
ಬೆಂಗಳೂರು: ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ಬೈಕ್ ಸವಾರರನ್ನು ತಮ್ಮ ಬೆಂಗಾವಲು ಪಡೆಯ ವಾಹನದಲ್ಲೇ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ಮೂಲಕ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾನವೀಯತೆ ಮೆರೆದಿದ್ದಾರೆ.
ನಗರದ ಶಿರೂರು ಪಾರ್ಕ್ ರಸ್ತೆಯಲ್ಲಿ ಭಾನುವಾರ ಮಧ್ಯಾಹ್ನ ಸಚಿವರು ಬೆಂಗಾವಲು ಪಡೆ ವಾಹನದೊಂದಿಗೆ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದರು.
ಈ ವೇಳೆ ದ್ವಿಚಕ್ರ ವಾಹನ ಸವಾರರು ಆಕಸ್ಮಿಕ ಅಪಘಾತಕ್ಕೀಡಾಗಿ ತೀವ್ರ ಗಾಯಗೊಂಡಿರುವುದು ಕಂಡುಬಂದಿತ್ತು. ಗಾಯಾಳುಗಳ ಸ್ಥಿತಿ ನೋಡಿದ ಸಚಿವರು, ತಕ್ಷಣವೇ ತಮ್ಮ ಬೆಂಗಾವಲು ಪಡೆಯ ವಾಹನದಲ್ಲಿ ಕಿಮ್ಸ್ಗೆ ಕಳುಹಿಸಿಕೊಟ್ಟರು.
ಅಲ್ಲದೇ, ಕಿಮ್ಸ್ ನಿರ್ದೇಶಕರಿಗೆ ಸ್ವತಃ ಕರೆ ಮಾಡಿದ ಗಾಯಾಳುಗಳಿಗೆ ತ್ವರಿತವಾಗಿ ಚಿಕಿತ್ಸೆ ನೀಡಿ, ಉಪಚರಿಸುವಂತೆ ನಿರ್ದೇಶನ ನೀಡಿದರು. ಸಚಿವರ ಮಾನವೀಯ ಕಾರ್ಯ, ಕಾಳಜಿ ಮತ್ತು ಸರಳತೆ ಹಲವರ ಹೃದಯಗಳನ್ನು ಗೆದ್ದಿದ್ದು, ಭಾರೀ ಮೆಚ್ಚಿಗೆ ವ್ಯಕ್ತಪಡಿಸುತ್ತಿದ್ದಾರೆ.
Advertisement