
ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಪ್ರಯಾಣ ದರ ಹೆಚ್ಚಳದ ನಂತರ ಇದೀಗ ಮೆಟ್ರೋ ಪ್ರಯಾಣ ದರವನ್ನು ಹೆಚ್ಚಿಸಲಾಗುತ್ತಿದ್ದು, ಪ್ರಯಾಣಿಕರಿಗೆ ಮತ್ತೊಂದು ಹೊರೆಯಾಗಿದೆ. ಮೂಲಗಳ ಪ್ರಕಾರ ನಮ್ಮ ಮೆಟ್ರೋ ಸುಮಾರು ಶೇ. 43 ರಷ್ಟು ಪ್ರಯಾಣ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಜನದಟ್ಟಣೆ ಇಲ್ಲದ ಸಮಯದಲ್ಲಿ (non-peak hours) ಮೆಟ್ರೋ ಪ್ರಯಾಣದ ಟೋಕನ್ ಬಳಸುವ ಪ್ರಯಾಣಿಕರಿಗೆ ಈ ದರದಲ್ಲಿ ಶೇ. 5 ರಷ್ಟು ರಿಯಾಯಿತಿ ಇರಲಿದೆ. ಪ್ರಸ್ತುತ ಕನಿಷ್ಠ ದರ ರೂ. 10 ಮತ್ತು ಗರಿಷ್ಠ ದರ ರೂ. 60 ಆಗಿದೆ. ಟ್ರಾವೆಲ್ ಕಾರ್ಡ್ ಬಳಕೆದಾರರಿಗೆ ಅದರ ಮೇಲೆ ಶೇ. 5 ರಷ್ಟು ರಿಯಾಯಿತಿ ಇದೆ.
ಶುಕ್ರವಾರ ದರ ನಿಗದಿ ಸಮಿತಿಯ ಶಿಫಾರಸುಗಳ ಕುರಿತು ಮಾತನಾಡಿದ BMRCL ವ್ಯವಸ್ಥಾಪಕ ನಿರ್ದೇಶಕ ಎಂ.ಮಹೇಶ್ವರ್ ರಾವ್ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿದ ವಿವರಗಳನ್ನು ಶನಿವಾರ ಬಹಿರಂಗಗೊಳಿಲು ಮೆಟ್ರೋ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು. ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್, ಮೆಟ್ರೋ ಪ್ರಯಾಣ ದರವನ್ನು ಶೇ, 45 ರಷ್ಟು ಏರಿಕೆ ಮಾಡಲಾಗುವುದು ಅನಿಸುತ್ತಿದೆ ಎಂದಿದ್ದಾರೆ.
ಪ್ರಯಾಣ ದರ ಹೆಚ್ಚಳವನ್ನು ಮೆಟ್ರೋ ಸಮರ್ಥಿಸಿಕೊಂಡಿದೆ. ಎಂಟು ವರ್ಷಗಳ ನಂತರ ಮೆಟ್ರೋ ಪ್ರಯಾಣ ದರವನ್ನು ಪರಿಷ್ಕರಿಸಲಾಗುತ್ತಿದೆ. ರೈಲ್ವೆ ಜಾಲ ವಿಸ್ತರಣೆಯಾಗಿದ್ದು, ಕಾರ್ಯಾಚರಣೆ ವೆಚ್ಚ ಹೆಚ್ಚಾಗಿದೆ. ಸಮಿತಿಯ ಶಿಫಾರಸುಗಳು ಬದ್ಧವಾಗಿವೆ. ಈ ಹಿಂದೆ ಜೂನ್ 18, 2017 ರಂದು ಪ್ರಯಾಣ ದರವನ್ನು ಶೇ. 10 ರಿಂದ 15 ರಷ್ಟು ಹೆಚ್ಚಳ ಮಾಡಲಾಗಿತ್ತು ಎಂದು ಹೇಳಿದೆ.
ಮತ್ತೊಂದು ಮೂಲಗಳ ಪ್ರಕಾರ ಟೋಕನ್ ಬಳಸುವ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ದರ ಹೆಚ್ಚಳ ಅನ್ವಯವಾಗಲಿದೆ. ಏಕೆಂದರೆ ಪೀಕ್ ಅವರ್ಗಳಲ್ಲಿ ಪ್ರಯಾಣಿಸದವರಿಗೆ ಶೇ.5 ರಷ್ಟು ವಿನಾಯಿತಿ ಇರಲಿದೆ. ಮೂಲ ದರದಲ್ಲಿ ಏರಿಕೆ ಇರುವುದಿಲ್ಲ ಮತ್ತು ಕನಿಷ್ಠ ದರವು ರೂ. 10 ಇರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದೆಡೆ BMRCL ನಿರ್ಧಾರದ ಬಗ್ಗೆ ಸಂಸದ ಪಿ. ಸಿ. ಮೋಹನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಫೋಸ್ಟ್ ಮಾಡಿದ್ದು, ಶೇ. 45 ರಷ್ಟು ದರ ಹೆಚ್ಚಳ ಮಾಡುವ BMRCL ನ ನಿರ್ಧಾರದಿಂದ ನಿರಾಶೆಯಾಗಿದೆ. ಮರುಪರಿಶೀಲಿಸುವ ನನ್ನ ಮನವಿಯನ್ನು ನಿರ್ಲಕ್ಷಿಸಿದೆ. ಮೆಟ್ರೋದಲ್ಲಿ ಜನಸಂದಣಿಯು ಪ್ರಯಾಣಿಕರಲ್ಲಿ ವಿವಾದಗಳಿಗೆ ಕಾರಣವಾಗಿದೆ, ಇದು ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
BMRCL ಮೆಟ್ರೋ ಕೋಚ್ಗಳನ್ನು ಸೇರಿಸಲು ಆದ್ಯತೆ ನೀಡಬೇಕು, ತಡವಾದ ಮಾರ್ಗಗಳನ್ನು ತ್ವರಿತಗೊಳಿಸುವುದು ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಬೇಕು, ಭದ್ರತೆಯನ್ನು ಹೆಚ್ಚಿಸಬೇಕು, ಪ್ರವೇಶ ಮತ್ತು ನಿರ್ಗಮನವನ್ನು ಸುವ್ಯವಸ್ಥಿತಗೊಳಿಸಬೇಕು ಮತ್ತು ಉತ್ತಮ ಪ್ರಯಾಣಕ್ಕಾಗಿ ಪಾರ್ಕಿಂಗ್, ಸರತಿ ಸಾಲಿನ ವ್ಯವಸ್ಥೆಗಳು ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸಬೇಕು. ಈ ಸಮಸ್ಯೆಗಳನ್ನು ಸರಿಪಡಿಸದೆ ದರವನ್ನು ಹೆಚ್ಚಿಸುವುದರಿಂದ ಜನರು ಖಾಸಗಿ ವಾಹನ ಬಳಸಲು ಒತ್ತಾಯಿಸುವ ಮೂಲಕ ಟ್ರಾಫಿಕ್ ಮತ್ತಷ್ಟು ಹೆಚ್ಚಾಗಲಿದೆ. BMRCL ತನ್ನ ಆದ್ಯತೆಗಳನ್ನು ಪುನರ್ವಿಮರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಮದ್ರಾಸ್ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಆರ್ ಥರಾಣಿ ನೇತೃತ್ವದ ತ್ರಿಸದಸ್ಯ ಸಮಿತಿಯು ಪ್ರಯಾಣ ದರ ಏರಿಕೆಗೆ ಶಿಫಾರಸು ಮಾಡಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತ್ಯೇಂದ್ರ ಪಾಲ್ ಸಿಂಗ್ ಮತ್ತು ಕರ್ನಾಟಕದ ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇವಿ ರಮಣ ರೆಡ್ಡಿ ಇತರ ಸದಸ್ಯರಾಗಿದ್ದಾರೆ. ಸಮಿತಿಯು ಹಾಂಗ್ಕಾಂಗ್, ಸಿಂಗಾಪುರ ಮತ್ತು ನವದೆಹಲಿಯಲ್ಲಿ ಮೆಟ್ರೋ ದರ ಅಧ್ಯಯನ ಮಾಡಿತು ಮತ್ತು ಹೆಚ್ಚಳ ಶಿಫಾರಸು ಮಾಡುವ ಮೊದಲು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿತ್ತು.
Advertisement