ಕಪಿಲೇಶ್ವರ ದೇಗುಲದಲ್ಲಿ ಡಿಕೆಶಿ ವಿಶೇಷ ಪೂಜೆ: ಬೆಳಗಾವಿಯಲ್ಲೇ ಇದ್ದರೂ ನಾಯಕನ ಭೇಟಿಯಾಗದ ಜಾರಕಿಹೊಳಿ

ಕಾಮಗಾರಿಗಳ ಉದ್ಘಾಟನೆ ನೆಪ ಹೇಳಿಕೊಂಡು ಸತೀಶ್ ಅವರು ಡಿ.ಕೆ ಶಿವಕುಮಾರ್ ಅವರ ಭೇಟಿಯನ್ನು ನಿಯಂತ್ರಿಸುತ್ತಿದ್ದು, ಈ ಮೂಲಕ ಮುನಿಸು ಹೊರಹಾಕುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿರುವ ಡಿಕೆ.ಶಿವಕುಮಾರ್.
ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿರುವ ಡಿಕೆ.ಶಿವಕುಮಾರ್.
Updated on

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬೆಳಗಾಳಿಯಲ್ಲೇ ವಾಸ್ತವ್ಯ ಹೂಡಿದ್ದರೂ ಸಚಿವ ಸತೀಶ್ ಜಾರಕಿಹೊಳಿಯವರು ಭೇಟಿ ಮಾಡದಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.

ಕಾಮಗಾರಿಗಳ ಉದ್ಘಾಟನೆ ನೆಪ ಹೇಳಿಕೊಂಡು ಸತೀಶ್ ಅವರು ಡಿ.ಕೆ ಶಿವಕುಮಾರ್ ಅವರ ಭೇಟಿಯನ್ನು ನಿಯಂತ್ರಿಸುತ್ತಿದ್ದು, ಈ ಮೂಲಕ ಮುನಿಸು ಹೊರಹಾಕುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಈ ನಡುವೆ ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಕಾಣಿಸಿಕೊಂಡ ಶಾಸಕರು ದುಬೈ ಪ್ರವಾಸಕ್ಕೆ ಯೋಜನೆ ರೂಪಿಸಿದ್ದು, 4-5 ದಿನಗಳ ಕಾಲ ವಿದೇಶಕ್ಕೆ ಹಾರಲು ಸಜ್ಜಾಗಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದ ಡಿಕೆ ಶಿವಕುಮಾರ್ ಅವರು, ಭಾನುವಾರ ಸತೀಶ್ ಆಪ್ತ ಆಸೀಫ್ ಸೇಠ್ ನಿವಾಸಕ್ಕೆ ಭೇಟಿ ಕೊಟ್ಟಿದ್ದು, ಯಾರೆಲ್ಲಾ ಪ್ರವಾಸಕ್ಕೆ ಹೋಗುತ್ತಿದ್ದಾರೆಂಬುದರ ಕುರಿತು ಪ್ರಶ್ನೆ ಮಾಡಿದ್ದಾರೆಂದು ವರದಿಗಳು ತಿಳಿಸಿವೆ.

ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಿರುವ ಡಿಕೆ.ಶಿವಕುಮಾರ್.
KPCC ಅಧ್ಯಕ್ಷರ ಬದಲಾವಣೆ: ಖರ್ಗೆ ಖಡಕ್ ವಾರ್ನಿಂಗ್ ಬೆನ್ನಲ್ಲೇ 'ಕೈ'ಪಡೆ ಗಪ್ ಚುಪ್; ಜಾರಕಿಹೊಳಿ ನಡೆ ಇನ್ನೂ ನಿಗೂಢ!

ಇದಕ್ಕೆ ಪ್ರತಿಕ್ರಿಯಿಸಿರುವ ಸೇಠ್, ಯೋಜನೆ ರೂಪಿಸಲಾಗಿದೆ. ನಿಮಗೆ ಹೇಳದೇ ಹೋಗಲ್ಲ ಎಂದು ಉತ್ತರಿಸಿದ್ದಾರೆ. ಬಳಿಕ ಡಿಕೆ ಶಿವಕುಮಾರ್ ಅವರು, ಪಕ್ಷದಲ್ಲಿದ್ದಾಗ ಶಿಸ್ತಿನಿಂದ ಇರುವಂತೆ ಪಾಠ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

ಇನ್ನು ಬೆಳಗಾವಿಗೆ ಭೇಟಿ ನೀಡಿರುವ ಡಿಕೆ.ಶಿವಕುಮಾರ್, ಭಾನುವಾರ ತಾವು ವಾಸ್ತವ್ಯ ಹೂಡಿದ್ದ ಸರ್ಕಾರಿ ಪ್ರವಾಸಿ ಮಂದಿರದಿಂದ ನೇರವಾಗಿ ಶಹಾಪುರದ ಕಪಿಲೇಶ್ವರ ದೇವಸ್ಥಾನಕ್ಕೆ ತೆರಳಿ, ವಿವಿಧ ಧಾರ್ಮಿಕ ವಿಧಿವಿಧಾನ ಕೈಗೊಂಡರು. 101 ಲೀಟರ್ ಹಾಲು ಬಳಸಿ, ಶಿವಲಿಂಗಕ್ಕೆ ಅಭಿಷೇಕ ಮಾಡಿದರು.

ಬಳಿಕ ಮಾತನಾಡಿದ ಅವರು, ನಾನೊಬ್ಬ ದೈವ ಭಕ್ತ. ಪೂಜೆ ಮಾಡಿ, ದೈವಶಕ್ತಿ ನೆನಪಿಸಿಕೊಂಡೇ ಮನೆಯಿಂದ ಹೊರ ಬರುತ್ತೇ‌ನೆ. ಹಾಗಾಗಿ ದೇವಸ್ಥಾನಕ್ಕೆ ಬಂದಿದ್ದೇನೆ. ನಿಮ್ಮಿಂದ ರಕ್ಷಣೆ ಬೇಕಪ್ಪ' ಎಂದು ಹೇಳುವ ಮೂಲಕ, ಪರೋಕ್ಷವಾಗಿ ಬೆಳಗಾವಿ ನಾಯಕರಿಂದ ರಕ್ಷಣೆ ಬೇಕು ಎಂದು ಹೇಳಿದರು.

ಮಹಾ ಕುಂಭಮೇಳ ಕುರಿತು ಮಾತನಾಡಿ, ನಾನು ಕೂಡ ಈ ಬಾರಿ ಕುಂಭಮೇಳಕ್ಕೆ ಹೋಗುತ್ತಿದ್ದೇನೆ. ಉತ್ತರಪ್ರದೇಶ ಸರ್ಕಾರದ ಹಿರಿಯ ಸಚಿವರು ನನಗೆ ಆಹ್ವಾನಿಸಿದ್ದಾರೆ‌. ಯಾವುದೇ ಧರ್ಮದವರು ಆಗಲಿ, ಎಲ್ಲರಿಗೂ ಒಂದೊಂದು ನಂಬಿಕೆ ಇರುತ್ತದೆ. ನಾನು ನನ್ನ ಕುಟುಂಬದೊಂದಿಗೆ ಕುಂಭಮೇಳಕ್ಕೆ ಭೇಟಿ ನೀಡಲಿದ್ದೇನೆ. ಆದರೆ, ಭೇಟಿಯ ನಿಖರವಾದ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com