
ಬೆಂಗಳೂರು: ಕೇಂದ್ರ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯ ಸಮಸ್ಯೆ ಕುರಿತು ವದಂತಿಗಳು ಹರಡಿದ್ದು, ಈ ಬಗ್ಗೆ ಕುಮಾರಸ್ವಾಮಿಯವರ ಪುತ್ರ ಹಾಗೂ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿಯವರು ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಬೆಟ್ಟಹಳ್ಳಿ ಗ್ರಾಮದಲ್ಲಿ ಸೋಮೇಶ್ವರಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಮತ್ತು ಶಿಖರ ಕಳಸ ಪ್ರತಿಷ್ಠಾಪನಾ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಣ್ಣ ಅರೋಗ್ಯ ಸರಿ ಇಲ್ಲ ಅಂತ ರಾಜ್ಯದಲ್ಲೆಡೆ ಚರ್ಚೆಗಳು ಶುರುವಾಗಿದೆ, ಸೋಮೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ನಿಂತು ಒಂದು ಮಾತನ್ನು ತಿಳಿಸುತ್ತೇನೆ. ಅವರ ತಂದೆ ತಾಯಿ ಆಶೀರ್ವಾದ, ಭಗವಂತನ ಕೃಪೆ, ಜೊತೆಯಲ್ಲಿ ನಿಮ್ಮೆಲ್ಲರ ಪ್ರೀತಿಯ ಹಾರೈಕೆಯಿಂದ ಸನ್ಮಾನ್ಯ ಕುಮಾರಣ್ಣ ಅವರು ಆರೋಗ್ಯವಾಗಿದ್ದಾರೆ. ಯಾವುದೇ ಆರೋಗ್ಯದ ಸಮಸ್ಯೆ ಇಲ್ಲ, ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಕುಮಾರಣ್ಣ ಅವರು 2ನೇ ಬಾರಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮೂರು ವಿದ್ಯುತ್ ಉತ್ಪಾದಕ ಘಟಕಗಳನ್ನು ಮತ್ತು ನೀರಾವರಿಗೆ 200 ಕೋಟಿಗೂ ಹೆಚ್ಚು ಅನುದಾನವನ್ನು ನೀಡಿ ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಕುಮಾರಣ್ಣ ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆಂದು ತಿಳಿಸಿದರು.
ಈ ಹಿಂದೆ ಮೂರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕುಮಾರಸ್ವಾಮಿಯವರು, ಇತ್ತೀಚೆಗಷ್ಟೇ ಆರೋಗ್ಯ ಪರೀಕ್ಷೆಗಾಗಿ ಅಪೋಲೋ ಆಸ್ಪತ್ರೆಯಲ್ಲಿ ದೀರ್ಘಾಕಾಲ ಸಮಯ ಕಳೆದಿದ್ದು, ಬಳಿಕ ಜಿಂದಾಲ್ ನೇಚರ್ಕ್ಯೂರ್ ಸಂಸ್ಥೆಗೂ ಭೇಟಿ ನೀಡಿದ್ದಾರೆನ್ನಲಾಗಿದ್ದು, ಈ ಬೆಳವಣಿಗೆ ಅವರ ಆರೋಗ್ಯ ಸಮಸ್ಯೆ ಕುರಿತು ಊಹಾಪೋಹಗಳಿಗೆ ಕಾರಣವಾಗಿದೆ.
Advertisement