

ಬೆಂಗಳೂರು: ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಶಿವಗಿರಿ ಶಾಖಾ ಮಠ ಸ್ಥಾಪನೆ ಮಾಡಲು 5 ಎಕರೆ ಭೂಮಿ ನೀಡುವುದಾಗಿ ರಾಜ್ಯ ಸರ್ಕಾರ ಬುಧವಾರ ಘೋಷಣೆ ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲೆ ಕೊಣಾಜೆ, ಮಂಗಳಗಂಗೋತ್ರಿಯಲ್ಲಿ ನಾರಾಯಣಗುರು ಅಧ್ಯಯನ ಪೀಠ, ಮಂಗಳೂರು ವಿವಿ ಆಯೋಜಿಸಿದ್ದ "ಶತಮಾನದ ಪ್ರಸ್ತಾನ ನಾರಾಯಣಗುರು - ಮಹಾತ್ಮಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಮತ್ತು ಶ್ರೀ ಗುರುವಿನ ಮಹಾಸಮಾಧಿ ಶತಾಬ್ದಿ, ಸರ್ವಮತ ಸಮ್ಮೇಳನ ಶತಮಾನೋತ್ಸವ, ಯತಿ ಪೂಜೆಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಸಿದ್ದರಾಮ್ಯ ಅವರು ಗುರುಗಳ ಜೀವನ ಸಂದೇಶವನ್ನು ಸ್ಮರಿಸಿದರು.
ನಾರಾಯಣ ಗುರುಗಳು “ಮನುಷ್ಯರೆಲ್ಲರೂ ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು” ಎಂದು ಜಗತ್ತಿಗೆ ಸಾರಿದರು. ಸಮಾಜದಲ್ಲಿರುವ ಜಾತಿ ವ್ಯವಸ್ಥೆ, ಮೂಢನಂಬಿಕೆ, ಅಂಧಶ್ರದ್ಧೆಯ ವಿರುದ್ಧ ಹೋರಾಟ ನಡೆಸಿದರು. ಗುರುಗಳು ಈಳವರಿಗಾಗಿ ಶಿವನ ದೇವಾಲಯ ಸ್ಥಾಪಿಸಿದರು. ಈ ಕುರಿತು ತಕರಾರುಗಳು ಬಂದಾಗ, ನಾನು ನಿಮ್ಮ ಶಿವನ ದೇವಾಲಯ ಕಟ್ಟಿಲ್ಲ. ನನ್ನ ಶಿವನ ದೇವಾಲಯ ಕಟ್ಟಿದ್ದೇನೆ ಎಂದಿದ್ದರು. ಧರ್ಮದಲ್ಲಿ ನಂಬಿಕೆಯಿದ್ದರೆ ಮಾನವ ಧರ್ಮವನ್ನು ಬೋಧಿಸಿದ ನಾರಾಯಣ ಗುರುಗಳ ಮಾರ್ಗವನ್ನು ನಾವೆಲ್ಲ ಅನುಸರಿಸಬೇಕು. ನಾರಾಯಣ ಗುರುಗಳು ಪ್ರತಿಪಾದಿಸಿದ ಆಶಯಗಳನ್ನೇ ನಮ್ಮ ಸಂವಿಧಾನವೂ ಧ್ವನಿಸುತ್ತದೆ ಎಂದು ಹೇಳಿದರು.
ನಾರಾಯಣ ಗುರುಗಳು ಸಮಾಜಕ್ಕೆ ಸಾರಿದ ಸಾಮಾಜಿಕ ಹಾಗೂ ಮಾನವೀಯ ಮೌಲ್ಯಗಳು ಚಿರಂತನವಾಗಿರಬೇಕೆಂಬ ಉದ್ದೇಶದಿಂದ 2016ರಲ್ಲಿ ʼಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿʼಯನ್ನು ಆಚರಣೆ ಮಾಡಲು ನಾನೇ ಆದೇಶಿಸಿದ್ದೆ.
ಸಚ್ಚಿದಾನಂದ ಸ್ವಾಮೀಜಿಯವರ ಮನವಿಯಂತೆ, ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಶಿವಗಿರಿ ಶಾಖಾ ಮಠ ಸ್ಥಾಪನೆ ಮಾಡಲು 5 ಎಕರೆ ಜಾಗವನ್ನು ನಮ್ಮ ಸರ್ಕಾರದ ವತಿಯಿಂದಲೇ ಕೊಡಲಾಗುವುದು ಎಂದು ತಿಳಿಸಿದರು.
Advertisement