ಬೈಕ್ ಟ್ಯಾಕ್ಸಿ ನಿಷೇಧ ಜಾರಿಗೆ ಸರ್ಕಾರ ಮುಂದು: ಸವಾರರ ಜೀವನೋಪಾಯಕ್ಕೆ ಪೆಟ್ಟು..!

ಏಪ್ರಿಲ್ 2 ರಂದು ಆದೇಶ ಹೊರಡಿಸಿದ್ದ ಕರ್ನಾಟಕ ಹೈಕೋರ್ಟ್, ಬೈಕ್ ಟ್ಯಾಕ್ಸಿಗಳ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಆರು ವಾರಗಳ ಕಾಲಾವಕಾಶ ನೀಡಿತ್ತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಮೇ 14 ರೊಳಗೆ ಬೈಕ್ ಟ್ಯಾಕ್ಸಿಗಳ ಮೇಲಿನ ನಿಷೇಧವನ್ನು ಜಾರಿಗೆ ತರಲು ಸಾರಿಗೆ ಇಲಾಖೆಯ ಅಧಿಕಾರಿಗಳು ಸಿದ್ಧತೆ ಆರಂಭಿಸಿದ್ದು, ಇದರಿಂದ ಸವಾರರ ಪ್ರಾಥಮಿಕ ಜೀವನೋಪಾಯಕ್ಕೆ ಪೆಟ್ಟು ಬೀಳುವ ಸಾಧ್ಯತೆಗಳಿವೆ.

ಏಪ್ರಿಲ್ 2 ರಂದು ಆದೇಶ ಹೊರಡಿಸಿದ್ದ ಕರ್ನಾಟಕ ಹೈಕೋರ್ಟ್, ಬೈಕ್ ಟ್ಯಾಕ್ಸಿಗಳ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಆರು ವಾರಗಳ ಕಾಲಾವಕಾಶ ನೀಡಿತ್ತು.

ಆರು ವಾರಗಳ ನಂತರ ಎಲ್ಲಾ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳು ಸ್ಥಗಿತಗೊಂಡಿರುವುದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಸೂಚಿಸಿತ್ತು.

ಇದರ ಬೆನ್ನಲ್ಲೇ ಏಪ್ರಿಲ್ 25 ರಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಸಾರಿಗೆ ಕಾರ್ಯದರ್ಶಿ ಎನ್ ವಿ ಪ್ರಸಾದ್ ಮತ್ತು ಸಾರಿಗೆ ಆಯುಕ್ತ ಯೋಗೇಶ್ ಅವರಿಗೆ ಪತ್ರ ಬರೆದಿದ್ದು, ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳನ್ನು ನಿಷೇಧಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.

ಸಚಿವರ ಸೂಚನೆ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ನಿಷೇಧ ಹೇರಲು ಸಿದ್ಧತೆ ನಡೆಸುತ್ತಿದೆ ಎಂದು ಸಾರಿಗೆ ಇಲಾಖೆಯ ಮೂಲಗಳು ತಿಳಿಸಿವೆ.

ಹೈಕೋರ್ಟ್ ಆದೇಶದ ಪ್ರಕಾರ, ನೀಡಲಾದ ಆರು ವಾರಗಳ ಅಂತಿಮ ಗಡುವು ಮೇ 14 ರಂದು ಕೊನೆಗೊಳ್ಳುತ್ತದೆ. ಆದ್ದರಿಂದ ಇಲಾಖೆಯು ನ್ಯಾಯಾಲಯದ ಆದೇಶವನ್ನು ಜಾರಿಗೆ ತರುವುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಮೂಲಗಳು ತಿಳಿಸಿವೆ.

ಬೈಕ್-ಟ್ಯಾಕ್ಸಿ ಚಾಲಕರು ಮೇ 14 ರ ಮೊದಲು ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಸಾರಿಗೆ ಇಲಾಖೆಯಿಂದ ಸೂಚನೆ ನೀಡಲಾಗುವುದು. ಸೂಚನೆ ಬಳಿಕವೂ ನಿಯಮ ಪಾಲಿಸದವರನ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು. ಅವರ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಗ್ರಹ ಚಿತ್ರ
ಆರು ವಾರಗಳಲ್ಲಿ ಬೈಕ್ ಟ್ಯಾಕ್ಸಿ ಸೇವೆ ರದ್ದುಗೊಳಿಸಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಏತನ್ಮಧ್ಯೆ, ಸೋಮವಾರ, ಬೈಕ್ ಟ್ಯಾಕ್ಸಿ ಚಾಲಕರು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಭೇಟಿ ಮಾಡಿ ನಿಷೇಧವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ನಮ್ಮ ಬೈಕ್ ಟ್ಯಾಕ್ಸಿ ಅಸೋಸಿಯೇಷನ್‌ನ ಚಾಲಕರು ಮತ್ತು ರಾಪಿಡೋ, ಉಬರ್ ಮತ್ತು ಓಲಾದಲ್ಲಿ ಚಾಲನೆ ಮಾಡುವ ಇತರರು ಸೇರಿದಂತೆ 100 ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿ ಚಾಲಕರು ಸಚಿವರನ್ನು ಭೇಟಿ ಮಾಡಿದರು. ಈ ವೇಳೆ ತಮ್ಮ ಜೀವನೋಪಾಯವನ್ನು ರಕ್ಷಿಸುವಂತೆ ಒತ್ತಾಯಿಸಿದರು.

ಸರ್ಕಾರವು ಬೈಕ್ ಟ್ಯಾಕ್ಸಿಗಳನ್ನು ಕಾನೂನುಬದ್ಧ ಸಾರಿಗೆ ವಿಧಾನವೆಂದು ಔಪಚಾರಿಕವಾಗಿ ಗುರುತಿಸಬೇಕು ಮತ್ತು ರಚನಾತ್ಮಕ ನೀತಿ ಚೌಕಟ್ಟನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ನಾವು ಅಪರಾಧಿಗಳಲ್ಲ. ಘನತೆಯಿಂದ ಜೀವನ ಸಾಗಿಸಲು ಪ್ರಯತ್ನಿಸುತ್ತಿರುವ ಕಾರ್ಮಿಕರು" ಎಂದು ಬೈಕ್ ಟ್ಯಾಕ್ಸಿ ಚಾಲಕ ಮತ್ತು ಸಂಘದ ಸದಸ್ಯ ರಮೇಶ್ ಕೆ ಅವರು ಹೇಳಿದ್ದಾರೆ.

ಪ್ರತಿದಿನ ನಾವು ಭಯದಲ್ಲಿ ಬದುಕುತ್ತಿದ್ದೇವೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಬೈಕ್ ಟ್ಯಾಕ್ಸಿಗಳು ಕಾನೂನುಬದ್ಧವಾಗಿದ್ದರೆ, ಕರ್ನಾಟಕದಲ್ಲಿ ಮಾತ್ರ ನಿಷೇಧ ಹೇರುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.

ಅನೇಕ ಚಾಲಕರು, ವಿದ್ಯಾರ್ಥಿಗಳು, ಪೋಷಕರು ಸಾಂಕ್ರಾಮಿಕ ಸಮಯದಲ್ಲಿ ಕೆಲಸ ಕಳೆದುಕೊಂಡ ನಂತರ ಬೈಕ್ ಟ್ಯಾಕ್ಸಿಗಳತ್ತ ಮುಖ ಮಾಡಿದ್ದಾರೆ. ಸರ್ಕಾರದ ಕ್ರಮ ನಮ್ಮ ಆದಾಯ ಮೂಲವನ್ನು ನಾಶಮಾಡಲಿದೆ. ನಗರದಲ್ಲಿ ನಮ್ಮ ಉಳಿವಿಗೆ ಅಪಾಯವನ್ನುಂಟುಮಾಡಸಿದೆ ಎಂದು ತಿಳಿಸಿದ್ದಾರೆ.

ಬೈಕ್ ಟ್ಯಾಕ್ಸಿ ಚಾಲಕ ಎನ್ ರೆಡ್ಡಿ ಅವರು ಮಾತನಾಡಿ, ಸರ್ಕಾರ ನಿಯಮಗಳನ್ನು ರೂಪಿಸಿದರೆ, ನಾವು ಅವುಗಳನ್ನು ಅನುಸರಿಸುತ್ತೇವೆ. ಆದರೆ ನಿಯಮಗಳನ್ನು ರೂಪಿಸಲು ನನ್ನ ದಿನನಿತ್ಯದ ಆಹಾರದ ಮೂಲವನ್ನು ತೆಗೆದುಕೊಳ್ಳುವ ತರ್ಕವೇನು? ಸರ್ಕಾರ ಈ ನಿಯಮಗಳನ್ನು ರೂಪಿಸುವವರೆಗೆ ನಾನು ನನ್ನ ಮಗುವಿನ ಶಾಲಾ ಶುಲ್ಕವನ್ನು ಹೇಗೆ ಪಾವತಿಸಬೇಕು?" ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com