ಜಾತಿ ಗಣತಿ ವರದಿ: ತಪ್ಪು ಹೆಜ್ಜೆ ಇಟ್ಟರೆ ಅಪಾಯ ಕಟ್ಟಿಟ್ಟ ಬುತ್ತಿ; ಸತೀಶ್ ಜಾರಕಿಹೊಳಿ ಎಚ್ಚರಿಕೆ

ಇದು ಇಂದು ಅಥವಾ ನಾಳೆ ಆಗುವ ವಿಷಯವಲ್ಲ, ಒಂದು ವರ್ಷ ಸಮಯ ತೆಗೆದುಕೊಳ್ಳಬಹುದು. ನಾಳೆ ವರದಿ ಜಾರಿ ಆಗುತ್ತೆ ಅಂತ ನಿರೀಕ್ಷಿಸಬೇಡಿ.
satish jarkiholi
ಸಚಿವ ಸತೀಶ್ ಜಾರಕಿಹೊಳಿ
Updated on

ಬೆಂಗಳೂರು: ವಿವಾದಿತ ಜಾತಿ ಗಣತಿ ವರದಿ ಬಗ್ಗೆ ಮುಂದಿನ ಸಚಿವ ಸಂಪುಟದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧತೆ ಕಡಿಮೆ ಮತ್ತು ಹಲವು ಸಂಕೀರ್ಣತೆಗಳಿಂದಾಗಿ ನಿರ್ಧಾರ ಕೈಗೊಳ್ಳಲು ಒಂದು ವರ್ಷ ಸಮಯ ತೆಗೆದುಕೊಳ್ಳಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಶುಕ್ರವಾರ ಹೇಳಿದ್ದಾರೆ.

ಜಾತಿ ಗಣತಿ ವರದಿಯ ಕುರಿತು ವಿವಿಧ ಜಾತಿಗಳು ಎತ್ತಿರುವ ಕಳವಳಗಳನ್ನು ಪರಿಹರಿಸುವಲ್ಲಿ ಯಾವುದೇ ತಪ್ಪು ಹೆಜ್ಜೆ ಇಟ್ಟರೆ ಭವಿಷ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಸಚಿವರು ಎಚ್ಚರಿಸಿದ್ದಾರೆ.

ಜಾತಿ ಜನಗಣತಿ ವರದಿಯ ಕುರಿತು ಚರ್ಚಿಸಲು ಕರೆಯಲಾದ ವಿಶೇಷ ಸಚಿವ ಸಂಪುಟ ಸಭೆಯು ಸರ್ಕಾರದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳಿಂದ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ ಮೇ 2 ರಂದು ಮತ್ತೆ ಈ ವಿಷಯವನ್ನು ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲು ನಿರ್ಧರಿಸಲಾಗಿದೆ.

"ಇದು ಇಂದು ಅಥವಾ ನಾಳೆ ಆಗುವ ವಿಷಯವಲ್ಲ, ಒಂದು ವರ್ಷ ಸಮಯ ತೆಗೆದುಕೊಳ್ಳಬಹುದು. ನಾಳೆ ವರದಿ ಜಾರಿ ಆಗುತ್ತೆ ಅಂತ ನಿರೀಕ್ಷಿಸಬೇಡಿ, ಅದಕ್ಕೆ ಒಂದು ವರ್ಷ ತೆಗೆದುಕೊಳ್ಳಬಹುದು. ಏಕೆಂದರೆ ಹಲವು ಸಮಸ್ಯೆಗಳಿವೆ ಮತ್ತು ಅವು ಜಟಿಲವಾಗಿವೆ. ಎಲ್ಲರನ್ನೂ ಸಮಾಧಾನಪಡಿಸಿ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದರೆ, ಅನೇಕ ಸಭೆಗಳನ್ನು ನಡೆಸಬೇಕಾಗುತ್ತದೆ. ಸರ್ಕಾರ ರಾಜಿ ಮಾಡಿಕೊಳ್ಳುವ ಕ್ರಮದಲ್ಲಿರಬೇಕು. ಏಕೆಂದರೆ ಇದನ್ನು ಇದ್ದಕ್ಕಿದ್ದಂತೆ ಜಾರಿ ಮಾಡಲು ಸಾಧ್ಯವಿಲ್ಲ" ಎಂದು ಜಾರಕಿಹೊಳಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

satish jarkiholi
ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ವಿರೋಧಿಸಿಲ್ಲ, ಸಚಿವರು ಏರು ಧ್ವನಿಯಲ್ಲೂ ಮಾತಾಡಿಲ್ಲ: ಸಿಎಂ

ಇಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ವರದಿಯು ಬಹುತೇಕ 10 ವರ್ಷ ಹಳೆಯದಾಗಿದೆ ಮತ್ತು ಫೆಬ್ರವರಿ 2024 ರಲ್ಲಿ ಸಲ್ಲಿಕೆಯಾಗಿ ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ಸಂಪುಟ ಅದನ್ನು ಪರಿಗಣನೆಗೆ ತೆಗೆದುಕೊಂಡಿದೆ ಎಂದು ಹೇಳಿದರು.

"ಈ ಬಗ್ಗೆ ಯಾವುದೇ ತುರ್ತು ನಿರ್ಧಾರ ಕೈಗೊಳ್ಳುವ ಅಗತ್ಯ ಇಲ್ಲ... ಚರ್ಚೆಗಳು ಒಂದು ವರ್ಷ ನಡೆದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಸರ್ವಾನುಮತದಿಂದ ಮತ್ತು ಎಲ್ಲರ ಸಹಕಾರದೊಂದಿಗೆ ನಾವು ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತೇವೆ" ಎಂದರು.

ಮೂಲಗಳ ಪ್ರಕಾರ, ಕೆಲವು ಸಚಿವರು ಸಂಪುಟದಲ್ಲಿ ಸಮೀಕ್ಷಾ ವರದಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ಹಲವರು ವರದಿ "ಅವೈಜ್ಞಾನಿಕ ಮತ್ತು ಹಳೆಯದು" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇದರ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಸಚಿವರು ತಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ಅಥವಾ ಮೌಖಿಕವಾಗಿ ನೀಡಬೇಕೆಂದು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸೂಚಿಸಿದ್ದಾರೆ.

satish jarkiholi
ಜಾತಿ ಗಣತಿ ವರದಿ ಬಗ್ಗೆ ಯಾವುದೇ ತೀರ್ಮಾನ ಇಲ್ಲ; ಮುಂದಿನ ಸಚಿವ ಸಂಪುಟದಲ್ಲಿ ವಿಸ್ತೃತ ಚರ್ಚೆ

ಸಚಿವರ ಸಂಪುಟದಲ್ಲಿನ ಸಚಿವರ ನಡುವಿನ ವಾಗ್ವಾದದ ಬಗ್ಗೆ ಕೇಳಿದಾಗ, ಜಾರಕಿಹೊಳಿ ಅವರು ಸಾದರ ಲಿಂಗಾಯತ ಸಮುದಾಯದ ಜನಸಂಖ್ಯೆಯ ಕುರಿತು ಚರ್ಚೆಯ ಉದಾಹರಣೆಯನ್ನು ಉಲ್ಲೇಖಿಸಿದರು. ಇದು 65,000 ಎಂದು ತೋರಿಸಲಾಗಿದೆ ಮತ್ತು ಹಾವೇರಿ, ದಾವಣಗೆರೆ, ಚಿತ್ರದುರ್ಗ ಮತ್ತು ಭಾಗಶಃ ಶಿವಮೊಗ್ಗ ಜಿಲ್ಲೆಗಳಲ್ಲಿ ಸಮುದಾಯದ ಉಪಸ್ಥಿತಿಯನ್ನು ಸೂಚಿಸುವ ಕೆಲವು ಸಚಿವರು, ಈ ಸಂಖ್ಯೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು ಎಂದು ಹೇಳಿದರು. ಕೆಲವು ಸಚಿವರು ಸ್ಪಷ್ಟೀಕರಣ ನೀಡಲು ಪ್ರಯತ್ನಿಸುತ್ತಿರುವಾಗ ಸಮುದಾಯದ ಅನೇಕರು ಸಮೀಕ್ಷೆಯ ಸಮಯದಲ್ಲಿ ಹಿಂದೂ-ಸಾದರ ಎಂದು ನೋಂದಾಯಿಸಿಕೊಂಡಿದ್ದಾರೆ ಮತ್ತು ಅವರನ್ನು ವಿಭಿನ್ನ ವರ್ಗದ ಅಡಿಯಲ್ಲಿ ಪರಿಗಣಿಸಲಾಗಿದೆ, ಇದು ಜನಸಂಖ್ಯಾ ಸಂಖ್ಯೆಯಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದರು.

ಇಂತಹ ವಿಷಯಗಳಿವೆ ಮತ್ತು ಇದೆಲ್ಲವನ್ನೂ ಹೊಂದಿಸಲು ಮತ್ತು ಚರ್ಚಿಸಲು ಸಮಯ ಬೇಕಾಗುತ್ತದೆ, ತಜ್ಞರು ಮತ್ತು ಸಮುದಾಯದ ಅಭಿಪ್ರಾಯವನ್ನು ಪಡೆಯಬೇಕಾಗಿದೆ ಎಂದು ಅವರು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com