
ಮೈಸೂರು: ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ದುರಂತದಲ್ಲಿ ಸಂಭವಿಸಿ 4 ವರ್ಷಗಳು ಕಳೆದರೂ ಸಂತ್ರಸ್ತರ ಬೇಡಿಕೆಗಳು ಈಡೇರಿಲ್ಲ.
ದುರಂತ ಸಂಭವಿಸಿದ ಬಳಿಕ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮೇ 2, 2021 ರಂದು ಆಸ್ಪತ್ರೆಗೆ ಭೇಟಿ ನೀಡಿ, ಸಂಬಂಧಿಕರೊಂದಿಗೆ ಮಾತುಕತೆ ನಡೆಸಿ, ದುರಂತದಲ್ಲಿ ಮೃತಪಟ್ಟಿದ್ದ 34 ಮಂದಿ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದರು. ಹಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಿ, ಸರ್ಕಾರಿ ಉದ್ಯೋಗದ ಭರವಸೆ ನೀಡಿದ್ದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಕೊಟ್ಟ ಮಾತಿನಂತೆ ನಡೆಯುತ್ತಾರೆಂಬ ನಿರೀಕ್ಷೆಯಲ್ಲಿ ಸಂತ್ರಸ್ತರಿದ್ದರು. ಆದರೆ, ಆ ನಿರೀಕ್ಷೆಗಳು ಹುಸಿಯಾಗಿದ್ದು, ಮುಂದಿನ ಬಾರಿ ನಡೆಯುವ ಸಚಿವ ಸಂಪುಟ ಸಭೆಯಲ್ಲಾದರೂ ತಮ್ಮ ಬೇಡಿಕೆಗಳಿಗೆ ಮನ್ನಣೆ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಸರ್ಕಾರದ ಕಚೇರಿಯಿಂದ ಕಚೇರಿಗೆ ಓಡಾಡುತ್ತಿದ್ದೇವೆ. ಆದರೆ, ನೌಕರಿ ಸಿಕ್ಕಿಲ್ಲ. ಕೆಲವರಿಗೆ ಮಾತ್ರ ಹೊರಗುತ್ತಿಗೆ ನೌಕರರಾಗಿ ಅವಕಾಶ ನೀಡಲಾಯಿತು ಮತ್ತು ಇನ್ನೂ ಅನೇಕರಿಗೆ ಕೆಲಸ ಸಿಕ್ಕಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಚರ್ಚಿಸುವುದಾಗಿ ಈ ಹಿಂದೆ ಹೇಳಿದ್ದರು. ಗುರುವಾರ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಕ್ಸಿಜನ್ ಸಂತ್ರಸ್ತರ ನೆರವಿಗೆ ಸರಕಾರ ಹೆಚ್ಚಿನ ಪರಿಹಾರ ನೀಡಬಹುದು. ಸರಕಾರಿ ಉದ್ಯೋಗ ನೀಡಲು ವಿಶೇಷ ಕ್ರಮ ಕೈಗೊಳ್ಳಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಸ್ಪಂದನೆ ದೊರೆತಿಲ್ಲ. ನಾಲ್ಕು ವರ್ಷಗಳ ನಂತರವೂ ತಮಗೆ ಕೆಲಸ ನೀಡದ ಕಾರಣ ಕಾಂಗ್ರೆಸ್ ನೀಡಿದ್ದ ರೂ.1 ಲಕ್ಷ ಪರಿಹಾರವನ್ನು ಹಿಂತಿರಿಗಿಸಲು ನಿರ್ಧರಿಸಿದ್ದೇವೆಂದು ಸಂತ್ರಸ್ತ ಕುಟುಂಬಗಳು ಹೇಳಿವೆ.
ಖಾಯಂ ಉದ್ಯೋಗ ನೀಡುವ ಭರವಸೆಯನ್ನು ಉಳಿಸಿಕೊಳ್ಳಲು ವಿಫಲವಾದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಹಣವನ್ನು ಹಿಂದಿರುಗಿಸಲು ನಿರ್ಧರಿಸಿದ್ದೇವೆ ಎಂದು ನಲ್ಲೂರಿನ ಮಂಜುನಾಥ್ ಅವರು ಹೇಳಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ಬದ್ಧತೆಯನ್ನು ತೋರಿಸಿಲ್ಲ ಎಂದು ಆರೋಪಿಸಿದ್ದಾರೆ.
ಅರುಣ್ಕುಮಾರ್ ಎಂಬುವವರು ಮಾತನಾಡಿ, ಕೊಟ್ಟ ಮಾತಿನಂತೆ ಕಾಂಗ್ರೆಸ್ ನಡೆದಿಲ್ಲ. ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ ಎದು ಕಿಡಿಕಾರಿದ್ದಾರೆ.
ಮೃತರ ಸಂಬಂಧಿಕರಾದ ರಮೇಶ್ ಬಾಬು ಎಂಬುವವರ ಮಾತಾಡಿ, ಸರ್ಕಾರದಿಂದ ನ್ಯಾಯ ಸಿಗದ ಕಾರಣ ನಾವು ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದೇವ. ಸರ್ಕಾರ ಮುಂದಿನ ಸಂಪುಟ ಸಭೆಯಲ್ಲಿ ನಮ್ಮ ಬೇಡಿಕೆಯನ್ನು ಈಡೇರಿಸಲು ಮತ್ತು ಖಾಯಂ ಉದ್ಯೋಗ ನೀಡಲು ಸರ್ಕಾರ ವಿಫಲವಾಗಿದ್ದೇ ಆದರೆ, ಆತ್ಮಹತ್ಯೆ ಮಾಡಿಕೊಳ್ಳು ನಿರ್ಧಾರಕ್ಕೆ ಬಂದಿದ್ದೇವೆಂದು ಹೇಳಿದ್ದಾರೆ.
Advertisement