ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ವಿಜಯಪುರ: ಒಂಬತ್ತು ಮಂದಿ ಬಂಧನ; ದೇಶಿ ನಿರ್ಮಿತ ಪಿಸ್ತೂಲ್‌​, 24 ಸಜೀವ ಗುಂಡು ವಶಕ್ಕೆ

ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಿಕೇರಿ ತಾಂಡಾದಲ್ಲಿ ರಮೇಶ್ ಲಮಾಣಿ ಎಂಬಾತ ಸತೀಶ್ ರಾಠೋಡ್ ಎಂಬಾತನನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ.
Published on

ವಿಜಯಪುರ: ಜಿಲ್ಲೆಯಲ್ಲಿ ಅಕ್ರಮ ಬಂದೂಕುಗಳ ವಿರುದ್ಧ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಪೊಲೀಸರು ಒಂಬತ್ತು ಜನರನ್ನು ಬಂಧಿಸಿದ್ದು, 24 ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, ಜನವರಿ 28 ರಂದು ಸತೀಶ್ ಪ್ರೇಮ್ ಸಿಂಗ್ ರಾಥೋಡ್ ಕೊಲೆಯಾದ ನಂತರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಿಕೇರಿ ತಾಂಡಾದಲ್ಲಿ ರಮೇಶ್ ಲಮಾಣಿ ಎಂಬಾತ ಸತೀಶ್ ರಾಥೋಡ್ ಎಂಬಾತನನ್ನು ಗುಂಡಿಟ್ಟು ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದರು.

ಈ ಸಂಬಂಧ ಸಾಗರ್ ಅಲಿಯಾಸ್ ಸುರೇಶ್ ರಾಥೋಡ್ ಎಂಬಾತನನ್ನು ಫೆಬ್ರುವರಿ 13 ರಂದು ಬಂಧಿಸಲಾಗಿತ್ತು. ಮಧ್ಯಪ್ರದೇಶದಿಂದ ಪಿಸ್ತೂಲ್ ಖರೀದಿಸಿ ರಮೇಶ ಲಮಾಣಿಗೆ ಸರಬರಾಜು ಮಾಡಿರುವುದಾಗಿ ವಿಚಾರಣೆ ವೇಳೆ ಸಾಗರ್ ತಿಳಿಸಿದ್ದಾನೆ. ಈತ ಮಧ್ಯಪ್ರದೇಶದಿಂದ ಕಂಟ್ರಿ ಪಿಸ್ತೂಲ್‌ಗಳನ್ನು ತಂದು ವಿವಿಧ ವ್ಯಕ್ತಿಗಳಿಗೆ ಸರಬರಾಜು ಮಾಡುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದ್ದಾರೆ.

ವಿವಿಧೆಡೆ ದಾಳಿ ನಡೆಸಿದಾಗ ಒಂಬತ್ತು ದೇಶಿ ನಿರ್ಮಿತ ಪಿಸ್ತೂಲ್‌ಗಳು ಮತ್ತು 24 ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದೇವೆ. ಈ ಸಂಬಂಧ ವಿಜಯಪುರದ ಪ್ರಕಾಶ್ ರಾಥೋಡ್, ಅಶೋಕ್ ಪಾಂಡ್ರೆ, ಸುಜಿತ್ ರಾಥೋಡ್, ಸುಖದೇವ್ ರಾಥೋಡ್, ಸಿಂದಗಿ ತಾಲೂಕಿನ ಪ್ರಕಾಶ್ ರಾಥೋಡ್, ಗಣೇಶ್ ಶಿವರಾಮ ಶೆಟ್ಟಿ, ಚನ್ನಪ್ಪ ಪಾದವಾರ, ಚನ್ನಪ್ಪ ಪಡಂದಾರ, ಮಲ್ಲಪ್ಪ ಪಟ್ಟನವರ ಎಂಬುವರನ್ನು ಬಂಧಿಸಲಾಗಿದೆ. ಪೊಲೀಸರು ಒಂಬತ್ತು ಶಂಕಿತರನ್ನು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಸಾಗರ್ ಈ ಪಿಸ್ತೂಲ್‌ಗಳನ್ನು ತಲಾ 50,000 ರಿಂದ 1 ಲಕ್ಷ ರೂ.ವರೆಗೆ ಮಾರಾಟ ಮಾಡುತ್ತಿದ್ದ. ಕಳೆದ ಐದು ವರ್ಷಗಳಿಂದ ಈ ಪಿಸ್ತೂಲ್‌ಗಳನ್ನು ಮಾರಾಟ ಮಾಡುತ್ತಿದ್ದಾನೆ. ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದಾಗ ಮಧ್ಯಪ್ರದೇಶದ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದನು. ಈತನಿಂದ ಪಿಸ್ತೂಲ್‌ಗಳನ್ನು ಖರೀದಿಸುತ್ತಿದ್ದನು ಎಂದು ನಿಂಬರಗಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com