
ಚಾಮರಾಜನಗರ: ಪಹಲ್ಗಾಮ್ ದಾಳಿಗೆ ಕಾರಣರಾದ ಪ್ರತಿಯೊಬ್ಬ ಉಗ್ರನನ್ನು ಹುಡುಕಿ, ಹುಡುಕಿ ಹೊಡೆಯುತ್ತೇವೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
ಪ್ರಧಾನಿ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, 2019ರ ಪುಲ್ವಾಮಾ ದಾಳಿಯಲ್ಲಿ 40ಕ್ಕೂ ಹೆಚ್ಚು ಯೋಧರನ್ನು ಬಲಿತೆಗೆದುಕೊಂಡ ಬಳಿಕ ಮೋದಿ ಇದೇ ರೀತಿಯ ಹೇಳಿಕೆ ನೀಡಿದ್ದರು ಎಂದು ಲೇವಡಿ ಮಾಡಿದರು.
"2019 ರಲ್ಲಿ ಪ್ರಧಾನಿ ಮೋದಿ ಅದೇ ಹೇಳಿಕೆ ನೀಡಿದ ನಂತರವೂ ಮತ್ತೆ ಉಗ್ರರ ದಾಳಿ ನಡೆದಿದೆ. ಪುಲ್ವಾಮಾ ಭಯೋತ್ಪಾದಕ ದಾಳಿಯ ನಂತರ ಅವರು ಏನು ಹೇಳಿದರು? ಆ ಹೇಳಿಕೆಯ ನಂತರ, ಪಹಲ್ಗಾಮ್ನಲ್ಲಿ ಭಯೋತ್ಪಾದಕರು 26 ಜನರನ್ನು ಕೊಂದರು. ಅವರು ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದಾಗಿ ಹೇಳಿದ್ದರು. ಏನಾಯಿತು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಗುರುವಾರ ನವದೆಹಲಿಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಏನಾಯಿತು ಎಂಬುದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ಉಗ್ರರ ದಾಳಿ ಕೇಂದ್ರ ಗುಪ್ತಚರ ವೈಫಲ್ಯ ಎಂದು ಆರೋಪಿಸಿದರು.
ಏಪ್ರಿಲ್ 22 ರ ಮಧ್ಯಾಹ್ನ ಕಾಶ್ಮೀರದ ಪಹಲ್ಗಾಮ್ ಬಳಿಯ ಪ್ರವಾಸಿ ತಾಣದಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ 26 ಮಂದಿಯನ್ನು ಬಲಿ ಪಡೆದಿದ್ದರು.
Advertisement