
ಚಾಮರಾಜನಗರ: ಮೌಢ್ಯವನ್ನು ತೊರೆದು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದ್ದು ಮಾತ್ರವಲ್ಲದೆ ನಿನ್ನೆ ಗುರುವಾರ ಜಿಲ್ಲೆಯ ಹನೂರು ತಾಲ್ಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ಬಳಿಕ ಇಂದು ಶುಕ್ರವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಂಪುಟದ ಕೆಲ ಸಹೋದ್ಯೋಗಿಗಳ ಜೊತೆ ಮಾದಪ್ಪನ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಗುಡಿಯ ಅರ್ಚಕರು ಸಿದ್ದರಾಮಯ್ಯ ಹೆಸರಲ್ಲಿ ಅರ್ಚನೆ ಮಾಡಿದರು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ ವೆಂಕಟೇಶ್ ಮತ್ತು ಸಿಎಂ ಆಪ್ತ ಹಾಗೂ ಸಮಾಜ ಕಲ್ಯಾಣ ಖಾತೆ ಸಚಿವ ಡಾ ಹೆಚ್ ಸಿ ಮಹದೇವಪ್ಪ ಜೊತೆಗಿದ್ದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ, ಮೈಸೂರು ವಿಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಬೇಕಾಗಿತ್ತು. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ವೆಂಕಟೇಶ್ ಅವರು ಇಲ್ಲಿಯೇ ಮಾಡೋಣ ಎಂದು ಸಲಹೆ ನೀಡಿದರು, ಅದರ ಪ್ರಕಾರ ಮಾಡಿದ್ದೇವೆ, ಚಾಮರಾಜನಗರ ಜಿಲ್ಲೆ ಬಹಳ ಹಿಂದುಳಿದ ಜಿಲ್ಲೆ, ಅದಕ್ಕೆ ವಿಶೇಷ ಗಮನ ನೀಡಬೇಕೆಂಬುದು ನಮ್ಮ ಆದ್ಯತೆಯಾಗಿದೆ ಎಂದರು.
ಚಾಮರಾಜನಗರ ಜಿಲ್ಲೆಗೆ ಕಾಲಿಟ್ಟರೆ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಸರ್ಕಾರವನ್ನು ಆಳುವವರದಲ್ಲಿ ಹಿಂದಿನಿಂದಲೂ ಇದೆಯಲ್ಲವೇ ಎಂದು ಕೇಳಿದಾಗ, ಅವೆಲ್ಲಾ ಮೂಢನಂಬಿಕೆಗಳು, ಅವುಗಳಲ್ಲಿ ಸತ್ಯ ಇಲ್ಲ, ಮೌಢ್ಯಗಳಿಂದ ಸಮಾಜದಲ್ಲಿ ಬಹಳಷ್ಟು ಕೆಟ್ಟದು ನಡೆಯುತ್ತಿವೆ ಎಂದರು.
ಚಾಮರಾಜನಗರ ಜಿಲ್ಲೆಗೆ ಬರುವುದರಿಂದ ನನಗೆ ಅಧಿಕಾರ ಮತ್ತಷ್ಟು ಗಟ್ಟಿಯಾಗ್ತಿದೆ. ನಾನು ಸಿಎಂ ಆದ ಮೇಲೆ 20ಕ್ಕೂ ಹೆಚ್ಚು ಸಲ ಚಾಮರಾಜನಗರಕ್ಕೆ ಬಂದಿದ್ದೇನೆ. ಇದರಿಂದ ನಮಗೆ ಅಧಿಕಾರ ಗಟ್ಟಿಯಾಗುತ್ತಿದೆ ಎಂದರು.
ನಿನ್ನೆ ಪ್ರಾಧಿಕಾರದ ಸಭೆಯಲ್ಲಿ ವಿಶೇಷ ಸೂಚನೆ ನೀಡಿದ್ದೇನೆ. ಚಾಮುಂಡಿ ಬೆಟ್ಟ, ಮಲೈ ಮಹದೇಶ್ವರ ಬೆಟ್ಟದ ಮೇಲೆ ಮದ್ಯ ನಿಷೇಧವಾಗಬೇಕು, ಸ್ವಚ್ಛತೆ ಕಾಪಾಡಬೇಕು, ಲಡ್ಡು ಪ್ರಸಾದವನ್ನು ತಿರುಪತಿ ರೀತಿಯಲ್ಲಿ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡಬೇಕು, ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಹೇಳಿದ್ದೇನೆ ಎಂದರು.
ಇಡಿ ದಾಳಿ
ಶಾಸಕ ವಿನಯ್ ಕುಲಕರ್ಣಿ ನಿವಾಸದ ಮೇಲೆ ಇಡಿ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಇಡಿಯವರು ಕೇಂದ್ರ ಸರ್ಕಾರದ ಆದೇಶದಂತೆ ನಡೆದುಕೊಂಡು ಯಾವಾಗಲೂ ದ್ವೇಷದ ರಾಜಕೀಯ ಮಾಡುತ್ತಾರೆ. ವಿನಯ್ ಕುಲಕರ್ಣಿಯವರ ಮನೆ ಮೇಲೆ ಇದ್ದಕ್ಕಿದ್ದಂತೆ ದಾಳಿ ಮಾಡುವುದೆಂದರೆ ಇದರ ಹಿಂದೆ ಯಾರದ್ದಾದರೂ ಕೈವಾಡ ಇರಬೇಕಲ್ಲವೇ, ಇದು ದ್ವೇಷದ ರಾಜಕಾರಣವಲ್ಲದೆ ಮತ್ತಿನ್ನೇನು, ಬಿಜೆಪಿ ನಾಯಕರ ಮನೆ ಮೇಲೆ ಏಕೆ ದಾಳಿಯಾಗುತ್ತಿಲ್ಲ, ಅವರೇನು ಶುದ್ಧಹಸ್ತರೇ ಎಂದು ಕೇಳಿದರು.
Advertisement