
ಚಿಕ್ಕಮಗಳೂರು: ಜನಿವಾರ ತೆಗೆಸಿದ್ದನ್ನು ನಾನು ಒಪ್ಪುವುದಿಲ್ಲ. ಈ ಘಟನೆಯನ್ನು ನಾನು ಖಂಡಿಸುತ್ತೇನೆ. ಆದರೆ ಒಂದು ಶೂದ್ರ ಹೆಣ್ಣು ಮಗಳ ತಾಳಿಯನ್ನು ತೆಗೆಸಿದ್ರಲ್ವಾ ಅದು ಯಾಕೆ ಸುದ್ದಿಯಾಗಲಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಸೋಮವಾರ ಮಾಧ್ಯಮಗಳ ವಿರುದ್ಧ ಗರಂ ಆಗಿದ್ದಾರೆ.
ಇಂದು ಚಿಕ್ಕಮಗಳೂರಿನಲ್ಲಿ ಸಿಇಟಿ ಪರೀಕ್ಷಾ ಕೊಠಡಿಗೆ ತೆರಳುವ ಮುನ್ನ ವಿದ್ಯಾರ್ಥಿಯ ಜನಿವಾರ ತೆಗೆಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ಜನಿವಾರಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ತಾಳಿಗೂ ಇದೆ. ಆದರೆ ತಾಳಿ ತೆಗೆಸಿದಾಗ ವಿವಾದ ಆಗಲಿಲ್ಲ ಎಂದರು.
ಹೆಣ್ಣು ಮಗಳ ತಾಳಿ ತೆಗೆಸಿದ್ದು ಮಾಧ್ಯಮಗಳಿಗೆ ಲೆಕ್ಕಕ್ಕೇ ಇಲ್ಲ. ಏಕೆಂದರೆ ಆಕೆ ಶೂದ್ರ ಹೆಣ್ಣು ಮಗಳು. ಅವರ ತಾಳಿ ಬೇಕಿದ್ದರೆ ತೆಗೆಸಬಹುದು. ಜನಿವಾರ ತೆಗೆಸಿದ್ದೇ ದೊಡ್ಡ ವಿವಾದ ಆಗಿದೆ. ಆದರೆ ಶೋಷಿತರ ಮೇಲೆ ದಬ್ಬಾಳಿಕೆ ನಡೆದರೆ ಯಾವುದೇ ಮಾಧ್ಯಮಗಳು, ರಾಜಕೀಯ ವ್ಯಕ್ತಿಗಳು ಪ್ರಸ್ತಾಪ ಮಾಡುವುದಿಲ್ಲ ಎಂದು ಸಚಿವ ರಾಜಣ್ಣ ಬೇಸರ ವ್ಯಕ್ತಪಡಿಸಿದರು.
ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿದಂತೆ ಒಟ್ಟು ನಾಲ್ವರನ್ನು ಅಮಾನತುಗೊಳಿಸಲಾಗಿದೆ. ಮತ್ತೊಬ್ಬ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
Advertisement