
ಬೆಳಗಾವಿ: ಬೆಳಗಾವಿ ಮತ್ತು ಮಹಾರಾಷ್ಟ್ರದ ನೆರೆಯ ಕಾಗಲ್ ತಾಲ್ಲೂಕಿನಿಂದ ಕುರುಬ ಕುಟುಂಬಗಳ ಇಬ್ಬರು ಯುವಕರು ಕುರಿ ಕಾಯುತ್ತಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್ ಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಈ ಮೂಲಕ ತಾವು ಕಲಿತ ಶಾಲೆ, ಊರು ಹಾಗೂ ತಮ್ಮ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ.
ಕುರಿ ಮೇಯಿಸುತ್ತಿದ್ದ ಬೆಳಗಾವಿಯ ನಾನಾವಾಡಿಯಲ್ಲಿ ವಾಸವಿರುವ ಮಹಾರಾಷ್ಟ್ರದ ಎಮಗೆ ಗ್ರಾಮದ ಬೀರಪ್ಪ ಸಿದ್ದಪ್ಪ ಡೋಣಿ ದೇಶಕ್ಕೆ 551 ನೇ ರ್ಯಾಂಕ್ ಗಳಿಸಿದ್ದರೆ, ಬೆಳಗಾವಿಯ ಯರಗಟ್ಟಿ ತಾಲ್ಲೂಕಿನ ಕೊಡ್ಲಿವಾಡ ಗ್ರಾಮದ ಹನುಮಂತಪ್ಪ ಯಲ್ಲಪ್ಪ ನಂದಿ ಅವರು 910 ನೇ ರ್ಯಾಂಕ್ ಗಳಿಸಿದ್ದಾರೆ.
ಮಹಾರಾಷ್ಟ್ರದ ಕಾಗಲ್ ತಾಲ್ಲೂಕಿನ ನೆರೆಯ ಎಮಗೆ ಗ್ರಾಮದ ಸಿದ್ದಪ್ಪ ಮತ್ತು ಬಾಲವ್ವ ಡೋಣಿ ಅವರ ಮೂರನೇ ಮಗ ಬೀರಪ್ಪ. ಬೀರಪ್ಪ ತನ್ನ ಕುರಿಗಳನ್ನು ಮೇಯಿಸುತ್ತಿದ್ದಾಗಲೇ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಬಂದಿದೆ. ತಾವು ಐಎಎಸ್ ಪಾಸ್ ಮಾಡಿರುವ ಸುದ್ದಿ ಕೇಳಿ ಸಂಭ್ರಮಿಸಿದರು.
ಕುರಿಗಳನ್ನು ಮೇಯಿಸುತ್ತಾ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬೀರಪ್ಪ ಅವರು ಮೂರನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆ ಮಾಡಿದ್ದಾರೆ. ಅವರ ಈ ಸಾಧನೆ ಅವರ ಕುಟುಂಬ ಮತ್ತು ಗ್ರಾಮಸ್ಥರಿಗೆ ಬಹಳ ಸಂತೋಷ ತಂದಿದೆ. ಬೆಳಗಾವಿ ಬಳಿಯ ನಾನಾವಾಡಿಯ ಹೊಲದಲ್ಲಿ ಕುರಿ ಮೇಯಿಸುತ್ತಿದ್ದಾಗ ಅವರಿಗೆ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿರುವ ಸುದ್ದಿ ತಿಳಿದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೀರಪ್ಪ ಅವರ ಸಾಧನೆಗೆ ವೈಯಕ್ತಿಕವಾಗಿ ಕರೆ ಮಾಡಿ ಅಭಿನಂದಿಸಿದ್ದಾರೆ. ಅವರ ಕುಟುಂಬವು ಅವರನ್ನು ಸಾಂಪ್ರದಾಯಿಕವಾಗಿ ಆರತಿ ಮಾಡಿ ಹಾರ ಹಾಕುವ ಮೂಲಕ ಗೌರವಿಸಿತು. ಈ ಸಂದರ್ಭದಲ್ಲಿ ಆತನ ಕುಟುಂಬ ಬೀರಪ್ಪಗೆ ಕುರಿಮರಿಯನ್ನು ಉಡುಗೊರೆಯಾಗಿ ನೀಡಿತು. ಐಪಿಎಸ್ ಅಧಿಕಾರಿಯಾಗುವ ಮಹತ್ವಾಕಾಂಕ್ಷೆಯನ್ನು ಬೀರಪ್ಪ ವ್ಯಕ್ತಪಡಿಸಿದ್ದಾರೆ.
ಇನ್ನು ಯರಗಟ್ಟಿ ತಾಲ್ಲೂಕಿನ ಕೊಡ್ಲಿವಾಡ ಗ್ರಾಮದ ಹನುಮಂತಪ್ಪ ಯಲ್ಲಪ್ಪ ನಂದಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುದ್ದಿ ತಿಳಿಯುತ್ತಿದ್ದಂತೆ, ಕೋಳಿವಾಡ ಗ್ರಾಮಸ್ಥರು ಸಂಭ್ರಮಿಸಿದರು. ಅವರ ತಂದೆ ಯಲ್ಲಪ್ಪ, ತಾಯಿ ಕಾಳವ್ವ, ಪತ್ನಿ ಯಶೋಧ, ಸಹೋದರ ಆನಂದ್ ಮತ್ತು ಇತರ ಕುಟುಂಬ ಸದಸ್ಯರು ಹರ್ಷ ವ್ಯಕ್ತಪಡಿಸಿದರು.
ಹನುಮಂತ ಅವರ ಸಾಧನೆಗೆ ಇಡೀ ಗ್ರಾಮವೇ ಹೆಮ್ಮೆ ಪಡುತ್ತಿದೆ. ಹನುಮಂತ ಎಲ್ಲಾ ಅಡೆತಡೆಗಳನ್ನು ಮೀರಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಹೆತ್ತವರು ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಹನುಮಂತ ಅವರು ತನ್ನ ಹುಟ್ಟೂರು ಕೊಡ್ಲಿವಾಡದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿಯವರೆಗೆ ಅಧ್ಯಯನ ಮಾಡಿದರು. ನಂತರ 8 ರಿಂದ 10 ನೇ ತರಗತಿವರೆಗೆ ಸತ್ತಿಗೇರಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಓದಿದರು. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಪಡೆದರು ಮತ್ತು ಬೆಳಗಾವಿಯ ಗೋಗ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಜಿಐಟಿ) ಯಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಬಿಇ ಪದವಿ ಪಡೆದಿದ್ದಾರೆ.
Advertisement