ಕಾಶ್ಮೀರದಲ್ಲಿ Article 370 ತೆಗೆದಿದ್ದೇ ಪಹಲ್ಗಾಮ್ ನರಮೇಧಕ್ಕೆ ಕಾರಣ: ಶ್ರೀರಂಗಪಟ್ಟಣ Congress ಶಾಸಕ ರಮೇಶ್ ಬಂಡಿಸಿದ್ದೇಗೌಡ
ಮಂಡ್ಯ: ಪಹಲ್ಗಾಮ್ ನಲ್ಲಿ ಹಿಂದೂಗಳ ಮೇಲಿನ ನರವೇಧಕ್ಕೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ತೆಗೆದಿರುವುದೇ ಕಾರಣ ಎಂದು ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಮಾತನಾಡಿದ ಅವರು, ಆರ್ಟಿಕಲ್ 370 ತೆಗೆಯೋದಕ್ಕೂ ಮೊದಲು ಯೋಚನೆ ಮಾಡಬೇಕಿತ್ತು. ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಅತಿಯಾದ ಆತ್ಮವಿಶ್ವಾಸವೇ ಇಂತಹ ಘಟನೆ ನಡೆಯಲು ಕಾರಣವಾಗಿದೆ. ಈ ಮೂಲಕ ನರಮೇಧಕ್ಕೆ ಪರೋಕ್ಷವಾಗಿ ಬಿಜೆಪಿ ಕಾರಣ ಎಂದಿದ್ದಾರೆ.
ಆರ್ಟಿಕಲ್ 370 ತೆಗೆಯುವ ಮುನ್ನ ಕಾಶ್ಮೀರದಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕಿತ್ತು. ಕೇಂದ್ರ ಸರ್ಕಾರದ ದುಡುಕಿನ ನಿರ್ಧಾರದಿಂದ ಈ ಘಟನೆ ನಡೆದಿದೆ. ಜನರ ಭಾವನೆ ಅರ್ಥ ಮಾಡಿಕೊಂಡು ಆರ್ಟಿಕಲ್ 370 ತೆಗೆಯಬೇಕಿತ್ತು ಎಂದು ಕಿಡಿಕಾರಿದ್ದಾರೆ. ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಮೃತರಲ್ಲಿ ಮೂವರು ಕನ್ನಡಿಗರಾಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ