News Headlines 20-04-25 | ಮಾಜಿ DGP ಓಂ ಪ್ರಕಾಶ್ ಬರ್ಬರ ಕೊಲೆ, ಪತ್ನಿ ವಿರುದ್ಧ ಶಂಕೆ; ಹಿಂದೂಗಳು ಮತಾಂತರ ಮಾಡಿ ಚಕ್ರವರ್ತಿ ಸೂಲಿಬೆಲೆ ಕರೆ; ಲಿವಿಂಗ್ ಟುಗೆದರ್ ಗೆ ಪೋಷಕರ ವಿರೋಧ, ಮಗ ಆತ್ಮಹತ್ಯೆ!

News Headlines 20-04-25 | ಮಾಜಿ DGP ಓಂ ಪ್ರಕಾಶ್ ಬರ್ಬರ ಕೊಲೆ, ಪತ್ನಿ ವಿರುದ್ಧ ಶಂಕೆ; ಹಿಂದೂಗಳು ಮತಾಂತರ ಮಾಡಿ ಚಕ್ರವರ್ತಿ ಸೂಲಿಬೆಲೆ ಕರೆ; ಲಿವಿಂಗ್ ಟುಗೆದರ್ ಗೆ ಪೋಷಕರ ವಿರೋಧ, ಮಗ ಆತ್ಮಹತ್ಯೆ!

1. ಮಾಜಿ DGP ಓಂ ಪ್ರಕಾಶ್ ಬರ್ಬರ ಕೊಲೆ; ಪತ್ನಿ ವಿರುದ್ಧ ಶಂಕೆ

ಕರ್ನಾಟಕ ಮಾಜಿ ಪೊಲೀಸ್​ ಮಹಾನಿರ್ದೇಶಕ ಓಂ ಪ್ರಕಾಶ್ ಅವರನ್ನು​ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಹೆಚ್​ಎಸ್​ಆರ್​ ಲೇಔಟ್​​ ನಿವಾಸದಲ್ಲಿ ಓಂ ಪ್ರಕಾಶ್ ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಓಂ ಪ್ರಕಾಶ್ ಅವರು 1981ರ ಬ್ಯಾಚ್​ನ ಐಪಿಎಸ್​ ಅಧಿಕಾರಿಯಾಗಿದ್ದು 2015ರಲ್ಲಿ ರಾಜ್ಯದ 38ನೇ ಡಿಜಿ& ಐಜಿಪಿಯಾಗಿದ್ದರು. ನಿವೃತ್ತ ಡಿಜಿ ಮತ್ತು ಐಜಿಪಿ ಓಂ ಪ್ರಕಾಶ್ ಅವರನ್ನು​ ಹೆಂಡತಿಯೇ ಈ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಓಂ ಪ್ರಕಾಶ್ ಪತ್ನಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಹತ್ಯೆ ಮಾಡಿ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಓಂ ಪ್ರಕಾಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೆಂಟ್​ಜಾನ್ಸ್‌​ ಆಸ್ಪತ್ರೆಗೆ ರವಾನಿಸಲಾಗಿದೆ.

2. ಸ್ಮಾರ್ಟ್ ಸಿಟಿ ಅಡಿಯಲ್ಲಿ ಬೆಳಗಾವಿಯಲ್ಲಿ 7 ಸಾವಿರ ಕೋಟಿ ಮೊತ್ತದ ಕೆಲಸ

ಎಲ್ಲಾ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸ್ಮಾರ್ಟ್ ಸಿಟಿ ಅನುದಾನದ ಅಡಿಯಲ್ಲಿ ಬೆಳಗಾವಿಯ ಟಿಳಕವಾಡಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಆಧುನಿಕ‌ ಸೌಲಭ್ಯಗಳುಳ್ಳ ಬಹುಮಹಡಿ ಕಲಾ ಮಂದಿರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಸಿಎಂ, ಈಗಾಗಲೇ ಗುತ್ತಿಗೆ ನೌಕರರನ್ನು ಕನಿಷ್ಠ ವೇತನ ಅಡಿಯಲ್ಲಿ ತರಲಾಗಿದೆ. ಇದನ್ನು ಮಾಡಿದ್ದು ನಮ್ಮ ಸರ್ಕಾರವೇ, ಈಗ ಖಾಯಂ ಮಾಡುವುದೂ ಕೂಡ ನಮ್ಮ ಸರ್ಕಾರವೇ ಎಂದರು. ಇದಲ್ಲದೇ ಚಾಲಕರು, ನಿರ್ವಾಹಕರಿಗೂ ಕನಿಷ್ಠ‌ ವೇತನ ನೀಡಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ದಿವ್ಯಾಂಗರಿಗೂ ತ್ರಿಚಕ್ರ ವಾಹನ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 7 ಸಾವಿರ ಕೋಟಿ ಮೊತ್ತದ ಕೆಲಸಗಳು ನಡೆಯುತ್ತಿವೆ. ಬೆಳಗಾವಿಯ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ನಿರಂತರವಾಗಿ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತರುತ್ತಿದೆ ಎಂದು ತಿಳಿಸಿದರು.

3. ಮಾಜಿ ನಗರಸಭೆ ಸದಸ್ಯ ಸತೀಶ್ ಕೋಳಂಕರ್ ಹತ್ಯೆ

ಮಾಜಿ ನಗರಸಭೆ ಸದಸ್ಯ ಸತೀಶ್ ಕೋಳಂಕರ್ ಎಂಬುವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಬಿಎಸ್​ಎನ್​ಎಲ್​ ಕಚೇರಿ ಬಳಿ‌ ನಡೆದಿದೆ. ಇಂದು ಬೆಳಗ್ಗೆ ವಾಕಿಂಗ್ ಗೆ ತೆರಳಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಸತೀಶ್ ಮೇಲೆ ಹಲ್ಲೆ ಮಾಡಿದ್ದರು. ರಕ್ತದ ಮಡುವಿನಲ್ಲಿ ಬಿದ್ದ ಸತೀಶ್ ನನ್ನು ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ವೈಯಕ್ತಿಕ ದ್ವೇಷಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಾವಹಾರಿಕ ವಿಚಾರದ ದ್ವೇಷದಿಂದ ಸತೀಶ್ ಹತ್ಯೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸತೀಶ್ ವಿರುದ್ಧ ಕಾರವಾರ ನಗರ ಠಾಣೆಯಲ್ಲಿ 9ಕ್ಕೂ ಹೆಚ್ಚು ಪ್ರಕರಣಗಳಿವೆ.

4. ಹಿಂದೂಗಳು ಮತಾಂತರ ಮಾಡಿ ಚಕ್ರವರ್ತಿ ಸೂಲಿಬೆಲೆ ಕರೆ

ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾಗುವಂತೆ ಚಕ್ರವರ್ತಿ ಸೂಲಿಬೆಲೆ ಕರೆ ಕೊಟ್ಟಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ ಅವರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಸಹ ದಾಖಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಹಿಂದೂಗಳು ಮತಾಂತರ ಮಾಡುವಂತೆ ಕರೆ ನೀಡಿದ್ದಾರೆ. ಮಂಗಳೂರಿನ ಉಜಿರೆಯಲ್ಲಿ ನಡೆದ ರಾಮೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸೂಲಿಬೆಲೆ, ಬಿಜೆಪಿ ಸರ್ಕಾರ ಇದ್ದಾಗ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದಿತು. ಹೊಸ ಸರ್ಕಾರ ಬಂದು ಆ ಕಾನೂನು ತೆಗೆದು ಹಾಕಿದೆ. ಅಂದರೆ ಅದರ ಅರ್ಥ ನೀವೂ ಮತಾಂತರ ಮಾಡಬಹುದು ಅಂತ. ಸರ್ಕಾರವೇ ಧೈರ್ಯವಾಗಿ ಹೇಳಿದೆ. ಹೀಗಾಗಿ ನೀವು ಮತಾಂತರ ಮಾಡಿ, ಮತಾಂತರ ಮಾಡಲು ನಿಮಗೆ ಕಷ್ಟ ಏನು? ಎಂದು ಪ್ರಶ್ನಿಸಿದ್ದರು.

5. ಲಿವಿಂಗ್ ಟುಗೆದರ್ ಗೆ ಪೋಷಕರ ವಿರೋಧ; ಮಗ ಆತ್ಮಹತ್ಯೆ

ಮಹಿಳೆಯೊಬ್ಬರ ಜೊತೆ ತಮ್ಮ ಮಗ ಲಿವಿಂಗ್ ಟುಗೆದರ್ ನಲ್ಲಿರುವ ವಿಚಾರದ ತಿಳಿದ ಪೋಷಕರು ಮಗನಿಗೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮನನೊಂದ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯ ನಾಗನಹಳ್ಳಿ ಬಳಿ ನಡೆದಿದೆ. ಮೃತ ಯುವಕನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಇನ್ನು ಆತ್ಮಹತ್ಯೆಗೂ ಮುನ್ನ ಶಿವಕುಮಾರ್ ಲಿವಿಂಗ್ ನಲ್ಲಿದ್ದ ಮಹಿಳೆಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾನೆ. ಇದರಿಂದ ಆತಂಕಗೊಂಡ ಮಹಿಳೆ ಕೂಡಲೇ ಸ್ಥಳಕ್ಕೆ ದೌಡಾಯಿಸಿ ಯುವಕನ ಮನವೊಲಿಸಲು ಯತ್ನಿಸಿದ್ದಾಳೆ. ಆದರೆ ಇದಕ್ಕೆ ಕಿವಿಗೊಡದ ಶಿವಕುಮಾರ್ ರೈಲಿಗೆ ರೈಲಿನ ಮುಂದೆ ಬಿದ್ದಿದ್ದಾನೆ. ಈ ವೇಳೆ ರೈಲು ಹರಿದು ಶಿವಕುಮಾರ್ ಮೃತಪಟ್ಟಿದ್ದಾನೆ. ಮಹಿಳೆಗೂ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com