
ಬೆಂಗಳೂರು: 7ನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿನಲ್ಲಿ ನಡೆದಿದೆ.
ಮೃತ ಬಾಲಕನನ್ನು 14 ವರ್ಷದ ಗಾಂಧಾರ್ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಗಾಂಧಾರ್, ಗಿಟಾರ್ ತಂತಿ ಕಿತ್ತು ಅದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಬೆಳಗ್ಗೆ ತಂದೆ ಬಾಲಕನ ರೂಮ್ಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆ ಮಾಡಿಕೊಂಡ ಗಾಂಧಾರ್ನ ತಂದೆ ಮ್ಯೂಸಿಕ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದು, ತಾಯಿ ಸವಿತಾ ಖ್ಯಾತ ಜಾನಪದ ಗಾಯಕಿಯಾಗಿದ್ದಾರೆ. ಸವಿತಾ ಅವರು ಕಳೆದ ಶುಕ್ರವಾರ ಕಾರ್ಯಕ್ರಮದ ಹಿನ್ನಲೆಯಲ್ಲಿ ಆಸ್ಟ್ರೇಲಿಯಾಗೆ ತೆರಳಿದ್ದರು. ಸದ್ಯ ತಾಯಿ ವಾಪಸ್ ಬರುವವರೆಗೆ ಮರಣೋತ್ತರ ಪರೀಕ್ಷೆ ನಡೆಸದೇ ಇರಲು ತಿರ್ಮಾನಿಸಲಾಗಿದೆ.
ವಿದ್ಯಾರ್ಥಿ ಬರೆದ ಡೆತ್ನೋಟ್ನಲ್ಲಿ ಏನಿದೆ?
ಪ್ರೀತಿಯ ಕುಟುಂಬ ಸದಸ್ಯರೇ, ಈ ಪತ್ರ ಯಾರೆಲ್ಲ ಓದುತ್ತಿದ್ದೀರಾ ಅಳಬೇಡಿ. ಈಗಾಗಲೇ ಸ್ವರ್ಗದಲ್ಲಿದ್ದೇನೆ, ಮತ್ತೆ ನನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ನಿಮ್ಮ ಈಗಿನ ಸ್ಥಿತಿ ಹೇಗಿದೆ ಅನ್ನೋದು ನನಗೆ ತಿಳಿದಿದೆ. ನಿಮಗೆ ನೋವಾಗುತ್ತೆ ಅನ್ನೋದು ನನಗೆ ಗೊತ್ತು. ಈ ಮನೆ ಚೆನ್ನಾಗಿರಬೇಕೆಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನನ್ನ ಮೇಲೆ ನಿಮಗೆ ಕೋಪ ಬರುವಂತೆ ನಡೆದುಕೊಂಡಿದ್ದೇನೆ. ನನ್ನಿಂದ ನೊಂದಿದ್ದೀರಾ, ನಿಮಗೆ ತೊಂದರೆ ಕೂಡ ನೀಡಿದ್ದೇನೆ, ಆದರೆ ನನ್ನ ಉದ್ದೇಶ ನಿಮ್ಮನ್ನು ನೋಯಿಸೋದಾಗಿರಲಿಲ್ಲ. ನನ್ನ ಮೇಲೆ ನಿಮಗೆ ಕೋಪ ಇದ್ದರೆ ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ನನ್ನ ತಪ್ಪುಗಳನ್ನು ದಯವಿಟ್ಟು ಕ್ಷಮಿಸಿ.
14 ವರ್ಷಗಳ ಕಾಲ ನಾನು ಬದುಕಿದ್ದು, ಅದರಲ್ಲೇ ತೃಪ್ತನಾಗಿದ್ದೇನೆ. 14 ವರ್ಷಗಳಲ್ಲಿ ನಾನು ಖುಷಿಯ ಕ್ಷಣ ಕಳೆದಿದ್ದೇನೆ ಅದೇ ಸಾಕು. ಸ್ವರ್ಗದಲ್ಲಿ ನಾನು ಖುಷಿಯಾಗಿದ್ದೇನೆ. ನಾನು ನನ್ನ ಸ್ನೇಹಿತರನ್ನು ಪ್ರೀತಿಸುತ್ತಿದ್ದೆ ಎಂದು ಅವರಿಗೆ ತಿಳಿಸಿ. ನನ್ನ ಶಾಲಾ ಸ್ನೇಹಿತರಿಗೂ ಈ ಮಾತನ್ನು ಹೇಳಿ. ಐ ಮಿಸ್ ಯೂ ಆಲ್- ಗುಡ್ಬೈ ಅಮ್ಮ ಎಂದು ಡೆತ್ನೋಟ್ ಬರೆಯಲಾಗಿದೆ.
Advertisement