ಮೈಸೂರು: ಕೇರಳ ಉದ್ಯಮಿ ಮೇಲೆ ಹಲ್ಲೆ; ಕಾರು, ನಗದು ದೋಚಿ ಪರಾರಿ
ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕೇರಳ ಉದ್ಯಮಿಯ ಮೇಲೆ ನಾಲ್ವರು ದರೋಡೆಕೋರರ ತಂಡವೊಂದು ಹಲ್ಲೆ ನಡೆಸಿ, ಅವರ ಕಾರು ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಹಗಲು ಹೊತ್ತಿನಲ್ಲಿ ಜನನಿಬಿಡ ರಸ್ತೆಯಲ್ಲಿ ಈ ಕೃತ್ಯ ನಡೆದಿದ್ದು, ಕೆಲವು ದಾರಿಹೋಕರು ತೆಗೆದ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಮತ್ತು ರಾಜ್ಯದಲ್ಲಿ ತೀವ್ರ ಕಳವಳ ಮೂಡಿಸಿದೆ.
ಪೊಲೀಸರ ಪ್ರಕಾರ, ಸೋಮವಾರ ಮೈಸೂರು ಜಿಲ್ಲೆಯ ಜಯಪುರ ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ನಾಲ್ವರು ಮುಸುಕುಧಾರಿಗಳ ತಂಡ, ಕೇರಳದ ಉದ್ಯಮಿ ಸೂಫಿ ಅವರಿದ್ದ ಫೋರ್ಡ್ ಇಕೊ ಸ್ಪೋರ್ಟ್ ಕಾರನ್ನು ಅಡ್ಡಗಟ್ಟಿದೆ. ದರೋಡೆಕೋರರು ಉದ್ಯಮಿ ಮತ್ತು ಚಾಲಕನನ್ನು ವಾಹನದಿಂದ ಹೊರಗೆಳೆದು, ಬೆದರಿಸಿ ತಳ್ಳಿದ್ದಾರೆ. ನಂತರ ಅವರ ಬಳಿ 1.5 ಲಕ್ಷ ರೂಪಾಯಿ ನಗದು ಹಣವಿದ್ದ ಬ್ಯಾಗನ್ನು ಕಿತ್ತುಕೊಂಡು ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ಕರ್ನಾಟಕದಿಂದ ಕೇರಳಕ್ಕೆ ಹೋಗುತ್ತಿದ್ದ ಸೂಫಿ ಅವರು ಘಟನೆಯ ನಂತರ ಪೊಲೀಸರನ್ನು ಸಂಪರ್ಕಿಸಿದ್ದು, ಜಯಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇರಳಕ್ಕೆ ಹೋಗುವ ಮಾರ್ಗದಲ್ಲಿರುವ ಎಲ್ಲಾ ಚೆಕ್ ಪೋಸ್ಟ್ಗಳಿಗೆ ಪೊಲೀಸರು ಮಾಹಿತಿ ನೀಡಿದ್ದು, ಸ್ಥಳಗಳಲ್ಲಿ ಬ್ಯಾರಿಕೇಡ್ಗಳನ್ನು ನಿರ್ಮಿಸಲಾಗಿದೆ.
ಬೀದರ್ ಮತ್ತು ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ ಮತ್ತು ಎಟಿಎಂ ವಾಹನದ ಸಿಬ್ಬಂದಿಯೊಬ್ಬರನ್ನು ಗುಂಡಿಕ್ಕೆ ಹತ್ಯೆ ಮಾಡಿದ ಪ್ರಕರಣಗಳ ಬೆನ್ನಲ್ಲೇ ಮತ್ತೊಂದು ದರೋಡೆ ಪ್ರಕರಣ ವರದಿಯಾಗಿದೆ.