
ಹುಬ್ಬಳ್ಳಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಎನ್ ಕೌಂಟರ್ ಗೆ ಬಲಿಯಾಗಿದ್ದ ಆರೋಪಿಯ ಶವವನ್ನು ವಿಲೇವಾರಿ ಮಾಡಲು ಕರ್ನಾಟಕದ ಹುಬ್ಬಳ್ಳಿಯ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ರಿತೇಶ್ ಕುಮಾರ್ (35) ಅವರ ಕುಟುಂಬವನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ. ಬಿಹಾರದಲ್ಲಿ ಅವರ ಕುಟುಂಬ ಸದಸ್ಯರನ್ನು ಹುಡುಕಲು ರಾಜ್ಯ ಪೊಲೀಸ್ ತಂಡಗಳು ಮಾಡಿದ ಪ್ರಯತ್ನಗಳು ಯಾವುದೇ ಫಲಿತಾಂಶವನ್ನು ನೀಡಿಲ್ಲ. ಈ ಬಳಿಕ ನ್ಯಾಯಾಲಯ ತನ್ನ ಆದೇಶ ನೀಡಿದೆ.
ಏಪ್ರಿಲ್ 13 ರಂದು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಆರೋಪಿಯ ಶವದ ಕುರಿತು ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಈ ಹಿಂದೆ ನಿರ್ದೇಶನಗಳನ್ನು ನೀಡಿತ್ತು ಮತ್ತು ದೇಹದ ಅಂಗಗಳ ಮಾದರಿಗಳನ್ನು ಸಂರಕ್ಷಿಸುವಂತೆಯೂ ಸೂಚಿಸಿತ್ತು.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್), ಕರ್ನಾಟಕ ಘಟಕ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತ ಮಧು ಭೂಷಣ್ ಈ ಪ್ರಕರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದರು.
ತನಿಖೆಯ ಸಮಯದಲ್ಲಿ ಅಗತ್ಯವಿರುವ ಸಾಕ್ಷ್ಯಗಳು ಲಭ್ಯವಾಗುವಂತೆ ಮೃತರ ದೇಹವನ್ನು ಅಧಿಕಾರಿಗಳು ಸಂರಕ್ಷಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದರು. ಮೃತರ ದೇಹವನ್ನು ದಹನ ಮಾಡಿದರೆ, ಸಾಕ್ಷ್ಯಗಳು ಕಳೆದುಹೋಗುತ್ತವೆ ಮತ್ತು ಕಾನೂನಿನ ನಿಯಮಕ್ಕೆ ಧಕ್ಕೆಯಾಗುತ್ತದೆ ಎಂದು ವಕೀಲರು ಒತ್ತಿ ಹೇಳಿದರು.
ಶವಪರೀಕ್ಷೆ ನಡೆಸಿದ ನಂತರ, ಸಿಐಡಿ ಮತ್ತು ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಕೆಎಂಆರ್ಸಿಐ) ನ್ಯಾಯಾಲಯದಿಂದ ಈ ನಿಟ್ಟಿನಲ್ಲಿ ಆದೇಶಗಳಿಗಾಗಿ ಕಾಯುತ್ತಿವೆ. ದೇಹ ಕೊಳೆಯುತ್ತಿರುವುದರಿಂದ ಅದರ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಕೆಎಂಆರ್ಸಿಐ ಸಿಐಡಿಗೆ ಪತ್ರ ಬರೆದಿತ್ತು.
ಪ್ರತಿಯಾಗಿ, ದೇಹವನ್ನು ವಿಲೇವಾರಿ ಮಾಡುವ ಅಗತ್ಯತೆಯ ಬಗ್ಗೆ ಸಿಐಡಿ ನ್ಯಾಯಾಲಯಕ್ಕೆ ತಿಳಿಸಿತ್ತು ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಒಪ್ಪಿಗೆ ನೀಡಿದೆ.
ಬುಧವಾರ (ಏಪ್ರಿಲ್ 30) ರೊಳಗೆ ಆರೋಪಿಯ ದೇಹದ ಅಂತಿಮ ವಿಧಿವಿಧಾನಗಳನ್ನು ನಡೆಸುವುದಾಗಿ ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ತಾನು ಪಾಟ್ನಾ ಮೂಲದವನೆಂದು ಹೇಳಿಕೊಂಡಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಪೊಲೀಸ್ ಇಲಾಖೆಯು ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಉತ್ತರ ಭಾರತದ ಇತರ ಪ್ರದೇಶಗಳಿಗೆ ಅವರ ಕುಟುಂಬವನ್ನು ಪತ್ತೆಹಚ್ಚಲು ಮೂರು ತಂಡಗಳನ್ನು ಕಳುಹಿಸಿತ್ತು.
ಏಪ್ರಿಲ್ 13 ರಂದು ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ರಿತೇಶ್ ಕುಮಾರ್, ಆಕೆ ವಿರೋಧಿಸಿದ್ದಕ್ಕಾಗಿ ಆಕೆಯ ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ಬಾಲಕಿಯನ್ನು ಒಂದು ಶೆಡ್ಗೆ ಕರೆದೊಯ್ದು ಹಲ್ಲೆಗೆ ಯತ್ನಿಸಿದ್ದಾನೆ. ಬಾಲಕಿ ಸಹಾಯಕ್ಕಾಗಿ ಕಿರುಚಿದಾಗ, ಸ್ಥಳೀಯರು ಸ್ಥಳಕ್ಕೆ ಧಾವಿಸಿದರು.
ಸಮೀಪಿಸುತ್ತಿರುವ ಜನರನ್ನು ಗಮನಿಸಿದ ಆರೋಪಿ ಬಾಲಕಿಯನ್ನು ಕತ್ತು ಹಿಸುಕಿ ಕೊಂದು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಆರೋಪಿ ಬಾಲಕಿಯನ್ನು ತನ್ನ ತೋಳುಗಳಲ್ಲಿ ಹಿಡಿದುಕೊಂಡು ಕರೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯಗಳು ಬಹಿರಂಗಗೊಂಡಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
Advertisement