
ಬೆಂಗಳೂರು: ಮಹೇಶ್ ಶೆಟ್ಟಿ ತಿಮರೋಡಿ ಬೆನ್ನಲ್ಲೇ ಯೂಟ್ಯೂಬರ್ ಎಂಡಿ ಸಮೀರ್ (MD Sameer) ಗೂ ಬಂಧನ ಭೀತಿ ಎದುರಾಗಿದ್ದು, ಬೆಂಗಳೂರಿನಲ್ಲಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಕುರಿತು AI ವಿಡಿಯೋ ಮಾಡಿದ್ದ ಎಂಡಿ ಸಮೀರ್ ನನ್ನು ವಿಚಾರಣೆಗೊಳಪಡಿಸಲು ಪೊಲೀಸರು ಆತನ ನಿವಾಸಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಧರ್ಮಸ್ಥಳ ಪೊಲೀಸರು ಎಫ್ಐಆರ್ ದಾಖಲಿಸಿ ಸಮೀರ್ನನ್ನು ವಶಕ್ಕೆ ಪಡೆಯಲು ಬನ್ನೇರುಘಟ್ಟದ ನಿವಾಸಕ್ಕೆ ಆಗಮಿಸಿದ್ದು, ಪೊಲೀಸರು ಸಮೀರ್ ನಿವಾಸದಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಸಮೀರ್ ಸಿಕ್ಕರೆ ವಿಚಾರಣೆಗೆ ಕರೆದೊಯ್ಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣದ ಬಗ್ಗೆ ಪ್ರಚೋದನಕಾರಿ ವಿಡಿಯೋ ಮಾಡಿದ್ದ ಯೂಟ್ಯೂಬರ್ ಎಂಡಿ ಸಮೀರ್ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಮೀರ್ ಎಐ ಬಳಸಿ ತಪ್ಪು ಮಾಹಿತಿ ಹರಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಲ್ಲದೆ ಧರ್ಮಸ್ಥಳ ಭಕ್ತರು ಮತ್ತು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಮೀರ್ನನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಇನ್ನು ಇತ್ತೀಚೆಗೆ ಕುಣಿಗಲ್ ಪೊಲೀಸ್ ಠಾಣೆಯಲ್ಲೂ ದೂರು ದಾಖಲಾಗಿತ್ತು.
ಇದರ ನಡುವೆಯೇ ಸದ್ಯ ಎಫ್ಐಆರ್ ಹಾಕಿರುವ ಪೊಲೀಸರು ಆತನನ್ನು ವಶಕ್ಕೆ ಪಡೆಯಲು ಬೆಂಗಳೂರಿನ ಬನ್ನೇರುಘಟ್ಟದ ನಿವಾಸದ ಬಳಿ ಆಗಮಿಸಿದ್ದಾರೆ.
ಬೆಂಗಳೂರು ನಿವಾಸದಲ್ಲಿ ಹುಡುಕಾಟ
ಬನ್ನೇರುಘಟ್ಟದ ಆನೇಕಲ್ ಸಮೀಪದ ಹುಲ್ಲಳ್ಳಿಯ ಕ್ರೈಸ್ಟ್ ಕಾಲೇಜು ಬಳಿ ಇರುವ ಸಮೀರ್ ನಿವಾಸದ ಬಳಿಕ ಧರ್ಮಸ್ಥಳ ಗ್ರಾಮ ಪೊಲೀಸ್ ಠಾಣೆಯ ಪಿಎಸ್ಐ ಆನಂದ್ ಎಂಬುವವರು ಆಗಮಿಸಿ ತಪಾಸಣೆ ನಡೆಸಿದ್ದಾರೆ. ಮನೆಯಲ್ಲಿ ಸಮೀರ್ ಇಲ್ಲದ ಕಾರಣ ಕುಟುಂಬಸ್ಥರ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಮೀರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಹೆಗ್ಡೆ ಕುಟುಂಬ
ಇನ್ನು ಈ ಹಿಂದೆ ಯೂಟ್ಯೂಬರ್ ಸಮೀರ್ ಎಂಡಿ ವಿರುದ್ಧ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರ ಸೋದರಳಿಯ ನಿಶ್ಚಲ್ ಅವರು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಯೂಟ್ಯೂಬರ್ ಸಮೀರ್ ತಮ್ಮ ಎಐ ವಿಡಿಯೋದಲ್ಲಿ ತನ್ನ ತಮ್ಮ ಕುಟುಂಬದ ಮಾನಹಾನಿ ಮಾಡುವ ವಿಚಾರಗಳನ್ನು ಹೇಳಿದ್ದಾರೆ ಎಂದು ಆರೋಪಿಸಿ ಕೂಡಲೇ ಆ ವಿಡಿಯೋಗಳನ್ನು ಯೂಟ್ಯೂಬ್ ನಿಂದ ತೆಗೆದುಹಾಕುವಂತೆ ಕೋರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಅಭಿವ್ಯಕ್ತಿ ಸ್ವಾತಂತ್ರ್ಯದ ಅಂಶವನ್ನು ಗಮನದಲ್ಟಿಟ್ಟುಕೊಂಡು ತಡೆಯಾಜ್ಞೆ ನೀಡಲು ನಿರಾಕರಿಸಿತ್ತಾದರೂ ಸಮೀರ್ ಗೆ ಈ ಸಂಬಂಧ ನೋಟಿಸ್ ಜಾರಿ ಮಾಡಿತ್ತು.
ದೂರಿನಲ್ಲಿ ಏನಿದೆ?
ಧರ್ಮಸ್ಥಳದಲ್ಲಿ ಜುಲೈ 12 ರಂದು ಸಮರ್ಥ ಆರ್ ಗಾಣಿಗೇರ್ ಎಂಬುವವರು ದೂರು ನೀಡಿದ್ದು, "ಸಮೀರ್ ಎಂ.ಡಿ ಎಂಬಾತನು ಧೂತ ಎಂಬ ಯೂಟ್ಯೂಬ್ ಚಾನಲ್ನಲ್ಲಿ ಎಐ ಟೂಲ್ ಮೂಲಕ ಸೃಷ್ಟಿಸಿರುವ 23 ನಿಮಿಷ 52 ಸೆಕೆಂಡ್ ನ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುತ್ತಾನೆ.
ವಿಡಿಯೋವನ್ನು ಪರಿಶೀಲಿಸಿದಾಗ ವಿಡಿಯೋದಲ್ಲಿ ಪ್ರಕರಣದ ಫಿರ್ಯಾಧಿಯಲ್ಲಿ ಮತ್ತು ಮಾನ್ಯ ನ್ಯಾಯಾಲಯದಲ್ಲಿ ನೀಡಿರುವ ಮಾಹಿತಿಯನ್ನು ಹೊರತುಪಡಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಕಾಲ್ಪನಿಕವಾಗಿ ಸೃಷ್ಟಿಸಿಕೊಂಡು ವಿಡಿಯೋ ಮಾಡಿರುವುದು ಕಂಡು ಬರುತ್ತದೆ. ಈ ಪ್ರಕರಣದ ಪಿರ್ಯಾದಿದಾರರಿಗೆ ಸಾಕ್ಷಿದಾರರ ಸಂರಕ್ಷಣೆ ಯೋಜನೆ 2018ರ ಅಡಿಯಲ್ಲಿ ಭದ್ರತೆಯನ್ನು ಒದಗಿಸಿದ್ದು, ಅವರ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಲ್ಲಿ ಅವರ ಗುರುತು ಪತ್ತೆಯಾಗುತ್ತದೆ.
ಅಂತೆಯೇ ಸಮೀರ್ ಎಂ.ಡಿ ಎಂಬಾತನು ಧೂತ ಎಂಬ ಯೂಟ್ಯೂಬ್ ಚಾನಲ್ನಲ್ಲಿ ಎಐ ಟೂಲ್ ಮೂಲಕ ನಡೆದ ಅಪರಾಧಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿಯನ್ನು ಕೊಟ್ಟಿರುತ್ತಾನೆ. ಆತನು ತನ್ನ ವಿಡಿಯೋದಲ್ಲಿ, "ಸಾವಿರ ಜನರನ್ನು ರೇಪ್ ಮಾಡಿ ಕೊಲೆ ಮಾಡಿ ಮುಚ್ಚಿ ಹಾಕಿದ್ದಾರೆ. ಇದನ್ನು ಕೇಳಿದರೆ ನಿಮ್ಮ ರಕ್ತ ಕುದಿತ್ತಿಲ್ವಾ ಕರ್ನಾಟಕದ ಮೂಲೆ ಮೂಲೆಯಲ್ಲಿರುವವರು ಬೀದಿಗಿಳಿದು ಪ್ರತಿಭಟನೆ ಮಾಡಬೇಕು ಮತ್ತು ಈ ಅನ್ಯಾದ ವಿರುದ್ಧ ಪ್ರತಿಯೊಬ್ಬರು ಧ್ವನಿ ಎತ್ತಬೇಕು” ಎಂಬುದಾಗಿ ಸಂದೇಶವನ್ನು ನೀಡಿ ದೊಂಬಿ ಮಾಡುವ ಉದ್ದೇಶದಿಂದ ಸಾರ್ವಜನಿಕರನ್ನು ಉದ್ರೇಕಿಸಿರುತ್ತಾನೆ.
ಸಾರ್ವಜನಿಕ ಕೇಡಿಗೆ ಕಾರಣವಾಗುವ ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧ ವೆಸಗುವಂತೆ ಉದ್ದೇಶವುಳ್ಳ ಹೇಳಿಕೆಯನ್ನು ವಿಡಿಯೋದಲ್ಲಿ ನೀಡಿರುತ್ತಾನೆ. ಆದ್ದರಿಂದ, ಸಮೀರ್ ಎಂ.ಡಿ ಮತ್ತು ಧೂತ ಎಂಬ ಯೂ ಟ್ಯೂಬ್ ಚಾನಲ್ ನ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಲು ದೂರುದಾರರು ಕೋರಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
Advertisement