Video: 2 ವರ್ಷದ ಬಳಿಕ 'ಕಾಜೂರು ಕರ್ಣ' ಕೊನೆಗೂ ಸೆರೆ: ಸುಗ್ರೀವನ ಏಟಿಗೆ ಬೇಸ್ತು ಬಿದ್ದ ಕಾಡಾನೆ

ಸುಮಾರು 40 ವರ್ಷ ವಯಸ್ಸಿನ ಈ ಗಂಡಾನೆ ಒಂದೂವರೆ ವರ್ಷಗಳಿಂದ ಈ ಭಾಗದಲ್ಲಿ ಉಪಟಳ ನೀಡುತ್ತಿತ್ತು. ಯಾವುದೇ ವಾಹನ ಕಂಡರೂ ಬೆನ್ನಟ್ಟಿ ಬರುತ್ತಿತ್ತು.
Kajuru karna
ಕಾಜೂರು ಕರ್ಣ ಕೊನೆಗೂ ಸೆರೆ
Updated on

ಕೊಡಗು: ಮಡಿಕೇರಿ, ಕೊಡಗು ಭಾಗದಲ್ಲಿ ಕಳೆದ ಒಂದೂವರೆ ವರ್ಷದಿಂದ ನಿರಂತರ ಉಪಟಳ ನೀಡುತ್ತಿದ್ದ ಕಾಡಾನೆ ‘ಕಾಜೂರು ಕರ್ಣ’ನನ್ನು ಅರಣ್ಯ ಇಲಾಖೆ ಕೊನೆಗೂ ಸೆರೆ ಹಿಡಿದಿದೆ.

ಈ ಭಾಗದಲ್ಲಿ ವಾಹನಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ, ದಾರಿಹೋಕರಿಗೆ ಪ್ರಾಣ ಭೀತಿ ಹುಟಿಸಿ, ಬೆಳೆಗಳನ್ನು ನಾಶ ಮಾಡುತ್ತಿದ್ದ ‘ಕಾಜೂರು ಕರ್ಣ’ ಎಂದೇ ಹೆಸರಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ತಾಲ್ಲೂಕಿನ ಕಾಜೂರು ಸಮೀಪ ಶನಿವಾರ ಸೆರೆ ಹಿಡಿದಿದ್ದಾರೆ.

ಸುಮಾರು 40 ವರ್ಷ ವಯಸ್ಸಿನ ಈ ಗಂಡಾನೆ ಒಂದೂವರೆ ವರ್ಷಗಳಿಂದ ಈ ಭಾಗದಲ್ಲಿ ಉಪಟಳ ನೀಡುತ್ತಿತ್ತು. ಯಾವುದೇ ವಾಹನ ಕಂಡರೂ ಬೆನ್ನಟ್ಟಿ ಬರುತ್ತಿತ್ತು. ಈ ಕಾಡಾನೆ ಹತ್ತಾರು ಕಾರುಗಳೂ, ಹಲವು ಬೈಕ್‌ಗಳಿಗೆ ಹಾನಿ ಮಾಡಿತ್ತು. ಕಳೆದ ಒಂದು ವರ್ಷದ ಹಿಂದೆಯೇ ಈ ಕಾಡಾನೆಯನ್ನು ಸೆರೆ ಹಿಡಿಯಲು ಅನುಮತಿ ದೊರತ್ತಿತ್ತು.

ಆದರೆ, ಅರಣ್ಯ ಇಲಾಖೆಯ ಸಿಬ್ಬಂದಿಯ ಕೈಗೆ ಸಿಗದೇ ಇದು ಪರಾರಿಯಾಗುತ್ತಿತ್ತು. ಅಲ್ಲದೆ ನಿರಂತರವಾಗಿ ಓಡಾಡುತ್ತಿದ್ದ ಈ ಆನೆಯನ್ನು ಸೆರೆ ಹಿಡಿಯುವುದು ಸಿಬ್ಬಂದಿ ಪಾಲಿಗೆ ಸವಾಲಿನ ಕೆಲಸವಾಗಿತ್ತು. ಇದೀಗ ಇಟಿಎಫ್ (ಎಲಿಫೆಂಟ್ ಟಾಸ್ಕ್ ಫೋರ್ಸ್) ಸಿಬ್ಬಂದಿಯ ಹರಸಾಹಸ ಮತ್ತು ಸಾಕಾನೆಗಳ ಸಾಂಘಿಕ ಶ್ರಮದಿಂದಾಗಿ ಇಂದು ಸೆರೆಯಾಗಿದೆ. ಸದ್ಯ, ಕಾಜೂರು ಸಮೀಪದ ಅರಣ್ಯದ ಬಳಿ ಅರಣ್ಯ ಇಲಾಖೆ ಸಿಬ್ಬಂದಿ 6 ಸಾಕಾನೆಗಳ ಸಹಾಯದಿಂದ ಸೆರೆ ಹಿಡಿದು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಡಿಸಿಎಫ್ ಭಾಸ್ಕರ್ ಅವರು, ‘15 ದಿನಗಳಿಂದ ಈ ಆನೆಯ ಚಲನವಲನದ ಮೇಲೆ ತೀವ್ರ ನಿಗಾ ಇರಿಸಿದ್ದೆವು. ಇದು ನಿತ್ಯ ರಾತ್ರಿ ಕಾಡಿಗೆ ಹೋಗಿ, ಬೆಳಿಗ್ಗೆ ಕಾಡಿನಿಂದ ಹೊರಬರುವ ಜಾಗವನ್ನು ಪತ್ತೆ ಮಾಡಿ, ಅದೇ ಜಾಗದಲ್ಲಿ ಕಾದು ಕುಳಿತು ಸೆರೆ ಹಿಡಿದೆವು. ಇದಕ್ಕಾಗಿ ಸಾಕನೆಗಳಾದ ಪ್ರಶಾಂತ, ಧನಂಜಯ, ಸುಗ್ರೀವ, ಹರ್ಷ, ಶ್ರೀರಾಮ, ಮಾರ್ತಾಂಡ ಆನೆಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.

Kajuru karna
Video: ಕಾಲೇಜಿನಲ್ಲಿ ಕಾಡಾನೆ ಕಾಟ; ವಿದ್ಯಾರ್ಥಿಗಳು ಭಯಭೀತ!

ಸುಗ್ರೀವನ ಏಟಿಗೆ ಬೇಸ್ತು ಬಿದ್ದ ಕಾಡಾನೆ

ಇನ್ನು ಕಾರ್ಯಾಚರಣೆ ಬಳಿಕ ಕಾಡಾನೆ ಕಾಜೂರು ಕರ್ಣನನ್ನು ಸಿಬ್ಬಂದಿ ಹರಸಾಹಸ ಪಟ್ಟು ಲಾರಿ ಹತ್ತಿಸಿದ್ದರು. ಆದರೆ ಲಾರಿಯಲ್ಲೇ ಮತ್ತೆ ಉಪಟಳ ಆರಂಭಿಸಿದ್ದರಿಂದ ಆನೆಯನ್ನು ನಿಯಂತ್ರಿಸಲು ಸಿಬ್ಬಂದಿ ಸುಗ್ರೀವ ಆನೆಯನ್ನು ಕರೆಸಿದರು. ಸುಗ್ರೀವ ಬರುತ್ತಲೇ ಲಾರಿಯಲ್ಲಿ ಕರ್ಣನಿಗೆ ಭಾರಿ ವೇಗವಾಗಿ ಬಂದು ತಿವಿಯುತ್ತಲೇ ಕಾಜೂರು ಕರ್ಣ ಕಾಡಾನೆ ಮೆತ್ತಗಾಯಿತು.

ಅರಣ್ಯ ಸಿಬ್ಬಂದಿಗೆ ಶಾಸಕರ ಅಭಿನಂದನೆ

ಇನ್ನು ಮಾದಾಪುರ ಅರಣ್ಯ ವಲಯದ ಕಾಜೂರಿನಲ್ಲಿ ಸಾರ್ವಜನಿಕರಿಗೆ, ಸ್ಥಳೀಯ ನಿವಾಸಿಗಳಿಗೆ, ವಾಹನ ಸವಾರರಿಗೆ ಭಯಭೀತಿ ಹುಟ್ಟಿಸಿದ್ದ ಕಾಜೂರು ಕರ್ಣ ಎ೦ದೇ ಖ್ಯಾತಿ ಪಡೆದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆಯವರು ಯಶಸ್ವಿಯಾಗಿ ಸೆರೆಹಿಡಿದ ಬೆನ್ನಲ್ಲೇ ಸ್ಥಳೀಯ ಶಾಸಕ ಡಾ.ಮ೦ತರ್‌ ಗೌಡ ಅರಣ್ಯ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ. ಸ್ವಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶಾಸಕ ಡಾ.ಮ೦ತರ್‌ ಗೌಡ ಅವರು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬ೦ದಿಗಳನ್ನು ಅಭಿನ೦ದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com