ತೋಲೆಗಳು, ಅಧಿಸೂಚನೆಗಳು ಮತ್ತು ಇತರ ದಾಖಲೆಗಳನ್ನು ನೀಡುತ್ತಲೇ ಇರುತ್ತವೆ. ಇವುಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಮಾಡಲು ಸರ್ಕಾರ ಮುಂದಾಗಿದೆ.
ಆರಂಭಿಕ ಯೋಜನೆಯಾಗಿ ಇ-ಆಡಳಿತ ಕೇಂದ್ರ (ಸಿಇಜಿ) ಕಂದಾಯು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ನಾಲ್ಕರಿಂದ ಐದು ಇಲಾಖೆಗಳನ್ನು ಆಯ್ಕೆ ಮಾಡಿದ್ದು. ಎಐ ನೆರವಿನ ಮೂಲಕ ಈ ಇಲಾಖೆಗಳ ಸುತ್ತೋಲೆ. ಆದೇಶ ಹಾಗೂ ಇತರೆ ಮಾಹಿತಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲು ಮುಂದಾಗಿದೆ.
ಸಿಇಜಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಶ್ ಶಶಿ ಅವರು ಮಾತನಾಡಿ, ಈ ದಾಖಲೆಗಳನ್ನು ಪ್ರತಿಯೊಂದು ಇಲಾಖೆಯ ವೆಬ್ಸೈಟ್ನಲ್ಲಿ ಕೀವರ್ಡ್ಗಳನ್ನು ಬಳಸಿಕೊಂಡು ಹುಡುಕಬಹುದು ಎಂದು ಹೇಳಿದ್ದಾರೆ.
ನಾವು ಇಲಾಖಾವಾರು ಗುರಿಯನ್ನು ಹೊಂದಿದ್ದೇವೆ. ಇದು ಒಂದು ದೊಡ್ಡ ಕೆಲಸವಾಗಿದೆ. ಸರ್ಕಾರಿ ದಾಖಲೆಗಳನ್ನು ಆಯ್ಕೆ ಮಾಡಲು ಇಲಾಖಾ ಮುಖ್ಯಸ್ಥರು ಸಂಬಂಧಿತ ದಾಖಲೆಗಳ ಬಗ್ಗೆ ನಮಗೆ ತಿಳಿಸಬೇಕು. ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಸೂಚನೆಗಳು ಮತ್ತು ಸುತ್ತೋಲೆಗಳನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಯೊಂದು ಸರ್ಕಾರಿ ವೆಬ್ಸೈಟ್ನಲ್ಲಿ ಪಾಪ್-ಅಪ್ ವಿಂಡೋ ಇರುತ್ತದೆ. ಬಳಕೆದಾರರು ಅಗತ್ಯವಿರುವ ದಾಖಲೆಗಳನ್ನು ಕೇಳಬಹುದು ಎಂದು ಸಿಇಜಿ ಕೃತಕ ಬುದ್ಧಿಮತ್ತೆ ಕೋಶದ ಯೋಜನಾ ನಿರ್ದೇಶಕ ಶ್ರೀವ್ಯಾಸ್ ಹೆಚ್.ಎಂ ಅವರು ಹೇಳಿದ್ದಾರೆ.
ಸಾರ್ವಜನಿಕರಿಗಷ್ಟೇ ಅಲ್ಲ, ಸರ್ಕಾರಿ ನೌಕರರಿಗೂ ಕೂಡ ಸರ್ಕಾರಿ ಆದೇಶ ಹಾಗೂ ಸುತ್ತೋಲೆಗಳು ಕೆಲವೊಮ್ಮೆ ಲಭ್ಯವಾಗುವುದಿಲ್ಲ. ಈ ದಾಖಲೆಗಳ ಪಡೆಯಲು ನಮ್ಮಲ್ಲಿ ಕೇಂದ್ರೀಕೃತ ವ್ಯವಸ್ಥೆಯಿಲ್ಲ. ಹೀಗಾಗಿ, ಎಐ ನೆರವು ಪಡೆಯಲು ನಿರ್ಧರಿಸಿದ್ದೇನವೆ. ಆರಂಭದಲ್ಲಿ ಸರ್ಕಾರಿ ಸಿಬ್ಬಂದಿಗಳಿಗಾಗಿ ವ್ಯವಸ್ಥೆ ಜಾರಿ ಮಾಡಲಾಗುವುದು. ಇದು ಅಭಿವೃದ್ಧಿ ಹಂತದಲ್ಲಿದ್ದು, 2 ತಿಂಗಳಲ್ಲಿ ಎಐ ವ್ಯವಸ್ಧೆ ಜಾರಿಗೆ ತರುವ ನಿರೀಕ್ಷೆಯಲ್ಲಿದ್ದೇವೆಂದು ತಿಳಿಸಿದ್ದಾರೆ.
ಸರ್ಕಾರಿ ಸಿಬ್ಬಂದಿಗಳು ಮೊದಲಿಗೆ ಈ ವ್ಯವಸ್ಥೆಯನ್ನು ಬಳಕೆ ಮಾಡುತ್ತಾರೆ. ಅವರ ಪ್ರತಿಕ್ರಿಯೆ ಹಾಗೂ ಉತ್ತಮ ಸುಧಾರಣೆ ಬಳಿಕ ಸಾರ್ವಜನಿಕರಿಗೂ ವ್ಯವಸ್ಥೆ ತಲುಪಿಸುವ ವ್ಯವಸ್ಥೆ ಮಾಲಾಗುವುದು ಎಂದು ಹೇಳಿದ್ದಾರೆ.
Advertisement