
ಬೆಂಗಳೂರು: ಕೊಪ್ಪಳ ಜಿಲ್ಲೆಯ ಆನೆಗೊಂದಿಯಲ್ಲಿರುವ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯರ ಸಮಾಧಿ ಸ್ಮಾರಕದ ಮೇಲೆ ಇತ್ತೀಚೆಗೆ ಪ್ರಾಣಿ ವಧೆ ನಡೆಸಿರುವುದು ಭಾರೀ ಚರ್ಚೆ ಕಾರಣವಾಗಿದ್ದು, ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.
ಸಮಾಧಿ ಮೇಲೆ ಮಾಂಸ ಕತ್ತರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ಜನರು ತೀವ್ರವಾಗಿ ಕಿಡಿಕಾರುತ್ತಿದ್ದಾರೆ.
ಅನೇಕ ಇತಿಹಾಸಕಾರರು ಮತ್ತು ಸ್ಮಾರಕ ಪ್ರಿಯರು ಸಮಾಧಿ ಆವರಣದಲ್ಲಿ ಮಾಂಸ ಮಾರಾಟವನ್ನು ನಿಲ್ಲಿಸಿ, ಸ್ಥಳವನ್ನು ಪುನರುಜ್ಜೀವನಗೊಳಿಸುವಂತೆ ಭಾರತೀಯ ಪುರಾತತ್ವ ಸಮೀಕ್ಷೆ (ASI) ಗೆ ಆಗ್ರಹಿಸಿದ್ದಾರೆ.
ಶ್ರೀ ಕೃಷ್ಣದೇವರಾಯನ ಸಮಾಧಿ 64 ಸ್ತಂಭಗಳನ್ನು ಹೊಂದಿದ್ದು, ತುಂಗಭದ್ರಾ ನದಿಯ ದಡದಲ್ಲಿದೆ. ಹಂಪಿಗೆ ಭೇಟಿ ನೀಡುವ ಅನೇಕ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ, ಆದರೆ, ಈ ಪ್ರದೇಶವನ್ನು ಮಾಂಸ ಮಾರಾಟಕ್ಕೆ ಬಳಕೆ ಮಾಡಿರುವುದು ವಿರೋಧಕ್ಕೆ ಕಾರಣವಾಗಿದೆ.
ಕೊಪ್ಪಳ, ಗಂಗಾವತಿ ಮತ್ತು ಆನೆಗುಂಡಿಯ ಕೆಲವು ಸಂಘಟನೆಗಳು ಈ ಬೆಳವಣಿಗೆಯನ್ನು ಖಂಡಿಸಿದ್ದು, ಪ್ರತಿಭಟನೆಗೆ ಸಜ್ಜಾಗಿವೆ.
ಆನೆಗುಂಡಿ ಮತ್ತು ಹಂಪಿ ಮತ್ತು ಸುತ್ತಮುತ್ತಲಿನ ಇತರ ಸ್ಥಳಗಳಲ್ಲಿನ ಸ್ಮಾರಕಗಳನ್ನು ನಾಶಮಾಡಲು ಪ್ರಯತ್ನಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದ್ದೇವೆಂದು ಸಂಘಟನೆಗಳ ಸದಸ್ಯರು ಹೇಳಿದ್ದಾರೆ.
ಏತನ್ಮಧ್ಯೆ, ಸಮಾಧಿ ಆವರಣದಲ್ಲಿ ಮಾಂಸ ಮಾರಾಟದ ಬಗ್ಗೆ ಸ್ಥಳೀಯ ಪೊಲೀಸರಿಗೆ ಯಾವುದೇ ದೂರು ಬಂದಿಲ್ಲ ಎಂದು ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಎಲ್ ಅರಸಿದ್ದಿ ಹೇಳಿದ್ದಾರೆ. ಆದಾಗ್ಯೂ, ಈ ವಿಷಯವನ್ನು ಪರಿಶೀಲಿಸಲಾಗುತ್ತಿದ್ದು, ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Advertisement