
ಮೈಸೂರು: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕತ್ವಾಡಿಪುರ ಗ್ರಾಮದಲ್ಲಿ ಕೆಮಿಕಲ್ ಪದಾರ್ಥಗಳ ಗೋದಾಮಿನಲ್ಲಿ ಬುಧವಾರ ಅಗ್ನಿ ಅವಘಡ ಸಂಭವಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ.
ನಂಜನಗೂಡು ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಕತ್ವಾಡಿಪುರ ಗ್ರಾಮದ ಅನಿಲ ಸಂಗ್ರಹಣಾ ಘಟಕದ ಬಳಿ ಇರುವ ಕೆಮಿಕಲ್ ಮಿಶ್ರಿತ ಹಳೆ ಪದಾರ್ಥಗಳ ಗೋದಾಮಿನಲ್ಲಿ ಏಕಾಏಕಿ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.
ಮೈಸೂರು ಮೂಲದ ವ್ಯಕ್ತಿ ಜುಬಲಿಯಂಟ್ ಕಾರ್ಖಾನೆಯಿಂದ ಕೆಮಿಕಲ್ ಮಿಶ್ರಿತ ಹಳೆ ಟ್ಯಾಂಕರ್ ಮತ್ತು ಇತರೆ ಪದಾರ್ಥಗಳನ್ನು ತಂದು ಸಂಗ್ರಹಿಸಿಟ್ಟಿದ್ದು, ಇದಕ್ಕಿದ್ದಂತೆ ಈ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕಾವು ಹೆಚ್ಚಾಗುತ್ತಿದ್ದಂತೆ ಕೆಮಿಕಲ್ ಮಿಶ್ರಿತ ಹಳೆ ಟ್ಯಾಂಕ್ ವೊಂದು ಸ್ಫೋಟಗೊಂಡಿದೆ. ಇದರ ಶಬ್ದಕ್ಕೆ ಗ್ರಾಮಸ್ಥರು ಆತಂಕಗೊಂಡು, ಮನೆಗಳಿಂದ ರಸ್ತೆಗಳಿಗೆ ಓಡಿ ಬಂದಿದ್ದಾರೆ.
ಬಳಿಕ ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿಗಳು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ನಡುವೆ ಗ್ರಾಮದ ಒಳಭಾಗದಲ್ಲಿರುವ ಗ್ಯಾಸ್ ಕೆಮಿಕಲ್ ಮಿಶ್ರಿತ ಗೋದಾಮುಗಳನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
Advertisement