
ಬೆಂಗಳೂರು: ಹಿರಿಯ ಐಎಎಸ್ ಅಧಿಕಾರಿ ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(ಬಿಎಂಆರ್ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಅವರಿಗೆ ಹೆಚ್ಚುವರಿಯಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮುಖ್ಯ ಆಯುಕ್ತರ ಹುದ್ದೆ ನೀಡಿರುವ ಸರ್ಕಾರದ ನಿರ್ಧಾರದ ಬಗ್ಗೆ ತಜ್ಞರು ಮತ್ತು ಸಾಮಾಜಿಕ ಹೋರಾಟಗಾರರು ತೀವ್ರ ಕಳವಳ ಮತ್ತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
225 ವಾರ್ಡ್ಗಳನ್ನು ಹೊಂದಿರುವ ಬಿಬಿಎಂಪಿಗೆ ಪೂರ್ಣಾವಧಿ ಆಯುಕ್ತರಿಲ್ಲದಿರುವುದು ಮಹಾನಗರ ಪಾಲಿಕೆಯ ದೈನಂದಿನ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.
ಕಸ ವಿಲೇವಾರಿ, ಗುಂಡಿಗಳು ಮತ್ತು ಒಳಚರಂಡಿ ಕೆಲಸದಂತಹ ಪ್ರಮುಖ ಸಮಸ್ಯೆಗಳ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತವೆ. ಇದಲ್ಲದೆ, ಬಿಬಿಎಂಪಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆಗೆ ದಾರಿ ಮಾಡಿಕೊಡುವುದು, ಡಿಲಿಮಿಟೇಶನ್, ಹೊಸ ಪ್ರದೇಶಗಳನ್ನು ಸೇರಿಸುವುದು ಮತ್ತು ಒಬಿಸಿ ಮೀಸಲಾತಿ ಎಲ್ಲದರ ಮೇಲೂ ಪರಿಣಾಮ ಬೀರುತ್ತದೆ ಎಂದು ಹೋರಾಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಅತಿ ದೊಡ್ಡ ಪ್ರದೇಶವನ್ನು ಒಳಗೊಂಡಿದೆ ಮತ್ತು ಎಲ್ಲಾ ವಲಯ ಆಯುಕ್ತರ ಸಮನ್ವಯದೊಂದಿಗೆ ಆಡಳಿತ ನಡೆಸಲು ಪೂರ್ಣಾವಧಿಯ ಮುಖ್ಯ ಆಯುಕ್ತರ ಅಗತ್ಯವಿದೆ ಎಂದು ಪುರಸಭೆಯ ಮಾಜಿ ಆಯುಕ್ತ ಕೆ. ಜೈರಾಜ್ ಅವರು ಹೇಳಿದ್ದಾರೆ.
"ಮಹೇಶ್ವರ್ ರಾವ್ ಅವರು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್(ಬಿಎಂಆರ್ಸಿಎಲ್) ಮತ್ತು ಬಿಬಿಎಂಪಿ ಎರಡರ ಮುಖ್ಯಸ್ಥರಾಗಲು ಸಮರ್ಥ ವ್ಯಕ್ತಿ. ಆದರೆ ಅವರಿಗೆ ಯಾವುದಾದರು ಒಂದರ ಸ್ವತಂತ್ರ ಜವಾಬ್ದಾರಿ ನೀಡಬೇಕಾಗಿದೆ. ಸರ್ಕಾರಕ್ಕೂ ಇದರ ಬಗ್ಗೆ ತಿಳಿದಿದೆ ಮತ್ತು ತಕ್ಷಣಕ್ಕೆ ಅವರಿಗೆ ಹೆಚ್ಚುವರಿ ಹೊಣೆ ನೀಡಿರುವುದು ಆಡಳಿತಾತ್ಮಕ ನಿರ್ಧಾರವಾಗಿದೆ. ಸರ್ಕಾರವು ಬಿಎಂಆರ್ಸಿಎಲ್ಗೆ ಅಥವಾ ಬಿಬಿಎಂಪಿಗೆ ಇನ್ನೊಬ್ಬ ಅಧಿಕಾರಿಯನ್ನು ನೇಮಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.
ಬಿಬಿಎಂಪಿ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ ಮತ್ತು ಹೊಸ ವಾರ್ಡ್ಗಳನ್ನು ಸೇರಿಸಬೇಕಾಗುತ್ತದೆ. ಅಲ್ಲದೆ, OBC ಆಧಾರಿತ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಬೇಕಾಗಿದೆ. ಇದು ಬಿಬಿಎಂಪಿ ಉಸ್ತುವಾರಿ ಆಯುಕ್ತರಿಗೆ ಕಷ್ಟಕರವಾದ ಕೆಲಸ ಎಂದು CIVICನ ಕಾರ್ಯನಿರ್ವಾಹಕ ಟ್ರಸ್ಟಿ ಕಾತ್ಯಾಯಿನಿ ಚಾಮರಾಜ್ ಅವರು ಹೇಳಿದ್ದಾರೆ.
ಬಿಬಿಎಂಪಿಗೆ ಪೂರ್ಣ ಪ್ರಮಾಣದ ಮುಖ್ಯ ಆಯುಕ್ತರು ಇದ್ದಾಗಲೂ ಅತ್ಯಂತ "ಕಳಪೆಯಾಗಿ ನಿರ್ವಹಿಸಲಾಗಿದೆ". ಇನ್ನು ಹೆಚ್ಚುವರಿ ಹೊಣೆ ಇದ್ದರೆ ಸರಿಯಾಗಿ ನಿರ್ವಹಿಸಲು ಅಸಾಧ್ಯ ಎಂದು ಸಾಮಾಜಿಕ ಹೋರಾಟಗಾರ ಸಂದೀಪ್ ಅನಿರುಧನ್ ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ, ನೆಟಿಜನ್ಸ್ ಕಿಡಿ
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಅವರನ್ನು ಬಿಬಿಎಂಪಿ ಮುಖ್ಯ ಆಯುಕ್ತರನ್ನಾಗಿ ನೇಮಿಸಿರುವುದಕ್ಕೆ ಹಲವು ಕಡೆಗಳಿಂದ ಟೀಕೆ ವ್ಯಕ್ತವಾಗಿದೆ. ಒಬ್ಬ ವ್ಯಕ್ತಿಗೆ ಎರಡು ಪ್ರಮುಖ ಹುದ್ದೆ ನೀಡಿದ್ದಕ್ಕಾಗಿ ಬಿಜೆಪಿ ಮತ್ತು ನೆಟಿಜನ್ಗಳು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಜೆಪಿ ನಾಯಕ ಮತ್ತು ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್, "ಬಿಎಂಆರ್ಸಿಎಲ್ ಅರೆಕಾಲಿಕ, ಬಿಬಿಎಂಪಿ ಅರೆಕಾಲಿಕ, ಆದರೆ ಭ್ರಷ್ಟಾಚಾರ ಪೂರ್ಣಾವಧಿ" ಎಂದು ವಾಗ್ದಾಳಿ ನಡೆಸಿದರು.
Advertisement