
ಮೈಸೂರು: ಧರ್ಮಸ್ಥಳ ಪ್ರಕರಣದಲ್ಲಿ ಪಾರದರ್ಶಕ ತನಿಖೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು,ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರ ಮತ್ತು ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಅಶಾಂತಿ ವಾತಾವರಣ ಸೃಷ್ಟಿಸಿದ್ದಕ್ಕಾಗಿ ವಿಶೇಷ ತನಿಖಾ ದಳ (ಎಸ್ಐಟಿ) ಮುಸುಕುಧಾರಿ ವ್ಯಕ್ತಿಯನ್ನು ಬಂಧಿಸಿದೆ. ಪ್ರಕರಣ ಸಂಬಂಧ ಪೊಲೀಸರು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸುತ್ತಿದ್ದಾರೆಂದು ಹೇಳಿದರು.
ಧರ್ಮಸ್ಥಳ ಪ್ರಕರಣ ಹಿಂದೆ ಒಂದು ಗುಂಪಿನ ಕೈವಾಡವಿದೆ. ಆರೋಪಗಳನ್ನು ರಾಜಕಾರಣದಿಂದ ನೋಡಲು ಸಾಧ್ಯವಿಲ್ಲ. ಪ್ರಮುಖ ಧಾರ್ಮಿಕ ಕೇಂದ್ರವಾದ ಧರ್ಮಸ್ಥಳದ ಪಾವಿತ್ರ್ಯವನ್ನು ಎತ್ತಿಹಿಡಿಯುವ ತನಿಖೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164 ರ ಅಡಿಯಲ್ಲಿ ಒಬ್ಬ ವ್ಯಕ್ತಿ ಹೇಳಿಕೆ ನೀಡಿದಾಗ ತನಿಖೆ ಅಗತ್ಯವಿರುತ್ತದೆ. ಬಿಜೆಪಿ ಏಕೆ ಭಯಪಡಬೇಕು? ನಾವೆಲ್ಲರೂ ಭಕ್ತರು. ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಅವರೇ ಎಸ್ಐಟಿ ತನಿಖೆಯನ್ನು ಸ್ವಾಗತಿಸಿದಾಗ ಬಿಜೆಪಿಯವರೇಕೆ ರಾಜಕೀಯ ಮಾಡಿದರು? ಎಂದು ಪ್ರಶ್ನಿಸಿದರು.
ವೀರೇಂದ್ರ ಹೆಗ್ಗಡೆ ಅವರೇ ಎಸ್.ಐ.ಟಿ ತನಿಖೆ ಸ್ವಾಗತ ಮಾಡಿದ್ದಾರೆ. ಆದರೆ ತನಿಖೆಯೇ ಆಗಬಾರದು ಎನ್ನಲು ಸಾಧ್ಯವೇ? ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಕೆಲವರು ದೂರು ಕೊಟ್ಟಿದ್ದಾರೆ. ಸುಳ್ಳು ದೂರು ಕೊಟ್ಟು ಇಂತಹ ವಾತಾವರಣ ಸೃಷ್ಟಿ ಮಾಡಿದ್ದರೆ. ಅದಕ್ಕಾಗಿ ದೂರುದಾರನನ್ನು ಬಂಧಿಸಲಾಗಿದೆ. ಬಿಜೆಪಿ ಇದರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇದು ಷಡ್ಯಂತ್ರ ಆಗಿದ್ದರೆ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಏನು ಎಲ್ಲವೂ ಕೂಡ ಹೊರಬರುತ್ತದೆ. ಎಲ್ಲರ ಮೇಲೂ ಕಾನೂನು ಕ್ರಮ ಆಗುತ್ತದೆ ಎಂದು ಹೇಳಿದರು.
ಸುಜಾತಾ ಭಟ್ ಅವರನ್ನು ವಶಕ್ಕೆ ಪಡೆಯಬೇಕೆ ಅಥವಾ ಬೇಡವೇ ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ. ತನಿಖೆಯಿಂದ ಸಮಗ್ರ ವರದಿಗಾಗಿ ಸರ್ಕಾರ ಕಾಯುತ್ತಿದೆ ಎಂದು ಹೇಳಿದರು .
Advertisement