
ಬೆಂಗಳೂರು: ಗಣೇಶ ಚತುರ್ಥಿ ಹಬ್ಬ ನಡುವಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರ ಆರೋಗ್ಯದ ಕುರಿತು ಗುಸುಗುಸುಗಳು ಶುರುವಾಗಿದ್ದು, ಅದು ಅವರ ಬೆಂಬಲಿಗರಲ್ಲಿ ಆತಂಕ ಮೂಡುವಂತೆ ಮಾಡಿದೆ.
ಕುಮಾರಸ್ವಾಮಿಯವರು ದುರ್ಬಲರಾಗಿರುವ ಹಾಗೂ ತೂಕ ಕಡಿಮೆಯಾಗಿರುವ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಬೆಂಬಲಿಗರಲ್ಲಿ ಆತಂಕ ಮೂಡಿಸಿದೆ.
ಈ ನಡುವೆ ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರು ಸ್ಪಷ್ಟನೆ ನೀಡಿದ್ದು, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ದೇವನಹಳ್ಳಿಯಲ್ಲಿ ಆಯೋಜಿಸಿದ್ದ ಜನತಾದಳ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಣ್ಣ ಆರೋಗ್ಯ ಸರಿ ಇಲ್ಲ ಎಂದು ರಾಜ್ಯದಲ್ಲೆಡೆ ಚರ್ಚೆಗಳು ಶುರುವಾಗಿದೆ. ಆದರೆ, ತಂದೆ-ತಾಯಿ ಆಶೀರ್ವಾದ, ಭಗವಂತನ ಕೃಪೆ, ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಕುಮಾರಣ್ಣ ಆರೋಗ್ಯವಾಗಿದ್ದಾರೆ. ಯಾವುದೇ ಸಮಸ್ಯೆ ಇಲ್ಲ, ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಮಾಧ್ಯಮಗಳು ಮತ್ತು ಕಾರ್ಯಕರ್ತರು ಕುಮಾರಣ್ಣನ ಆರೋಗ್ಯದಲ್ಲಿ ಕುರಿತು ಕೇಳುತ್ತಿದ್ದಾರೆ. 80 ಕ್ಷೇತ್ರಗಳಲ್ಲಿ ಸುತ್ತಾಡಿ ತಂದೆಯವರ ಜವಾಬ್ದಾರಿಯನ್ನು ನಾನು ಹೊರುತ್ತಿದ್ದೇನೆ. ಪ್ರತಿನಿತ್ಯ ನಾನು ನನ್ನ ಆಯಸ್ಸು ನನ್ನ ತಂದೆಗೆ ಕೊಡಬೇಕೆಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದೇನೆ. ನಾನು ಕೇವಲ ಮಗನಾಗಿ ಈ ಮಾತನ್ನು ಹೇಳುತ್ತಿಲ್ಲ. ಕುಮಾರಣ್ಣ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರಾಗಿದೆ. ಆದರೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಅವರು ಚೇತರಿಕೆ ಕಾಣುತ್ತಿದ್ದಾರೆ. ಶೀಘ್ರದಲ್ಲೆ ಸಂಪೂರ್ಣ ಗುಣಮುಖರಾಗುತ್ತಾರೆ. ದೇವೆಗೌಡರು, ಕುಮಾರಣ್ಣ ಇಬ್ಬರು ಸಹ ಶತಾಯುಷಿಗಳಾಗುತ್ತಾರೆ ಎನ್ನುವ ನಂಬಿಕೆ ಇದೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ ಸಿಎನ್ ಮಂಜುನಾಥ್ ಅವರು ಮಾತನಾಡಿ, ಕುಮಾರಸ್ವಾಮಿಯವರಿಗೆ ಅಲ್ಪ ಪ್ರಮಾಣದ ಸೋಂಕು ಕಂಡು ಬಂದಿತ್ತು. ಅದನ್ನು ಹೊರತುಪಡಿಸಿದರೆ ದೊಡ್ಡ ಸಮಸ್ಯೆಗಳಿಲ್ಲ ಎಂದು ಹೇಳಿದ್ದಾರೆ.
Advertisement