

ಬೆಂಗಳೂರು: ಪ್ರಸ್ತಾವಿತ ಉಪನಗರ ರೈಲು ಯೋಜನೆ ಜಾರಿಗೆ ಬರಲಿರುವ ಕಂಟೋನ್ಮೆಂಟ್ನಲ್ಲಿ ಎಂಟು ಎಕರೆಗೂ ಹೆಚ್ಚು ಭೂಮಿಯಲ್ಲಿರುವ ಮರಗಳನ್ನು ಕಡಿಯುವುದು ಅಥವಾ ಹಾನಿ ಮಾಡುವುದನ್ನು ನಿಷೇಧಿಸಿ ಕರ್ನಾಟಕ ಹೈಕೋರ್ಟ್ ಬುಧವಾರ ಮಧ್ಯಂತರ ಆದೇಶ ಹೊರಡಿಸಿದೆ.
ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಮತ್ತು ಇತರ ಮೂವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ಈ ಸಂಬಂಧ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಕರ್ನಾಟಕ ಜೀವವೈವಿಧ್ಯ ಮಂಡಳಿ, ಅರಣ್ಯ ಅಧಿಕಾರಿ ಮತ್ತು ಇತರರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಆ ಪ್ರದೇಶವನ್ನು ಜೀವ ವೈವಿಧ್ಯ ಪಾರಂಪರಿಕ ತಾಣವೆಂದು ಘೋಷಣೆ ಮಾಡಿ ನಂತರ ಆ ಆದೇಶವನ್ನು ವಾಪಸ್ ಪಡೆದ ರಾಜ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್(ಕೇಂದ್ರದ ಪರವಾಗಿ), ಕೇಂದ್ರದೊಂದಿಗೆ ಸಮಾಲೋಚಿಸದೆ ಹೊರಡಿಸಲಾಗಿದ್ದ ಈ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿರುವುದು ಸರಿಯಾಗಿದೆ ಎಂದು ಹೇಳಿದರು.
ಇದು ಪ್ರಶ್ನಾರ್ಹ ಭೂಮಿಯಾಗಿದ್ದು, ದಶಕಗಳಷ್ಟು ಹಳೆಯದಾದ 'ಹಸಿರು ಸ್ಥಳ' ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದು ರೈಲ್ವೆಗೆ ಸೇರಿದೆ. ಇದು ಬೆಂಗಳೂರಿನ ಹೃದಯ ಭಾಗದಲ್ಲಿದ್ದು, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದ ಭಾಗವಾಗಿದೆ. ಆದರೆ ರಸ್ತೆಯಿಂದ ಇಬ್ಭಾಗವಾಗಿದೆ ಮತ್ತು ಇದು ಜೀವವೈವಿಧ್ಯದಿಂದ ಸಮೃದ್ಧವಾಗಿದೆ ಮತ್ತು 371 ದೊಡ್ಡ ಮರಗಳನ್ನು ಹೊಂದಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ವಿಚಾರಣೆ ವೇಳೆ, ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಬಿ.ಎಂ. ಅರುಣ್, ರೈಲ್ವೆ ಇಲಾಖೆಗೆ ಸೇರಿದ ನಗರದ ಹೃದಯ ಭಾಗದಲ್ಲಿನ ಕಂಟೋನ್ಮೆಂಟ್ ಪ್ರದೇಶದ 8.61 ಎಕರೆ ಜಾಗ ಹಚ್ಚಹಸಿರಿನಿಂದ ಕೂಡಿದೆ. ಅಲ್ಲಿ 371 ದೊಡ್ಡ ಮರಗಳಿವೆ ಮತ್ತು 50 ಬಗೆಯ ಪಕ್ಷಿ ಪ್ರಭೇದಗಳಿವೆ. ಆದರೆ ಆ ಜಾಗದಲ್ಲಿನ ಮರಗಳನ್ನು ಕಡಿದು ರೈಲ್ವೆ ಬೃಹತ್ ವಸತಿ ಸಂಕೀರ್ಣಗಳನ್ನು ನಿರ್ಮಿಸಲು ಮುಂದಾಗಲಾಗಿದೆ ಎಂದರು.
ವಿಷಯ ಹೀಗಿರುವಾಗ, ಅರಣ್ಯ ಅಧಿಕಾರಿ ಏಪ್ರಿಲ್ 25 ರಂದು ಪತ್ರಿಕೆಗಳಲ್ಲಿ ಸಾರ್ವಜನಿಕ ಪ್ರಕಟಣೆ ನೀಡಿ, 368 ಮರಗಳನ್ನು ತೆಗೆಯಲು ರೈಲ್ವೆ ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಜನರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದ್ದಾರೆ ಎಂಬುದು ಆಘಾತಕಾರಿ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿರುವ 34,856 ಚದರ ಮೀಟರ್ ವಿಸ್ತೀರ್ಣದ ಭೂಮಿಯಲ್ಲಿ ವಾಣಿಜ್ಯ ಅಭಿವೃದ್ಧಿ ಯೋಜನೆ ಆರಂಭವಾಗಲಿದೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಮರಗಳನ್ನು ಕಡಿಯುವ ಕ್ರಮದ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದಲ್ಲದೆ, ನೋಟಿಸಿಗೂ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಆದಾಗ್ಯೂ, ಮೂರು ತಿಂಗಳ ನಂತರ, ಡಿಸೆಂಬರ್ 6, 2025 ರಂದು ಅಧಿಸೂಚನೆಯ ಮೂಲಕ ಹಠಾತ್ತನೆ ಮರಗಳನ್ನು ಕಡಿಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ವಾದ, ಪ್ರತಿವಾದ ಆಲಿಸಿದ ಕೋರ್ಟ್ ಮರಗಳನ್ನು ಕಡಿಯುವುದನ್ನು ನಿಷೇಧಿಸಿ ಮಧ್ಯಂತರ ಆದೇಶ ಹೊರಡಿಸಿದೆ. ವಿಚಾರಣೆಯನ್ನು ಫೆಬ್ರವರಿ 13ಕ್ಕೆ ಮುಂದೂಡಿದೆ.
Advertisement