ಜನಿವಾರ ತೆಗೆಸಿದ ಪ್ರಕರಣ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಬಿಜೆಪಿ ದೂರು

ಸುಚಿವ್ರತ್ ಕುಲಕರ್ಣಿ ಎಂಬ ವಿದ್ಯಾರ್ಥಿ ಏಪ್ರಿಲ್ 17 ರಂದು ಬೀದರ್‌ನ ಸಾಯಿ ಸ್ಪೂರ್ತಿ ಪಿಯು ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ಧರಿಸಿದ್ದಕ್ಕಾಗಿ ಪ್ರವೇಶ ನಿರಾಕರಿಸಲಾಯಿತು ಎಂದು ಆರೋಪಿಸಿದರು.
ಆರ್ ಅಶೋಕ
ಆರ್ ಅಶೋಕ
Updated on

ಬೆಂಗಳೂರು: ಇತ್ತೀಚೆಗೆ ರಾಜ್ಯದಾದ್ಯಂತ ನಡೆಸಲಾದ ಸಾಮಾನ್ಯ ಪ್ರವೇಶ ಪರೀಕ್ಷೆ (CET) ಬರೆಯಲು ಬಂದಿದ್ದ ವಿಪ್ರ ವಿದ್ಯಾರ್ಥಿಗಳ ಜನಿವಾರ ತೆಗೆಸಿರುವುದಕ್ಕೆ ಸಂಬಂಧಿಸಿದಂತೆ, ಇದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಶುಕ್ರವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ (NHRC) ಔಪಚಾರಿಕ ದೂರು ದಾಖಲಿಸಿದ್ದಾರೆ.

ಸಿಇಟಿ ಪರೀಕ್ಷೆ ವೇಳೆಯಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸುವ ಮೂಲಕ ಅವರ ಧಾರ್ಮಿಕ ಭಾವನೆಗಳಿಗೆ, ಹಕ್ಕುಗಳಿಗೆ ಚ್ಯುತಿ ತಂದ ರಾಜ್ಯ ಸರ್ಕಾರದ ನಡೆ ವಿರುದ್ಧ ಕೇಂದ್ರ ಮಾನವ ಹಕ್ಕುಗಳ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ್ದೇನೆ. ನಾಗರಿಕರ ಸಂವಿಧಾನದತ್ತ ಹಕ್ಕುಗಳು ಹಾಗು ಘನತೆಯನ್ನು ರಕ್ಷಿಸುವ ನಿಟ್ಟಿನಲ್ಲಿ, ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

'ಇಂತಹ ಕಾನೂನುಬಾಹಿರ ಮತ್ತು ತಾರತಮ್ಯದ ಅಭ್ಯಾಸಗಳಿಂದ ವಿದ್ಯಾರ್ಥಿಗಳ ಭವಿಷ್ಯವು ಅಪಾಯಕ್ಕೆ ಸಿಲುಕಬಾರದು. ವಿಶೇಷವಾಗಿ ಯುವಕರ ಹಕ್ಕುಗಳು ಮತ್ತು ಘನತೆಯನ್ನು ಕಾಪಾಡಲು ತ್ವರಿತ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ನಾನು ಆಯೋಗಕ್ಕೆ ಮನವಿ ಮಾಡಿದ್ದೇನೆ' ಎಂದು ಅವರು ಹೇಳಿದರು.

ಸುಚಿವ್ರತ್ ಕುಲಕರ್ಣಿ ಎಂಬ ವಿದ್ಯಾರ್ಥಿ ಏಪ್ರಿಲ್ 17 ರಂದು ಬೀದರ್‌ನ ಸಾಯಿ ಸ್ಪೂರ್ತಿ ಪಿಯು ಕಾಲೇಜಿನಲ್ಲಿ ನಡೆದ ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ಧರಿಸಿದ್ದಕ್ಕಾಗಿ ಪ್ರವೇಶ ನಿರಾಕರಿಸಲಾಯಿತು ಎಂದು ಆರೋಪಿಸಿದರು.

ಆರ್ ಅಶೋಕ
ಧರ್ಮ ಯಾವುದಾದರೂ ತತ್ವ ಒಂದೇ, ಧಾರ್ಮಿಕ ಸಂಪ್ರದಾಯಗಳಿಗೆ ಧಕ್ಕೆ ಸರಿಯಲ್ಲ: ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಕ್ಕೆ ರಾಜ್ಯ ಸರ್ಕಾರ ಖಂಡನೆ

'ಏಪ್ರಿಲ್ 17ರಂದು ನನ್ನ ಗಣಿತ ಸಿಇಟಿ ಪರೀಕ್ಷೆ ಇತ್ತು. ನಾನು ಪರೀಕ್ಷಾ ಕೇಂದ್ರವನ್ನು ತಲುಪಿದಾಗ, ಕಾಲೇಜು ಆಡಳಿತ ಮಂಡಳಿ ನನ್ನನ್ನು ಪರಿಶೀಲಿಸಿತು ಮತ್ತು ನನ್ನ ಜನಿವಾರವನ್ನು ನೋಡಿತು. ಅವರು ಅದನ್ನು ಕತ್ತರಿಸಲು ಅಥವಾ ತೆಗೆದುಹಾಕಲು ನನ್ನನ್ನು ಕೇಳಿದರು. ಅದನ್ನು ತೆಗೆದರೆ ಮಾತ್ರ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವುದಾಗಿ ಹೇಳಿದರು. 45 ನಿಮಿಷಗಳ ಕಾಲ, ನಾನು ಅವರನ್ನು ವಿನಂತಿಸುತ್ತಲೇ ಇದ್ದೆ. ಆದರೆ, ಕೊನೆಗೆ ನಾನು ಮನೆಗೆ ಹಿಂತಿರುಗಬೇಕಾಯಿತು. ಸರ್ಕಾರ ಮರು ಪರೀಕ್ಷೆ ನಡೆಸಬೇಕೆಂದು ಅಥವಾ ಸರ್ಕಾರಿ ಕಾಲೇಜಿನಲ್ಲಿ ನನಗೆ ಸೀಟು ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ' ಎಂದು ಕುಲಕರ್ಣಿ ಹೇಳಿದರು.

ಜನಿವಾರ ತೆಗೆಯರು ನಿರಾಕರಿಸಿ, ಗಣಿತ ಪರೀಕ್ಷೆಗೆ ಹಾಜರಾಗದೇ ಮನೆಗೆ ತೆರಳಿದ್ದ ವಿದ್ಯಾರ್ಥಿ ಸುಚಿವ್ರತ್ ಕುಲಕರ್ಣಿಗೆ ಸರ್ಕಾರ ಎರಡು ಆಯ್ಕೆಗಳನ್ನು ನೀಡಿದೆ. ಈ ಕುರಿತು ಪರಿಶೀಲನೆ ನಡೆಸಲು ನೇಮಿಸಿದ್ದ ತಜ್ಞರ ಸಮಿತಿಯು ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ ವಿಷಯಗಳಲ್ಲಿ ಪಡೆದ ಸರಾಸರಿ ಅಂಕಗಳನ್ನು ಗಣಿತ ವಿಷಯಕ್ಕೆ ನೀಡಲು ಶಿಫಾರಸು ಮಾಡಿದೆ. ಅಲ್ಲದೆ, ಮತ್ತೆ ಪರೀಕ್ಷೆ ಬರೆಯುವ ಅವಕಾಶವನ್ನು ನೀಡಲಾಗಿದೆ. ವಿದ್ಯಾರ್ಥಿಯು ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಆರ್ ಅಶೋಕ
ಹಿಜಾಬ್ ವಿಚಾರ ಬೇರೆ, ಜನಿವಾರ ವಿಚಾರವೇ ಬೇರೆ; ಬಿಜೆಪಿ ಅನವಶ್ಯಕ ರಾಜಕಾರಣ: ಸತೀಶ್ ಜಾರಕಿಹೊಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com