

ಬೆಂಗಳೂರು: ರೈಲ್ವೆ ಕಂಟೋನ್ಮೆಂಟ್ ಕಾಲೋನಿಯಲ್ಲಿ 371 ಮರಗಳಿರುವ 8.61 ಎಕರೆ ಪ್ರದೇಶವನ್ನು ಜೀವ ವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಿಸಿ ಮೂರು ತಿಂಗಳ ಹಿಂದೆ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ವಾಪಸ್ ಪಡೆದ ಕೆಲ ದಿನಗಳ ನಂತರ ಇದೀಗ ಮತ್ತೆ ಬುಲ್ಡೋಜರ್ ಮತ್ತೆ ಸದ್ದು ಮಾಡುತ್ತಿರುವುದು ಪರಿಸರವಾದಿಗಳ ಆತಂಕಕ್ಕೆ ಕಾರಣವಾಗಿದೆ.
ಸರ್ಕಾರ ಅಧಿಸೂಚನೆ ವಾಪಸ್ ಪಡೆದ ಕೆಲ ದಿನಗಳ ನಂತರ ಮತ್ತೆ ಬುಲ್ಡೋಜರ್ಗಳನ್ನು ಇಲ್ಲಿಗೆ ತರಲಾಗಿದೆ. ಮರ ಕಡಿಯಲು ಯಾವುದೇ ಅನುಮತಿ ನೀಡಿಲ್ಲ ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿದ್ದರೂ, ಬುಲ್ಡೋಜರ್ ಇರುವುದು ಆತಂಕ ಉಂಟುಮಾಡಿದೆ ಎಂದು ಪರಿಸರಕ್ಕಾಗಿ ನಾವು' ಪರಿಸರ ರಕ್ಷಣಾ ವೇದಿಕೆಯ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ರೈಲ್ವೆ ಕಂಟೋನ್ಮೆಂಟ್ ಕಾಲೋನಿಯಲ್ಲಿ 371 ಮರಗಳಿವೆ. ಇದರಲ್ಲಿ ಕೆಲವು 70 ವರ್ಷಕ್ಕಿಂತ ಹಳೆಯದಾಗಿದ್ದು, ಚಿಕ್ಕ ಚಿಕ್ಕ ಪಕ್ಷಿಗಳು, ವನ್ಯಜೀವಿಗಳನ್ನೊಳಗೊಂಡ ಪರಿಸರ ನೆಲೆಯಾಗಿದೆ. 15,000 ಕ್ಕೂ ಹೆಚ್ಚು ಲಿಖಿತ ಆಕ್ಷೇಪಣೆಗಳು ಸೇರಿದಂತೆ ಸಾರ್ವಜನಿಕ ವಿರೋಧದ ನಂತರ, ರಾಜ್ಯ ಸರ್ಕಾರವು ಸೆಪ್ಟೆಂಬರ್ 10 ರಂದು ಈ ಪ್ರದೇಶವನ್ನು ಜೀವವೈವಿಧ್ಯ ಪರಂಪರೆಯ ತಾಣವಾಗಿ ಅನುಮೋದಿಸಿತ್ತು. ಆದರೆ, ಡಿಸೆಂಬರ್ 6 ರಂದು ಅಧಿಸೂಚನೆಯನ್ನು ಹಿಂಪಡೆಯಲಾಗಿದೆ.
ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಈ ಜಮೀನು ಭಾರತೀಯ ರೈಲ್ವೆಗೆ ಸೇರಿದ್ದು, ಕೇಂದ್ರದ ಸಮಾಲೋಚನೆ ನಡೆಸಿಲ್ಲ, ಆದ್ದರಿಂದ ಅಧಿಸೂಚನೆಯನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು 'ಪರಿಸರಕ್ಕಾಗಿ ನಾವು' ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರ್ವತಿ ಶ್ರೀರಾಮ ಹೇಳಿದರು. ಈ ಹಿನ್ನಡೆಯು ತೀವ್ರ ಕಳವಳಕಾರಿಯಾಗಿದೆ ಎಂದು ಪರಿಸರಕ್ಕಾಗಿ ನಾವೂ ಕಾರ್ಯದರ್ಶಿ ಮಹೇಶ್ ಬಸಾಪುರ ತಿಳಿಸಿದರು.
"ಒಂದು ಪ್ರದೇಶವನ್ನು ಜೀವ ವೈವಿಧ್ಯ ಪಾರಂಪರಿಕ ತಾಣವೆಂದು ಘೋಷಿಸಿ ನಂತರ ಸ್ಪಷ್ಟ ವಿವರಣೆ ನೀಡದೆ ಹಿಂಪಡೆಯುವುದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇವು ಅಲಂಕಾರಿಕ ಮರಗಳಲ್ಲ, ದಶಕಗಳಷ್ಟು ಹಳೆಯದಾದ, ಜೀವವೈವಿಧ್ಯದ ಮರಗಳು. ಈ ಭೂಮಿ ಕಳೆದುಹೋದರೆ, ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಅಂತಹ ಹಸಿರು ಜಾಗವನ್ನು ಎಂದಿಗೂ ಮರಳಿ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ ಎಂದರು.
ಪರಿಹಾರವಾಗಿ ಸಸಿಗಳನ್ನು ನೆಡುವುದರಿಂದ 70 ಅಥವಾ 80 ವರ್ಷ ವಯಸ್ಸಿನ ಮರವನ್ನು ಬದಲಾಯಿಸಿದಂತೆ ಆಗಲ್ಲ. ಬೆಂಗಳೂರಿನ ವಾತಾವರಣ ಈಗಾಗಲೇ ಹದಗೆಟ್ಟಿದೆ. ಈ ಮರಗಳನ್ನು ಕತ್ತರಿಸುವುದರಿಂದ ಶಾಖ, ನೀರಿನ ಒತ್ತಡ ಮತ್ತು ಗಾಳಿಯ ಗುಣಮಟ್ಟವನ್ನು ಇನ್ನಷ್ಟು ಹದಗೆಡಿಸುತ್ತದೆ. ಇದರ ವಿರುದ್ಧ ಪ್ರತಿಭಟನೆಗೆ, ಅಗತ್ಯವಿದ್ದರೆ ನ್ಯಾಯಾಲಯವನ್ನು ಸಂಪರ್ಕಿಸಲು ನಾಗರಿಕರು ಸಿದ್ಧರಾಗಿರುವುದಾಗಿ ಪಾರ್ವತಿ ಶ್ರೀರಾಮ ಹೇಳಿದರು.
ಪರಿಸರ ಮೌಲ್ಯವನ್ನು ಗುರುತಿಸಿದ ನಂತರ ಭೂಮಿ ರಾಜ್ಯಕ್ಕೆ ಸೇರಿದೆ ಅಥವಾ ಕೇಂದ್ರಕ್ಕೆ ಸೇರಿದೆ ಎಂಬುದು ಮುಖ್ಯವಲ್ಲ ”ಎಂದು ಪರಿಸರವಾದಿ ಮತ್ತು ನಗರ ತಂತ್ರಜ್ಞ ವಿನೋದ್ ಜೇಕಬ್ ತಿಳಿಸಿದರು.
ಕಂಟೋನ್ಮೆಂಟ್-ಶಿವಾಜಿನಗರ-ಬಂಬೂ ಬಜಾರ್ ಮಾರ್ಗದಲ್ಲಿರುವ ಏಕೈಕ ಅರಣ್ಯ ಪ್ರದೇಶವಾಗಿದೆ. ಈಗಾಗಲೇ ಹೆಚ್ಚಿನ ಜನಸಂದಣಿಯಿಂದ ಕೂಡಿದ್ದು, ಇಲ್ಲಿ ಬಹುಮಹಡಿ ನಿರ್ಮಾಣದ ವರದಿ ಕೇಳಿಬರುತ್ತಿದ್ದು, ಇದರ ಬಗ್ಗೆ ಜೇಕಬ್ ಕಳವಳ ವ್ಯಕ್ತಪಡಿಸಿದರು.
Advertisement