
ಬೆಂಗಳೂರು: ತೆಲಂಗಾಣದಂತೆಯೇ ಮುಸ್ಲಿಂ ಸರ್ಕಾರಿ ನೌಕರರಿಗೆ ಪವಿತ್ರ ರಂಜಾನ್ ಸಂದರ್ಭದಲ್ಲಿ ಸಂಜೆ 4 ಗಂಟೆಯ ನಂತರ ಎರಡು ಗಂಟೆ ಬೇಗ ಕರ್ತವ್ಯದಿಂದ ತೆರಳಲು ಅವಕಾಶ ನೀಡುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಕೆಪಿಸಿಸಿ ಉಪಾಧ್ಯಕ್ಷ ಹುಸೇನ್ ಅವರು ಈ ಕುರಿತು ಔಪಚಾರಿಕ ಮನವಿ ಸಲ್ಲಿಸಿದ್ದು, ಈ ಬೇಡಿಕೆ ಈಡೇರಿಕೆಗಾಗಿ ಮುಖಂಡರು ಶೀಘ್ರವೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿಸಿದರು.
ಆಂಧ್ರಪ್ರದೇಶ ಮತ್ತು ತೆಲಂಗಾಣ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮುಸ್ಲಿಂ ಸರ್ಕಾರಿ ನೌಕರರಿಗೆ ರಂಜಾನ್ ಸಂದರ್ಭದಲ್ಲಿ ಎರಡು ಗಂಟೆ ಮುಂಚಿತವಾಗಿ ಕರ್ತವ್ಯದಿಂದ ತೆರಳಲು ಅವಕಾಶ ನೀಡುವಂತೆ ಕೆಪಿಸಿಸಿ ಉಪಾಧ್ಯಕ್ಷರಾದ ಸೈಯದ್ ಅಹ್ಮದ್ ಮತ್ತು ಎಆರ್ಎಂ ಹುಸೇನ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಬೇಡಿಕೆಗೆ ಸಂಬಂಧಿಸಿದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರಿಗೂ ಪತ್ರ ಬರೆದಿದ್ದಾರೆ.
ಪವಿತ್ರ ರಂಜಾನ್ ಮಾಸ ಸಮೀಪಿಸುತ್ತಿರುವುದರಿಂದ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಈಗಾಗಲೇ ಮುಸ್ಲಿಂ ನೌಕರರು ಒಂದು ಗಂಟೆ ಮುಂಚಿತವಾಗಿ ಕರ್ತವ್ಯದಿಂದ ತೆರಳಲು ಅವಕಾಶ ಮಾಡಿಕೊಟ್ಟಿವೆ.
ಈ ವರ್ಷ ಮಾರ್ಚ್ 3 ರಿಂದ 31ರವರೆಗೆ ಆಚರಿಸಲಾಗುವ ರಂಜಾನ್ ಮಾಸದಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ಮುಸ್ಲಿಂ ನೌಕರರು, ಶಿಕ್ಷಕರು, ಗುತ್ತಿಗೆ, ಹೊರಗುತ್ತಿಗೆ, ನಿಗಮ ಮಂಡಳಿಗಳು ಮತ್ತು ಸಾರ್ವಜನಿಕ ವಲಯದ ನೌಕರರು ಸಂಜೆ 4 ಗಂಟೆಗೆ ಮನೆಗೆ ತೆರಳಲು ತೆಲಂಗಾಣ ಸರ್ಕಾರ ಅವಕಾಶ ನೀಡಿದೆ. ತುರ್ತು ಸೇವೆಯಲ್ಲಿರುವವರಿಗೆ ಹಾಗೂ ಸರ್ಕಾರದ ತೀರಾ ಅಗತ್ಯ ಇರುವವರಿಗೆ ಇದು ಅನ್ವಯಿಸುವುದಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ.
ಈಮಧ್ಯೆ, ತೆಲಂಗಾಣ ಸರ್ಕಾರದ ಈ ಕ್ರಮವನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ. ಸರ್ಕಾರ ಇಂತಹ ಸೌಲಭ್ಯಗಳನ್ನು ಹಿಂದೂಗಳಿಗೆ ನೀಡದಿರುವುದು ಆಘಾತಕಾರಿ. ಇದು ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಟೀಕಿಸಿದೆ.
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಪಕ್ಷ (ಟಿಡಿಪಿ) ನೇತೃತ್ವದ ಆಂಧ್ರ ಪ್ರದೇಶ ಸರ್ಕಾರವು ಕೂಡ ಮುಸ್ಲಿಂ ಉದ್ಯೋಗಿಗಳಿಗೆ ಪವಿತ್ರ ರಂಜಾನ್ ಮಾಸದಲ್ಲಿ ಒಂದು ಗಂಟೆ ಮುಂಚಿತವಾಗಿ ಮನೆಗೆ ತೆರಳಲು ಅವಕಾಶ ನೀಡುವುದಾಗಿ ಘೋಷಿಸಿದೆ.
Advertisement